Asianet Suvarna News Asianet Suvarna News

MLC Election: ಜೆಡಿಎಸ್‌ ಮೇಲೆ ಬಿಜೆಪಿ, ಕಾಂಗ್ರೆಸ್‌ ಕಣ್ಣು: ಮೈತ್ರಿ ಬಗ್ಗೆ HDK ಹೇಳಿದ್ದಿಷ್ಟು

*   ಬಿಜೆಪಿ-ಜೆಡಿಎಸ್‌ ಮೈತ್ರಿ 2 ದಿನದಲ್ಲಿ ಚಿತ್ರಣ?
*   ಮೇಲ್ಮನೆ ಚುನಾವಣೆ ಕಣ ಅಂತಿಮಗೊಳ್ಳುತ್ತಿದ್ದಂತೆ ಗರಿಗೆದರಿದ ಚಟುವಟಿಕೆ
*   ಬೆಂಬಲ ಬಗ್ಗೆ 2 ದಿನದಲ್ಲಿ ಎಚ್‌ಡಿಕೆ ಪ್ರತಿಕ್ರಿಯಿಸಬಹುದು: ಬಿಎಸ್‌ವೈ
 

I Have Never Said that Support to BJP in Vidhana Parishat Election Says HD Kumarawamy grg
Author
Bengaluru, First Published Nov 28, 2021, 8:54 AM IST

ಶಿವಮೊಗ್ಗ(ನ.28):  ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಕುರಿತು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ಇನ್ನೆರಡು ದಿನದಲ್ಲಿ ಪ್ರತಿಕ್ರಿಯೆ ನೀಡಬಹುದು. ಕಾದು ನೋಡೋಣ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಹೇಳಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಜೆಡಿಎಸ್‌ನೊಂದಿಗೆ(JDS) ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ನಾನೇ ಪ್ರಸ್ತಾಪ ಮಾಡಿದ್ದೇನೆ. ಕುಮಾರಸ್ವಾಮಿ(HD Kumaraswamy) ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡೋಣ ಎಂದರು.

ಪರಿಷತ್‌ ಚುನಾವಣೆಯಲ್ಲಿ ಬಜೆಪಿ(BJP) ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಅದರಲ್ಲಿ ಅನುಮಾನ ಬೇಡ. 20 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅದರಲ್ಲಿ ಕನಿಷ್ಠ 15 ಸ್ಥಾನದಲ್ಲಿ ನಾವು ಗೆಲುವು ಸಾಧಿಸುವುದು ನಿಶ್ಚಿತ. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಬಿಜೆಪಿ ಪರವಾದ ಅಭಿಪ್ರಾಯ ಕೇಳಿಬರುತ್ತಿದೆ. ಅಲ್ಲದೆ, ಸರ್ಕಾರದ(Government of Karnataka) ಅಭಿವೃದ್ಧಿ ಕೆಲಸವನ್ನು ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಇದೆಲ್ಲವೂ ನಮಗೆ ವರದಾನವಾಗಲಿದೆ ಎಂದರು.

40% Commission: ನಮ್ಮ ಕಾಲದ್ದೂ ತನಿಖೆ ಆಗ್ಲಿ: ಡಿಕೆಶಿ, ಸಿದ್ದು!

ಬಿಜೆಪಿಗೆ ಬೆಂಬಲ ಜೆಡಿಎಸ್‌ಗೆ ಬಿಟ್ಟದ್ದು: ಡಿಕೆಶಿ

‘ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಆಯಾ ಪಕ್ಷಗಳ ತತ್ವ, ಸಿದ್ಧಾಂತದ ಪ್ರಕಾರ ಅವರು ಯಾರಿಗೆ ಬೆಂಬಲ ನೀಡಬೇಕು ಎಂಬುದು ಅವರಿಗೆ ಬಿಟ್ಟವಿಚಾರ. ಅವರು ಏನಾದರೂ ಮಾಡಿಕೊಳ್ಳಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಹೇಳಿದ್ದಾರೆ.

ಬಿಜೆಪಿಯವರು ನಮ್ಮ ಬೆಂಬಲ ಕೇಳಿದ್ದಾರೆ ಎಂದಿರುವ ಜೆಡಿಎಸ್‌ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಆಯಾ ಪಕ್ಷಗಳ ತತ್ವ, ಸಿದ್ಧಾಂತ. ಯಾರಿಗೆ ಬೆಂಬಲ ನೀಡಬೇಕು ಎಂಬುದು ಅವರಿಗೇ ಬಿಟ್ಟಿದ್ದು. ಅವರು ಏನಾದರೂ ಮಾಡಿಕೊಳ್ಳಲಿ ಎಂದು ತಿಳಿಸಿದರು.

