ತಮಿಳುನಾಡಿಗೆ ನೀರು ಬಿಟ್ಟರೆ ಕುಡಿಯುವ ನೀರಿನ ತತ್ವಾರ: ಶೋಭಾ ಕರಂದ್ಲಾಜೆ
ಐಎನ್ಡಿಐಎನಲ್ಲಿ ಇರುವ ಕಾರಣಕ್ಕೆ ಒತ್ತಡದಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ನಮ್ಮ ರಾಜ್ಯದ ರೈತರಷ್ಟೇ ಅಲ್ಲ. ಬೆಂಗಳೂರಿನ ಜನರಿಗೂ ಕುಡಿಯುವ ನೀರಿನ ತತ್ವಾರ ಎದುರಾಗಲಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಚಿಕ್ಕಮಗಳೂರು (ಆ.20): ಐಎನ್ಡಿಐಎನಲ್ಲಿ ಇರುವ ಕಾರಣಕ್ಕೆ ಒತ್ತಡದಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ನಮ್ಮ ರಾಜ್ಯದ ರೈತರಷ್ಟೇ ಅಲ್ಲ. ಬೆಂಗಳೂರಿನ ಜನರಿಗೂ ಕುಡಿಯುವ ನೀರಿನ ತತ್ವಾರ ಎದುರಾಗಲಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬಹಳಷ್ಟು ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಿದೆ. ರಾಜ್ಯದಿಂದ ತಮಿಳು ನಾಡಿಗೆ ಈ ವಿಚಾರವನ್ನು ಮನವರಿಕೆ ಮಾಡುವ ಕೆಲಸ ಆಗಬೇಕೆಂದರು.
ಈಗಾಗಲೇ ಬೆಂಗಳೂರಿಗೆ ಅಗತ್ಯವಿರುವಷ್ಟು ನೀರು ಪೂರೈಸಲಾಗುತ್ತಿಲ್ಲ. ಮತ್ತೊಂದೆಡೆ ವಿದ್ಯುತ್ ಇಲ್ಲ. ಈ ಎಲ್ಲಾ ಕಾರಣಕ್ಕೆ ಮಂಡ್ಯ, ಮೈಸೂರು ಭಾಗದ ಜನರಿಗೂ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸ್ಥಿತಿ ಸರ್ಕಾರವೇ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಜನರ ದೃಷ್ಟಿಯಿಂದ ಯೋಚಿಸುತ್ತಿಲ್ಲ. ಅವರೊಳಗಿನ ಗೊಂದಲದ ಕಾರಣಕ್ಕೆ ರಾಜ್ಯದ ಜನರ ಹಿತ ಬಲಿಕೊಡುವ ಕೆಲಸವಾಗುತ್ತಿದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುವುದನ್ನು ಗಟ್ಟಿಧ್ವನಿಯಲ್ಲಿ ಮನವರಿಕೆ ಮಾಡಬೇಕಿತ್ತು, ಅದು ಆಗುತ್ತಿಲ್ಲ ಎಂದರು.
