* ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಸಿಎಂ ಕುರ್ಚಿಗಾಗಿ ಭರ್ಜರಿ ಪೈಪೋಟಿ * ನನಗೂ ಸಿಎಂ ಆಗಬೇಕು ಎಂಬ ಆಸೆಯಿದೆ  ಎಂದ ಸಚಿವ* ಸಿಎಂ ಆಗುವ ಮನದಾಳವನ್ನು ಬಿಚ್ಚಿಟ್ಟ ಮಂತ್ರಿ

ಬೆಂಗಳೂರು, (ಜೂನ್.25): ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಸಿಎಂ ಕುರ್ಚಿಗಾಗಿ ಭರ್ಜರಿ ಪೈಪೋಟಿ ನಡೆದಿದೆ. ಒಂದು ಕಡೆ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಕೂಗು ಎದ್ದಿದ್ದರೆ, ಮತ್ತೊಂದೆಡೆ ಬಿಜೆಪಿಯಲ್ಲಿ ನಾಯಕತ್ವ ಚರ್ಚೆ ಮಧ್ಯೆ ಸಚಿವರೊಬ್ಬರು ಸಿಎಂ ಆಗುವ ಆಸೆ ವ್ಯಕ್ತಡಿಸಿದ್ದಾರೆ.

ಹೌದು...ನನಗೂ ಸಿಎಂ ಆಗಬೇಕು ಎಂಬ ಆಸೆಯಿದೆ ಎಂದು ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

'ರಮೇಶ್ ಜಾರಕಿಹೋಳಿ ರಾಜೀನಾಮೆ: ಆತುರದ ನಿರ್ಧಾರದ ಬೇಡ ಎಂದಿದ್ದೇವೆ'

ರಾಜಕೀಯದಲ್ಲಿ ಎಲ್ಲರಿಗೂ ಸಿಎಂ ಆಗುವ ಆಸೆ ಇದ್ದೇ ಇದೆ. ಅದೇ ರೀತಿ ಮುಖ್ಯಮಂತ್ರಿ ಪದವಿಗೆ ಏರುವ ಆಸೆ ಸಹಜವಾಗಿ ನನಗೂ ಇದೆ. ಸಿಎಂ ಹುದ್ದೆಯನ್ನು ಯಡಿಯೂರಪ್ಪ ಅವರು ಬಿಟ್ಟುಕೊಟ್ಟರೇ ನನಗೂ ಸಿಎಂ ಆಗೋ ಆಸೆ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ನಲ್ಲಿನ ಮುಂದಿನ ಸಿಎಂ ಚರ್ಚೆಯನ್ನು ವ್ಯಂಗ್ಯವಾಡಿದರು.

ಕಾಂಗ್ರೆಸ್​ ಪಕ್ಷಕ್ಕೆ ಬಹುಮತ ಬಂದ ನಂತರ ಮುಂದಿನ ಸಿಎಂ ಅಭ್ಯರ್ಥಿಯ ಬಗ್ಗೆ ಮಾತಾಡಬೇಕು. ಆದರೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಯುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಆಸೆಯಿದೆ. ಆದರೆ ಈಗಿನ್ನೂ ಚುನಾವಣೆ ನಡೆದಿಲ್ಲ, ಶಾಸಕರು ಆಯ್ಕೆಯಾಗಿಲ್ಲ. ಬಹುಮತವೂ ಇಲ್ಲ. ಅದಕ್ಕೂ ಮುಂಚೆ ಸಿಎಂ ಪದವಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.