ನಾನು ಸಿಎಂ ಆಗೇ ಆಗುತ್ತೇನೆ: ಉಮೇಶ್‌ ಕತ್ತಿ ಪುನರುಚ್ಚಾರ| ಕತ್ತಿ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ಸಮರ್ಥನೆ| ಸಿಎಂ ಜೊತೆ ಯಾವುದೇ ಮುನಿಸಿಲ್ಲವೆಂದ ಕತ್ತಿ

ಬೆಳಗಾವಿ[ಮಾ.16]: ನನಗೆ ಇನ್ನೂ 20 ವರ್ಷ ರಾಜಕೀಯ ಭವಿಷ್ಯ ಇದೆ. ಮುಂದೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ, ಹುಕ್ಕೇರಿ ಶಾಸಕ ಉಮೇಶ್‌ ಕತ್ತಿ ಪನರುಚ್ಚರಿಸಿದ್ದಾರೆ. ಅದೇ ರೀತಿ ಕತ್ತಿಯವರ ಸಿಎಂ ಹೇಳಿಕೆಯನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡ ಘಟನೆ ಭಾನುವಾರ ಬೆಳಗಾವಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್‌ ಕತ್ತಿ, ನನಗೆ ಈಗ 60 ವರ್ಷ ಇನ್ನೂ 20 ವರ್ಷ ರಾಜಕಾರಣ ಮಾಡುತ್ತೇನೆ. ಬಿಜೆಪಿಯಲ್ಲಿ ಸಿಎಂ ಆಗಲು 75 ವರ್ಷದ ವರಗೆಗೆ ಅವಕಾಶ ಇದೆ. 80 ವರ್ಷ ಅವಕಾಶÜ ಮಾಡಿದರೆ ಅಲ್ಲೇ ಇರುತ್ತೇನೆ. ಆದರೂ ಒಂದು ದಿನ ಮಂತ್ರಿ ಆಗೋದು, ಮುಖ್ಯಮಂತ್ರಿ ಆಗೋದು ನಿಶ್ಚಿತ ಎಂದರು.

ವಿಧಾನ ಪರಿಷತ್‌ನ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಪುತ್ರಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂ ಬೆಳಗಾವಿ ನಗರಕ್ಕೆ ಬರುತ್ತಿದ್ದಂತೆ ಶಾಸಕ ಉಮೇಶ ಕತ್ತಿ ಹಾಗೂ ಅವರ ಪತ್ನಿ ವಿವಾಹ ಸಮಾರಂಭದಿಂದ ತೆರಳಿದರು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ, ರಾಜ್ಯದ ಯಡಿಯೂರಪ್ಪ ಅವರು ನನ್ನ ನಾಯಕರು, ಇನ್ನೊಂದು ಮದುವೆ ಇದೆ ಅದಕ್ಕೆ ಬೇಗ ಹೋಗುತ್ತಿದ್ದೇನೆ. ಸಿಎಂ ಜೊತೆ ಮುನಿಸಿಕೊಂಡಿದ್ದೇನೆ ಎಂಬುದು ಮಾಧ್ಯಮಗಳ ಅನಿಸಿಕೆಯಾಗಿದೆ. ಅವರ ಜೊತೆ ಮುನಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಶಾಸಕ ಉಮೇಶ ಕತ್ತಿ ಬರುವ ದಿನಗಳಲ್ಲಿ ಸಿಎಂ ಆಗುತ್ತೇನೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ ಸವದಿ, ನನ್ನ ಮತ್ತು ಉಮೇಶ್‌ ಕತ್ತಿ ಅವರ ನಡುವೆ ಉತ್ತಮ ಸಂಬಂಧ ಇದೆ. ಅವರು ಮುಖ್ಯಮಂತ್ರಿಯಾದರೆ ತಪ್ಪೇನು. ಅವರು ನಮ್ಮ ಪಕ್ಕದ ಕ್ಷೇತ್ರದವರು, ನಮ್ಮ ಸ್ನೇಹಿತರೆ, ನಾನು ಅವರು 25 ವರ್ಷ ಸೇರಿ ರಾಜಕೀಯ ಮಾಡಿದ್ದೇವೆ ಎಂದು ತಿಳಿಸಿದರು.