30 ವರ್ಷಗಳಲ್ಲಿ 6 ಚುನಾವಣೆ ಎದುರಿಸಿದ್ದೇನೆ. ಎಂದಿಗೂ ಮತದಾರರಿಗೆ ದುಡ್ಡು ಹಂಚಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹಣ, ಕುಕ್ಕರ್‌ ಕೊಟ್ಟಿದ್ದಾರೆ. ಆದರೆ, ಬಿಜೆಪಿ ಹೆಸರು ಹೇಳಿಕೊಳ್ಳುವ ವ್ಯಕ್ತಿಗಳು ನಮ್ಮ ಕ್ಷೇತ್ರದಲ್ಲಿ ಹತಾಶರಾಗಿ ಹಣ ಹಂಚಿದ್ದಾರೆ. ಕ್ಷೇತ್ರದ ಸ್ಲಂ ಭಾಗಗಳಲ್ಲಿ 500, 1000 ದುಡ್ಡು ಹಂಚಿದ್ದಾರೆ. ಈ ಹಣದ ಬಲದ ಮೇಲೆ ಗೆಲ್ಲುವುದಾದರೆ ಬಹಳಷ್ಟು ಶ್ರೀಮಂತರೇ ಗೆಲ್ಲುತ್ತಿದ್ದರು. ನಮ್ಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣ ಹಂಚಿರುವುದು ನನಗೆ ನೋವುಂಟು ಮಾಡಿದೆ ಎಂದ ಜಗದೀಶ ಶೆಟ್ಟರ್‌

ಹುಬ್ಬಳ್ಳಿ(ಮೇ.12):  ಈ ಚುನಾವಣೆಯಲ್ಲಿ ನಾನು ಲೆಕ್ಕಾಚಾರ ಮಾಡಿದ್ದಕ್ಕಿಂತ ದ್ವಿಗುಣ ಬೆಂಬಲ ಸಿಕ್ಕಿದ್ದು, ಗೆಲುವಿನ ಅಂತರ ಕಳೆದ ಬಾರಿಗಿಂತ ಹೆಚ್ಚಾಗಲಿದೆ ಎಂದು ಹು-ಧಾ ಸೆಂಟ್ರಲ್‌ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ್‌ ವಿಶ್ವಾಸ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 30 ವರ್ಷಗಳಲ್ಲಿ 6 ಚುನಾವಣೆ ಎದುರಿಸಿದ್ದೇನೆ. ಎಂದಿಗೂ ಮತದಾರರಿಗೆ ದುಡ್ಡು ಹಂಚಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹಣ, ಕುಕ್ಕರ್‌ ಕೊಟ್ಟಿದ್ದಾರೆ. ಆದರೆ, ಬಿಜೆಪಿ ಹೆಸರು ಹೇಳಿಕೊಳ್ಳುವ ವ್ಯಕ್ತಿಗಳು ನಮ್ಮ ಕ್ಷೇತ್ರದಲ್ಲಿ ಹತಾಶರಾಗಿ ಹಣ ಹಂಚಿದ್ದಾರೆ. ಕ್ಷೇತ್ರದ ಸ್ಲಂ ಭಾಗಗಳಲ್ಲಿ .500, .1000 ದುಡ್ಡು ಹಂಚಿದ್ದಾರೆ. ಈ ಹಣದ ಬಲದ ಮೇಲೆ ಗೆಲ್ಲುವುದಾದರೆ ಬಹಳಷ್ಟು ಶ್ರೀಮಂತರೇ ಗೆಲ್ಲುತ್ತಿದ್ದರು. ನಮ್ಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣ ಹಂಚಿರುವುದು ನನಗೆ ನೋವುಂಟು ಮಾಡಿದೆ ಎಂದರು.

ಜೋಶಿ 4 ಬಾರಿ ಸಂಸದ, ಮಂತ್ರಿಯಾಗಿದ್ದಾರೆ ರಾಜಕಾರಣ ಬಿಡಲಿ: ಜಗದೀಶ್‌ ಶೆಟ್ಟರ್‌ ಪ್ರಶ್ನೆ

ಮೀಸಲಾತಿ ಅನುಷ್ಠಾನ ಮಾಡಲ್ಲ ಎಂದು ಕೋರ್ಟಿಗೆ ಹೇಳಿದರು. ಇತ್ತ ಮೀಸಲಾತಿ ನೀಡಿದ್ದೇವೆ ಎಂದು ಬಿಜೆಪಿ ಸಾಮಾನ್ಯ ಜನರಿಗೆ ಮೋಸ ಮಾಡಿದೆ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿದ್ದರೂ ಇಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ. ಕೈಗಾರಿಕೆಗೆ 2 ಎಕರೆ ಜಮೀನು ನೀಡಲು ಆಗಲಿಲ್ಲ. ಮುಖ್ಯಮಂತ್ರಿಗೆ ವಿಲ್‌ ಪವರ್‌ ಮುಖ್ಯ, ಕೆಲಸ ಮಾಡದ ಸಿಎಂ ಯಾಕಿರಬೇಕು? ಬೊಮ್ಮಾಯಿಗೆ ಸ್ವಯಂ ತೀರ್ಮಾನ ಶಕ್ತಿ ಇಲ್ಲ ಎಂದು ಶೆಟ್ಟರ್‌ ಆರೋಪಿಸಿದರು.