ಎಲ್ಲ ಪಕ್ಷದವರು ಅಭ್ಯರ್ಥಿಗಳನ್ನು ಹಾಕಿದ್ದೇವೆ. ನಾವು 25ಕ್ಕೆ 25 ಅಥವಾ 20 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ನಮ್ಮ ಶಕ್ತಿ ಮೇಲೆ ಅಭ್ಯರ್ಥಿಗಳನ್ನು(Candidates) ಹಾಕಿದ್ದೇವೆ. ಹೆಚ್ಚು ಸಂಖ್ಯೆಗಳನ್ನು ಗೆಲ್ಲುತ್ತೇವೆ ಎಂದಷ್ಟೇ ಹೇಳಬಲ್ಲೆ ಎಂದರು.

ಹಿಂದೆ ಬಿಜೆಪಿ ರಾಷ್ಟ್ರೀಯ ನಾಯಕ ಅರುಣ್‌ಸಿಂಗ್‌(Arun Singh) ಏನು ಹೇಳಿದ್ದರು. ಇದೀಗ ಮೊನ್ನೆ ಯಡಿಯೂರಪ್ಪ ಏನು ಹೇಳಿದ್ದಾರೆ. ಬೊಮ್ಮಾಯಿ ಸಂಪುಟದ ಸಚಿವರು ಏನೇನು ಮಾತನಾಡುತ್ತಿದ್ದಾರೆ ಎಂಬುದನ್ನು ಜನರು ನೋಡುತ್ತಿದ್ದಾರೆ. ಇದರ ಮೇಲೂ ಅವರು (ಬಿಜೆಪಿ-ಜೆಡಿಎಸ್‌) ಹೊಂದಾಣಿಕೆ ಮಾಡಿಕೊಂಡರೆ ಅದು ಅವರ ಸಿದ್ಧಾಂತ ತೋರಿಸುತ್ತದೆ ಎಂದರು.

Karnataka Politics: ಗುಂಡಿನಿಂದ ಬಾಂಬ್‌ಗೆ ಬಡ್ತಿ ಕಾಂಗ್ರೆಸ್‌ ಸಾಧನೆ: ಕಟೀಲ್‌

ಬಿಜೆಪಿಯವರು 15 ಮಾತ್ರವಲ್ಲ, 25 ಸ್ಥಾನ​ಗ​ಳನ್ನೂ ಗೆಲ್ಲ​ಬ​ಹುದು. ನಾವು ಇಷ್ಟುಗೆಲ್ಲುತ್ತೇವೆಂದು ಈಗಲೇ ಹೇಳುವ ಬಿಜೆಪಿ ನಾಯಕರು, ಧೈರ್ಯವಿದ್ದರೆ ತಮಗೆ ಯಾವ ಹತ್ತು ಕ್ಷೇತ್ರಗಳಲ್ಲಿ ಸೋಲಾಗುತ್ತದೆ ಎಂಬುದನ್ನು ಈಗಲೇ ಒಪ್ಪಿಕೊಳ್ಳಲಿ. ಸೋಲುವ ಹತ್ತು ಕ್ಷೇತ್ರಗಳು ಯಾವುವು ಎಂಬುದನ್ನೂ ಅವರೇ ಹೇಳಬೇಕಲ್ಲವೇ? ಅಂತ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದಾರೆ. 

ಬಿಜೆಪಿ ಬೆಂಬಲಿಸುವುದಾಗಿ ನಾನೆಲ್ಲೂ ಹೇಳಿಲ್ಲ: ಎಚ್‌ಡಿಕೆ

ಬಿಜೆಪಿಗೆ ಬೆಂಬಲ ನೀಡಲಾಗುವುದು ಎಂದು ನಾನು ಎಲ್ಲೂ ಹೇಳಿಲ್ಲ. ಆದರೆ, ಬೆಂಬಲ ಕೇಳಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆ ರಾಜಕೀಯವನ್ನು(Politics) ಹೊರತುಪಡಿಸಿ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಜೆಡಿಎಸ್‌ ಎಲ್ಲೆಲ್ಲಿ ಸ್ಪರ್ಧೆ ಮಾಡಿಲ್ಲವೋ ಅಲ್ಲೆಲ್ಲ ಬಿಜೆಪಿಗೆ ಬೆಂಬಲ ನೀಡುವಂತೆ ಯಡಿಯೂರಪ್ಪ ಮನವಿ ಮಾಡಿರುವುದು ಸರಿಯಷ್ಟೇ. ಈ ಬಗ್ಗೆ ಹೇಳಿಕೆ ನೀಡಿ ನಮ್ಮ ಪಕ್ಷದ ಅಭಿಪ್ರಾಯ ಹೇಳಿದ್ದೇನೆ. ಆದರೆ, ಆ ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಯಡಿಯೂರಪ್ಪ ಅವರ ರಾಜಕೀಯ ಅನುಭವ, ಹಿರಿತನಕ್ಕೆ ಗೌರವ ಕೊಟ್ಟು ಮಾತನಾಡಿದ್ದೇನೆ. ಇದರಲ್ಲಿ ತಪ್ಪೇನಿದೆ? ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಕ್ಷಣ ಜೆಡಿಎಸ್‌ ಪಕ್ಷ ಬಿಜೆಪಿಗೆ ಬೆಂಬಲ ನೀಡುತ್ತದೆ ಎಂದರ್ಥವಲ್ಲ. ಚಿಕ್ಕಬಳ್ಳಾಪುರದಲ್ಲಿ ನೀಡಿರುವ ಹೇಳಿಕೆಯನ್ನು ಮತ್ತೊಮ್ಮೆ ಗಮನಿಸಬೇಕು ಎಂಬುದು ನನ್ನ ಮನವಿ ಎಂದಿದ್ದಾರೆ.