ಇಡೀ ರಾಜ್ಯ ಬರಗಾಲಪೀಡಿತ ಎಂದು ಘೋಷಿಸಿ: ಸಂಸದ ರಾಘವೇಂದ್ರ ಆಗ್ರಹ
ವಿದ್ಯುತ್ ನಿರ್ವಹಣೆಯಲ್ಲಿ ವಿಫಲ: ವಿದ್ಯುತ್ ನಿರ್ವಹಣೆಯಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ. ಬರಗಾಲ ಬಂದಿರುವುದು ಇದೇ ಮೊದಲಲ್ಲ. ಹಿಂದೆ ನಮ್ಮ ಸರ್ಕಾರ ಇದ್ದಾಗಲೂ ಬರಗಾಲ ಬಂದಿತ್ತು. ಆಗಲೂ ನಾವು ವಿದ್ಯುತ್ ಸಮಸ್ಯೆಯನ್ನು ನಿಭಾಯಿಸಿದ್ದೇವೆ. ಇಂದಿನಷ್ಟುಬೇರೆ ಬೇರೆ ವಿದ್ಯುತ್ ಮೂಲಗಳು ಇರಲಿಲ್ಲ. ಕೇವಲ ಬಳ್ಳಾರಿ ಮತ್ತು ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಜಲ ವಿದ್ಯುತ್ ಮೇಲೆ ಅವಲಂಭಿತವಾಗಿದ್ದೆವು. ಅಂತಹ ಸಂದರ್ಭದಲ್ಲೂ ನಾವು ಗುಜರಾತ್, ಛತ್ತೀಸ್ಗಡಗಳಿಂದ ವಿದ್ಯುತ್ ತಂದಿದ್ದೆವು. ಗ್ರಿಡ್ ಕೊರತೆ ಇದ್ದರೂ ಅದನ್ನೂ ನಾವು ನೀಗಿಸಿದ್ದೇವೆ ಎಂದು ಹೇಳಿದರು.
ಈಗ ಸೋಲಾರ್, ವಿಂಡ್ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಇಷ್ಟೆಲ್ಲಾ ಇದ್ದರೂ ಪವರ್ ಕಟ್ ಮಾಡಲಾಗುತ್ತಿದೆ. ಸರಿಯಾಗಿ ಏನಾಗುತ್ತಿದೆ ಎನ್ನುವ ಮಾಹಿತಿ ಕೊಡದ ದುಸ್ಥಿತಿಗೆ ಸರ್ಕಾರ ತಲುಪಿದೆ ಎಂದು ದೂರಿದರು. ಮುಂದಿನ ಮೇ ವರೆಗೆ ಹೇಗೆ ವಿದ್ಯುತ್ ನಿರ್ವಹಣೆ ಮಾಡುತ್ತೀರಿ. ಎಷ್ಟುಉತ್ಪಾದನೆ ಇದೆ. ಎಷ್ಟುಹೆಚ್ಚುವರಿ ಬೇಕಾಗಬಹುದು, ಕೇಂದ್ರದ ಗ್ರಿಡ್ನಿಂದ ಎಷ್ಟುಪೂರೈಕೆಯಾಗುತ್ತಿದೆ ಎಲ್ಲವನ್ನೂ ಒಳಗೊಂಡ ಶ್ವೇತಪತ್ರವನ್ನು ಜನರ ಮುಂದೆ ಇಡಬೇಕು ಎಂದು ಆಗ್ರಹಿಸಿದರು. ಹಿಂದೂ ದೇವಸ್ಥಾನಗಳು, ಮಠಮಂದಿರಗಳಿಗೆ ಸಂಬಂಧಿಸಿದ ಫೈಲ್ಗಳು ಸರ್ಕಾರಕ್ಕೆ ಹೋದರೆ ಹಿಂದಕ್ಕೆ ಬರುತ್ತಿವೆ.
ರಾಜಕಾರಣದಲ್ಲಿ ಹೊಸ ಸಂಸ್ಕೃತಿ, ಸಂಪ್ರದಾಯ ಬೆಳೆಯಬೇಕು: ಕಾಗೋಡು ತಿಮ್ಮಪ್ಪ
ಮಠ ಮಾನ್ಯಗಳು ಒಳ್ಳೆ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ಅವುಗಳಿಗೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ ಎಂದರು. ಆರ್ಥಿಕ ಇಲಾಖೆಯ ಅಧಿಕಾರಿಗಳು ಹಿಂದೂಗಳು, ಮಠ ಮಂದಿರಗಳ ಫೈಲ್ಗಳನ್ನು ತಡೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕುಮ್ಮಕ್ಕು ಕೊಡುತ್ತಿರುವವರು ಯಾರು ? ಮುಖ್ಯಮಂತ್ರಿಗಳೇ ನಿರ್ದೇಶನ ನೀಡಿದ್ದಾರಾ ಎನ್ನುವ ಗೊಂದಲ ಕಾಡುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.