ಬಿಜೆಪಿ ಕೆಲವರ ಹಿಡಿತದಲ್ಲಿ:

ಶಂಕರ ಪಾಟೀಲ್‌ ಮುನೇನಕೊಪ್ಪ ಅವರನ್ನು ಸಚಿವರಾಗಿ ಮಾಡಲು ನಾನು ಲಾಬಿ ಮಾಡಿದ್ದು ನಿಜ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅರವಿಂದ ಬೆಲ್ಲದ ಪರ ಪ್ರಹ್ಲಾದ ಜೋಶಿ ಲಾಬಿ ಮಾಡಿದ್ದರು. ಇದನ್ನು ಜೋಶಿ ಅರಿತುಕೊಳ್ಳಲಿ. ನಾನು ಟೀಕಿಸಿದ್ದು ಬಿ.ಎಲ…. ಸಂತೋಷ್‌, ಪ್ರಹ್ಲಾದ್‌ ಜೋಶಿ ಅವರನ್ನು, ಯಾವುದೇ ಸಮುದಾಯಕ್ಕಾಗಲಿ, ಇಲ್ಲವೇ ಇಡೀ ಬ್ರಾಹ್ಮಣ ಸಮಾಜಕ್ಕೆ ನಾನು ಎಂದಿಗೂ ಟೀಕೆ ಮಾಡಿಲ್ಲ. ಬ್ರಾಹ್ಮಣರು ನನಗೆ ಅತೀ ಹೆಚ್ಚು ಮತ ಹಾಕಿದ್ದು, ಈ ಒಳ ಹೊಡೆತದ ಬಗ್ಗೆ ಬಿಜೆಪಿಗರು ತಿಳಿದುಕೊಳ್ಳಲಿ. ಬಿಜೆಪಿ ಕೆಲವರ ಹಿಡಿತದಲ್ಲಿದೆ. ಹೀಗಾಗಿ, ಈ ಪರಿಸ್ಥಿತಿ ಬಂದಿದೆ ಎಂದರು.

ಕಾಂಗ್ರೆಸ್‌ನ ಶೆಟ್ಟರ್‌ ಗೆಲ್ತಾರೆ: ಬೀಗರ ಪರ ಬಿಜೆಪಿ ಸಂಸದೆ ಅಂಗಡಿ ಬ್ಯಾಟಿಂಗ್!

15-20 ಕ್ಷೇತ್ರಗಳಲ್ಲಿ ಪ್ರಭಾವ:

ಜೋಶಿ ಅವರೇ ನಿಮ್ಮನ್ನು ಸಚಿವರನ್ನಾಗಿಸಿದ್ದರಂತೆ? ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್‌, ಏಣಿ ಹತ್ತಿ ನಿಚ್ಚಣಿಕೆ ತೆಗೆದರು ಎಂಬ ಮಾತಿದೆ. ಇದು ಹಾಗೆ ಇದೆ. ನನ್ನನ್ನು ಹಿರಿತನದ ಮೇಲೆ ಮಂತ್ರಿ ಮಾಡಿದ್ದರೆ ಹೊರತು ಇವರ ಶ್ರಮ ಏನೂ ಇರಲಿಲ್ಲ. ಈಗ ಚುನಾವಣೆಯ ವೇಳೆ ಈ ರೀತಿಯ ಸುಳ್ಳು ಹೇಳುತ್ತಿದ್ದಾರೆ. ನನಗೆ ಬಿಜೆಪಿ ಟಿಕೆಟ್‌ ಕೊಟ್ಟು ಶಾಸಕನನ್ನು ಮಾಡಿದ್ದರೆ ಎಲ್ಲವೂ ಸರಿಯಿರುತ್ತಿತ್ತು. ನನಗೆ ಟಿಕೆಟ್‌ ತಪ್ಪಿದ್ದು 15-20 ಕ್ಷೇತ್ರಗಳಲ್ಲಿ ಎಫೆಕ್ಟ್ ಆಗಿದೆ ಎಂದರು.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರು ಸಂಘಟಿತವಾಗಿ ಸರ್ಕಾರದ ವೈಫಲ್ಯ ಜನರಿಗೆ ಹೇಳುವ ಕೆಲಸ ಮಾಡಿದರು ಎಂದು ಶೆಟ್ಟರ್‌ ಹೇಳಿದರು. ಲಿಂಗಾಯತರಿಗೆ ಬಿಜೆಪಿ ಅನ್ಯಾಯವಾಗಿದೆ ಎನ್ನುವ ವಿಚಾರಕ್ಕೆ ಉತ್ತರಿಸಿದ ಶೆಟ್ಟರ್‌, ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ಮಾತನಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು