ಎಲ್ಲ ಸರ್ಕಾರಗಳ ಅವಧಿಯಲ್ಲಿ ಆಗಿರುವ ಹಗರಣಗಳ ತನಿಖೆ ಮಾಡಿಸಿ. ಬೇಡ ಅಂದವರು ಯಾರು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದರು.

ದಾವಣಗೆರೆ (ಜು.22): ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ, ಹಗರಣಗಳ ತನಿಖೆ ಮಾಡಿಸುವುದಾಗಿ ಬ್ಲಾಕ್ ಮೇಲ್ ಮಾಡುವ ಬದಲು, ನಿಮ್ಮ ಕೈಯಲ್ಲೇ ಅಧಿಕಾರ ಇದೆ. ಎಲ್ಲ ಸರ್ಕಾರಗಳ ಅವಧಿಯಲ್ಲಿ ಆಗಿರುವ ಹಗರಣಗಳ ತನಿಖೆ ಮಾಡಿಸಿ. ಬೇಡ ಅಂದವರು ಯಾರು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದರು.

Add Asianetnews Kannada as a Preferred SourcegooglePreferred

ನಗರದ ಲೋಕೋಪಯೋಗಿ ಇಲಾಖೆಯ ಸರ್ಕ್ಯೂಟ್ ಹೌಸ್‌ನಲ್ಲಿ ಭಾನುವಾರ ಭದ್ರಾ ಅಚ್ಚುಕಟ್ಟು ರೈತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಹಗರಣದ ತನಿಖೆಯನ್ನು ಎಸ್‌ಐಟಿ ಮೂಲಕ ಮಾಡಿಸಿ, ಮಾಜಿ ಸಚಿವ ನಾಗೇಂದ್ರಗೆ ಕ್ಲೀನ್ ಚಿಟ್ ನೀಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಎಸ್ಐಟಿ ಅಂದ್ರೆ ಸಿದ್ದರಾಮಯ್ಯ ಇನ್‌ವೆಸ್ಟಿಗೇಷನ್ ಟೀಂ ಆಗಿದೆ. ಅಧಿಕಾರವೂ ನಿಮ್ಮ ಕೈಯಲ್ಲೇ ಇದ್ದು, ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ, ಹಗರಣದ ತನಿಖೆ ಮಾಡಿಸಿ ಎಂದು ತಿಳಿಸಿದರು.

5ನೇ ಬಾರಿ ದರ್ಶನ್ ಕಾಣಲು ಜೈಲಿಗೆ ಬಂದ ಮಡದಿ ವಿಜಯಲಕ್ಷ್ಮಿ, ದಿನಕರ್ ತೂಗುದೀಪ್ ಸಾಥ್!

ಅತಿವೃಷ್ಟಿಯಿಂದಾಗಿ ಸಂಪೂರ್ಣ ಮನೆಗಳು ಬಿದ್ದವರಿಗೆ ಮನೆಗೆ ನೆರವು, ಮನೆ ಬಾಡಿಗೆ ಕಟ್ಟಲು ಹಣ ನೀಡುತ್ತಿದ್ದೆವು. ಆದರೆ, ಸುಳ್ಳು ಪ್ರಚಾರ, ಭರವಸೆ, ಬೋಗಸ್ ಆಶ್ವಾಸನೆ ನೀಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಬಳಸಿಕೊಳ್ಳುತ್ತಿದೆ. ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರ ಹಿನ್ನೆಲೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯನವರೇ 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದಿರಿ. ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್‌ ಮೇಲೆ ಆರೋಪ ಮಾಡಿದ್ದಿರಿ. ಅರ್ಕಾವತಿ ಬಡಾವಣೆಯ ಹಗರಣದ ಕಡತವನ್ನು ಜಗದೀಶ ಶೆಟ್ಟರ್‌ ಕಡತವನ್ನು ತಿರಸ್ಕರಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ಸಾವಿರಾರು ಕೋಟಿ ರು.ಗಳ ಭ್ರಷ್ಟಾಚಾರದ ಅರ್ಕಾವತಿ ಕಡತಕ್ಕೆ ರೀಡೂ ಅಂತಾ ಮಾಡಿದ್ದೀರಿ. ಮಾಡಿಫೈ ಮಾಡಿ, ರೀಡೂ ಮಾಡಿದ್ದೂ ನೀವಲ್ಲವೇ? ಒಂದು ವೇಳೆ ಯಾವುದೇ ಸರ್ಕಾರದಲ್ಲಿ ಹಗರಣವಾಗಿದ್ದರೆ ತನಿಖೆ ಮಾಡಿಸಿ ಎಂದು ಹೇಳಿದರು.

