ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಧಾನಿ ಮೋದಿ ಅವರನ್ನು ಬೈಯದಿದ್ದರೆ ಊಟ ರುಚಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿ (ಡಿ.10): ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಧಾನಿ ಮೋದಿ ಅವರನ್ನು ಬೈಯದಿದ್ದರೆ ಊಟ ರುಚಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಐಸಿಸ್ ಉಗ್ರರ ನಂಟು ಹೊಂದಿರುವ ಮೌಲ್ವಿಯೊಂದಿಗೆ ಮುಖ್ಯಮಂತ್ರಿ ವೇದಿಕೆ ಹಂಚಿಕೊಂಡಿದ್ದಾರೆಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಆರೋಪಕ್ಕೆ ಸಂಬಂಧಿಸಿ ಸೂಕ್ತ ತನಿಖೆ ನಡೆಸುವ ಬದಲು ಸಿದ್ದರಾಮಯ್ಯ ಇಂಥ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಯತ್ನಾಳ್‌ ಅವರು ತನ್ವೀರ್‌ ಪೀರಾ ಕುರಿತು ಯಾವ ಕಾರಣಕ್ಕೆ ಆ ರೀತಿ ಹೇಳಿಕೆ ನೀಡಿದ್ದಾರೆಂಬುದು ಮುಖ್ಯ. ಈ ಬಗ್ಗೆ ಮುಖ್ಯಮಂತ್ರಿಗಳು ಮೊದಲು ಸ್ಪಷ್ಟನೆ ನೀಡಬೇಕು. ಅವರ ಮನೆಗೆ ಹೋಗೋದು ಬೇಡ ಎಂದು ಪೊಲೀಸರು ಹೇಳಿದ್ದರ ಹೊರತಾಗಿಯೂ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದಾರೆಂದು ಯತ್ನಾಳ್‌ ತಿಳಿಸಿದ್ದಾರೆ ಎಂದರು. ಮೌಲ್ವಿ ತನ್ವೀರ್‌ ಹಾಶ್ಮಿ ಪೀರಾ ಪ್ರಧಾನಿ ಮೋದಿ ಜತೆಗಿರುವ ಭಾವಚಿತ್ರವನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ಆದರೆ, ಈ ವೇಳೆ ಹಶ್ಮಿ ಅವರಿಗಿರುವ ನಂಟಿನ ಕುರಿತು ಗುಪ್ತ ಮಾಹಿತಿ ಇತ್ತೋ? ಇಲ್ವೋ? ಎಂಬುದು ತಿಳಿದಿಲ್ಲ. ಸೂಕ್ತ ತನಿಖೆಯಾಗಿ ಮಾಹಿತಿ ಹೊರಬರಬೇಕಿದೆ ಎಂದರು.

ದೇಶದಲ್ಲಿ ಕಾಂಗ್ರೆಸ್ ಜನತೆಯ ವಿಶ್ವಾಸ ಕಳೆದುಕೊಂಡಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಬಿಜೆಪಿ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ: ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ನಾವು ಈ ಚುನಾವಣೆ ಗೆದ್ದಿದ್ದೇವೆ ಎಂದು ಹೇಳಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದಲ್ಲಿ ಜನತೆಯ ಆಶೀರ್ವಾದ ನಮಗೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಮತದಾರರು ಮನ್ನಣೆ ನೀಡಿದ್ದಾರೆ. ಈ ಯಶಸ್ಸಿನಿಂದಾಗಿ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸ ಇಮ್ಮಡಿಯಾಗಿದೆ. 

ಚುನಾವಣೆ ಗೆಲ್ಲಲು ಜನರ ಹೃದಯ ಗೆಲ್ಲಬೇಕು: ಪ್ರಧಾನಿ ಮೋದಿ

ಕಾಂಗ್ರೆಸಿನ ಸುಳ್ಳು ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ. ತೆಲಂಗಾಣ ಬಿಟ್ಟು ಉಳಿದ ಕಡೆ ಕಾಂಗ್ರೆಸ್ ನೆಲಕಚ್ಚಿದೆ. ಬಿಆರ್‌ಎಸ್ ದುರಾಡಳಿತದ ಪರಿಣಾಮ ಕಾಂಗ್ರೆಸ್ ಗೆಲ್ಲುವಂತಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ದುರಾಡಳಿತ ಬಗ್ಗೆ ಜನರಿಗೆ ತಿಳಿಸಿದ್ದೆವು. ಮಧ್ಯಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡಿದೆ ಎಂದಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ರಾಜಸ್ಥಾನದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಛತ್ತೀಸ್‌ಗಢದಲ್ಲಿ ಕೂಡ ಬಿಜೆಪಿ ಅದ್ಬುತ ಗೆಲುವು ದಾಖಲಿಸಿದೆ. ತೆಲಂಗಾಣದಲ್ಲಿ ಕಳೆದ ಬಾರಿ ಬಿಜೆಪಿ ಕೇವಲ ಒಂದು ಸ್ಥಾನ ಗೆದ್ದಿದೆ. ಆದರೆ, ಈ ಬಾರಿ ಅಲ್ಲಿಂದ ಎರಡಂಕಿಗೆ ಹೋಗಿದ್ದೇವೆ. ಇದರಿಂದ ಪ್ರಧಾನಿ ಮೋದಿ ಮೇಲಿನ ಜನರ ನಂಬಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಸ್ಪಷ್ಟಪಡಿಸುತ್ತದೆ.