ನಿಮ್ಮದು ನಮಗೆ ಗೊತ್ತಿದೆ. ನಮ್ಮದು ನಿಮಗೆ ಗೊತ್ತಿದೆ. ಪರಸ್ಪರ ನಾವು ಬಿಚ್ಚೋದೂ ಬೇಡ, ನೀವು ಬಿಚ್ಚೋದೂ ಬೇಡ. ಎಲ್ಲರೂ ತಜ್ಞರೇ, ನಿಮ್ಮ ಬಳಿ ಇರುವ ಕಲೆ ನನ್ನ ಬಳಿ ಇಲ್ಲ’ ಎಂದು ಹೇಳಿ ಮಾತಿಗೆ ತೆರೆ ಎಳೆದ ಬಸವರಾಜ ಬೊಮ್ಮಾಯಿ 

ವಿಧಾನಸಭೆ(ಫೆ.16): ಸಚಿವ ಎನ್‌. ಚೆಲುವರಾಯಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘ಆರ್ಥಿಕ ತಜ್ಞ-2’ ಎಂದು ಕಾಲೆಳೆದರೆ, ಬೊಮ್ಮಾಯಿ ಅವರು ಚೆಲುವರಾಯಸ್ವಾಮಿ ಅವರಿಗೆ ‘ಸಕಲ ಕಲಾ ವಲ್ಲಭ’ ಎಂದು ತಿವಿದಿದ್ದು ಸದನದಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪೂರಕವಾಗಿ ಮಾತನಾಡಲು ಬಸವರಾಜ ಬೊಮ್ಮಾಯಿ ಎದ್ದು ನಿಂತರು.

Add Asianetnews Kannada as a Preferred SourcegooglePreferred

ಈ ವೇಳೆ ಚಲುವರಾಯಸ್ವಾಮಿ, ‘ಆರ್ಥಿಕ ತಜ್ಞ -2’ ಎಂದು ಕಾಲೆಳೆದರು. ಇದಕ್ಕೆ ಪ್ರತಿಯಾಗಿ ನೀನು ‘ಸಕಲ ಕಲಾ ವಲ್ಲಭ’ ಬಿಡಪ್ಪ ಎಂದು ಬೊಮ್ಮಾಯಿ ತಿರುಗೇಟು ನೀಡಿದರು. ಚಲುವರಾಯಸ್ವಾಮಿ, ನಾನು ಆ ಅರ್ಥದಲ್ಲಿ ಹೇಳಿಲ್ಲ ಸರ್‌. ನಿಮಗೆ ಆರ್ಥಿಕತೆ ಬಗ್ಗೆ ಬಹಳಷ್ಟು ಜ್ಞಾನ ಇದೆ. ಇನ್ನೂ ಮಾತನಾಡಿಲ್ಲ. ಮಾತನಾಡಬೇಕು ಎಂಬ ಅರ್ಥದಲ್ಲಿ ಹೇಳಿದೆ ಎಂದು ಸಮಜಾಯಿಷಿ ನೀಡಿದರು. ಮಧ್ಯಪ್ರವೇಶಿಸಿದ ಜೆಡಿಎಸ್‌ನ ಜಿ.ಟಿ. ದೇವೇಗೌಡ, ‘ಈ ಸಕಲ ಕಲಾ ವಲ್ಲಭ ಎಂದರೇನು’ ಸ್ವಲ್ಪ ವಿವರಣೆ ಕೊಡಿ ಎಂದು ಕೇಳಿದರು.

ರಾಜ್ಯಪಾಲರಿಂದ ಸುಳ್ಳು ಹೇಳಿಸುವ ಕೆಲಸ ಮಾಡಿದ್ದಾರೆ: ಬಸವರಾಜ ಬೊಮ್ಮಾಯಿ

ನಾವು ಬಿಚ್ಚೋದು, ನೀವು ಬಿಚ್ಚೋದು ಬೇಡ:

ಬಸವರಾಜ ಬೊಮ್ಮಾಯಿ, ‘ನಿಮ್ಮದು ನಮಗೆ ಗೊತ್ತಿದೆ. ನಮ್ಮದು ನಿಮಗೆ ಗೊತ್ತಿದೆ. ಪರಸ್ಪರ ನಾವು ಬಿಚ್ಚೋದೂ ಬೇಡ, ನೀವು ಬಿಚ್ಚೋದೂ ಬೇಡ. ಎಲ್ಲರೂ ತಜ್ಞರೇ, ನಿಮ್ಮ ಬಳಿ ಇರುವ ಕಲೆ ನನ್ನ ಬಳಿ ಇಲ್ಲ’ ಎಂದು ಹೇಳಿ ಮಾತಿಗೆ ತೆರೆ ಎಳೆದರು.