ಜನವಿರೋಧಿ ಸರ್ಕಾರ ರಾಜ್ಯದಲ್ಲಿದೆ. 15 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದರೂ, ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತಿದ್ದ ಮೆಕ್ಕೆಜೋಳ ಸೇರಿದಂತೆ ಬಹುತೇಕ ಬೆಳೆಗಳಿಗೆ ಹಾನಿಯಾಗುತ್ತಿದೆ. ಬೆಳೆಹಾನಿ ಪರಿಹಾರ ನೀಡುವ ಕಡೆ ಸಿದ್ದರಾಮಯ್ಯ ಸರ್ಕಾರ ಗಮನಹರಿಸಲಿ. ಇಂದಿಗೂ ಬರ ಪರಿಹಾರವನ್ನೇ ಈ ಸರ್ಕಾರ ನೀಡಿಲ್ಲ ಎಂದು ರೇಣುಕಾಚಾರ್ಯ ದೂರಿದರು.

ಸಿಎಂ ಸಿದ್ದುಗೆ ಉಳಿದಿರೋದು ಗಾಳಿಗೆ, ಸತ್ತವರ ಮೇಲೆ ಟ್ಯಾಕ್ಸ್ ಹಾಕೋದು: ಸಿ.ಟಿ.ರವಿ ಆಕ್ರೋಶ

ಈ ಹಿಂದಿನಿಂದಲೂ ಕೇಂದ್ರದತ್ತ ಬೊಟ್ಟು ಮಾಡುವ ಕೆಲಸ ಸಿದ್ದರಾಮಯ್ಯ ಮಾಡುತ್ತಲೇ ಬಂದಿದ್ದಾರೆ. ಈಗಲೂ ಅದನ್ನೇ ಮಾಡದೇ, ರೈತರಿಗೆ ಬರ ಪರಿಹಾರ ನೀಡಲಿ. ಈಗ ಬೆಳೆ ಹಾನಿ ಪರಿಹಾರ ಕೊಡುವ ಮನಸ್ಸು ಮಾಡಲಿ. ಈ ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಮನೆ ಹಾನಿಯಾದರೆ ದುರಸ್ತಿಗೆ ₹50 ಸಾವಿರ, ಮನೆಗೆ ನೀರು ನುಗ್ಗಿದರೆ ₹10 ಸಾವಿರ, ಆಹಾರ ಧಾನ್ಯ ಇತರೆ ಖರೀದಿಗೆ ₹10 ಸಾವಿರ, ಮನೆ ಹಾನಿ ಪರಿಹಾರಕ್ಕೆ ಎ, ಬಿ. ಸಿ ಅಂತಾ ಮಾಡಿ, ₹5 ಲಕ್ಷ, ₹3 ಲಕ್ಷ ಹಾಗೂ ₹50 ಸಾವಿರ ನೀಡುತ್ತಿದ್ದೆವು. ಆದರೆ, ಕಾಂಗ್ರೆಸ್ ಸರ್ಕಾರ ₹5 ಸಾವಿರ, ₹6 ಸಾವಿರಗಳನ್ನು ಮಾತ್ರ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.