ತಮ್ಮ ಮುಂದಿನ ಚುನಾವಣಾ ಕ್ಷೇತ್ರದ ಬಗ್ಗೆ ತಿಳಿಸಿದ ಸಿದ್ದರಾಮಯ್ಯ
- ತಮ್ಮ ಮುಂದಿನ ಚುನಾವಣಾ ಕ್ಷೇತ್ರದ ಬಗ್ಗೆ ತಿಳಿಸಿದ ಸಿದ್ದರಾಮಯ್ಯ
- ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಇರುವುದು ನಿಜ
- ಆದರೆ ಸದ್ಯ ತಾವು ಶಾಸಕರಾಗಿರುವ ಕ್ಷೇತ್ರದಿಂದಲೇ ಸ್ಪರ್ಧೆ
ಬಾಗಲಕೋಟೆ/ ಹುಬ್ಬಳ್ಳಿ(ಜು.13): ನಾನು ಬಾದಾಮಿಯಿಂದ ಶಾಸಕನಾಗಿರುವೆ. ಮುಂದೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆ ಮತ್ತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಇರುವುದು ನಿಜ. ಹುಬ್ಬಳ್ಳಿ ಧಾರವಾಡದಿಂದಲೂ ಬನ್ನಿ ಎನ್ನುತ್ತಾರೆ. ಹಾಗೆಂದು ಬರಲು ಸಾಧ್ಯವೆ? ನನ್ನನ್ನು ಬಾದಾಮಿ ಜನ ಗೆಲ್ಲಿಸಿದ್ದಾರೆ. ಹಾಗಾಗಿ ಅಲ್ಲಿಂದಲೆ ಸ್ಪರ್ಧಿಸುತ್ತೇನೆ. ಮುಂದಿನ ವಿಧಾನಸಭೆಗೆ ಇನ್ನೂ ಒಂದು ವರ್ಷ 10 ತಿಂಗಳು ಸಮಯವಿದೆ. ಬಾದಾಮಿ ಜನರು ಬಾದಾಮಿಯಿಂದಲೇ ನಿಲ್ಲಬೇಕು ಎಂದು ಬಹಳ ಅಭಿಮಾನದಿಂದ ಕೇಳುತ್ತಿದ್ದಾರೆ. ಅವರ ಆಸೆಗೆ ತಣ್ಣೀರು ಎರಚಲು ಸಿದ್ಧನಿಲ್ಲ. ಹೀಗಾಗಿ ಬಾದಾಮಿಯಿಂದಲೇ ಮತ್ತೆ ಸ್ಪರ್ಧಿಸುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.
'ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸಲಿ'
ವಾಗ್ದಾಳಿ: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆಡಳಿತದಲ್ಲಿ ಪಾರದರ್ಶಕತೆ ಇಲ್ಲ. ಮಾಲಿನ್ಯ ಮಂಡಳಿಯ ಅಧಿಕಾರಿಯನ್ನು ನೇಮಕ ಮಾಡಲು 16 ಕೋಟಿ ರು. ಡೀಲಿಂಗ್ ನಡೆದಿದ್ದು ಸುಳ್ಳಾ? 9.50 ಕೋಟಿ ನೀಡಿದ್ದಾಗಿ ಹೇಳಿದ್ದು ಸುಳ್ಳೆ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೆಚ್ಚಿದ ಕುತೂಹಲ,ಕ್ಷೇತ್ರದ ಸುಳಿವು ಬಿಟ್ಟುಕೊಟ್ಟ ಸಿದ್ದು..!
ಓರ್ವ ಸಂಸದೆಯಾಗಿ ಸುಮಲತಾ ಅವರು ಅಕ್ರಮ ಮೈನಿಂಗ್ ಕುರಿತು ಆರೋಪ ಮಾಡಿದ ಸಂದರ್ಭದಲ್ಲಿ ಸರ್ಕಾರ ಆರೋಪದ ಕುರಿತು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಿತ್ತು. ಅಕ್ರಮ ಮೈನಿಂಗ್ ಅನ್ನು ನಿಲ್ಲಿಸಬೇಕಾದದ್ದು ಸರ್ಕಾರದ ಜವಾಬ್ದಾರಿಯಾಗಿದೆ. ಅಕ್ರಮ ಮೈನಿಂಗ್ ರಾಜ್ಯದ ಎಲ್ಲೆಡೆ ನಡೆಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಈಶ್ವರಪ್ಪ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿಯೂ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕುರ್ಚಿ ಉಳಿಸಿಕೊಳ್ಳುವುದು ಹಾಗೂ ಅವರ ಮಗನಿಗೆ ದುಡ್ಡು ಹೊಡೆಯುವ ಕೆಲಸವೇ ಮುಖ್ಯವಾಗಿದೆ ಎಂದು ದೂರಿದರು.