ಕಾಂಗ್ರೆಸ್‌(Congress) ಪಕ್ಷದ ನಾಯಕರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ. ಆ ಕಾರಣಕ್ಕೆ ಅವರು ಜನರು ಹಾಗೂ ಮತದಾರರನ್ನು ದಿಕ್ಕು ತಪ್ಪಿಸುವ ಮತ್ತು ಜೆಡಿಎಸ್‌ ವಿರುದ್ಧ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರತಿ ಚುನಾವಣೆ ಬಂದಾಗ ಜೆಡಿಎಸ್‌ ಜ್ವರ ಶುರುವಾಗುತ್ತದೆ. ಕಾಂಗ್ರೆಸ್ಸಿನ ಮಂಡ್ಯ, ಕೊಡಗು ಅಭ್ಯರ್ಥಿಗಳ ಬಗ್ಗೆ ಜನರಿಗೆ ಗೊತ್ತಾಗಿದೆ. ಮಂಡ್ಯದ ಕಾಂಗ್ರೆಸ್‌ ಅಭ್ಯರ್ಥಿಗೆ ಟಿಕೆಟ್‌ ಯಾರು ಕೊಡಿಸಿದರು ಎನ್ನುವುದನ್ನು ಸ್ವತಃ ಸಹಕಾರ ಸಚಿವರೇ ಹೇಳಿದ್ದಾರೆ. ಹಾಗಾದರೆ, ಕಾಂಗ್ರೆಸ್‌ ಪಕ್ಷವು ಬಿಜೆಪಿಯ ಯಾವ ಟೀಮು? ಸಿ ಟೀಮಾ? ಡಿ ಟೀಮಾ? ನಮ್ಮನ್ನು ಬಿಜೆಪಿ ಬಿ ಟೀಮ್‌ ಎನ್ನುವವರೇ ಉತ್ತರಿಸಬೇಕು ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

Karnataka Politics:ಒಂದೇ ದಿನ ಎರಡೆರಡು ಅಚ್ಚರಿಯ ರಾಜಕೀಯ ಬೆಳವಣಿಗೆಗಳು, ಕಾಂಗ್ರೆಸ್‌ಗೆ ಬಿಗ್ ಶಾಕ್

ಜೆಡಿಎಸ್‌ ಜತೆ ಕಾಂಗ್ರೆಸ್‌ ಹೊಂದಾಣಿಕೆ ಇಲ್ಲ: ಸಿದ್ದು

ಮೈಸೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗೆ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಪಕ್ಷದ ಅಭ್ಯರ್ಥಿಗೆ ಸಿಂಗಲ್‌ ವೋಟ್‌(Vote) ಹಾಕಲು ನಮ್ಮ ಬೆಂಬಲಿತರಿಗೆ ಸೂಚನೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾವು ಯಾವ ಕ್ಷೇತ್ರದಲ್ಲೂ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು. ಇನ್ನು ಬಿಜೆಪಿ-ಜೆಡಿಎಸ್‌ ನಡುವೆ ಒಳ ಒಪ್ಪಂದ ಇದ್ದೇ ಇದೆ. ಈ ಚುನಾವಣೆಯಲ್ಲಿ ಮಾತ್ರ ಅಲ್ಲ. ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲೂ ಅವರಿಬ್ಬರೂ ಒಳ ಒಪ್ಪಂದ ಮಾಡಿಕೊಂಡೆ ಚುನಾವಣೆ ಮಾಡಿದ್ದಾರೆ ಎಂದರು.

ಬೆಳಗಾವಿ(Belagavi) ವಿಧಾನ ಪರಿಷತ್‌ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ(Lakhan Jarkiholi) ಇರುವುದು ಬಿಜೆಪಿಯಲ್ಲಿ. ಅವರು ಪಕ್ಷೇತರವಾಗಿ ಕಣಕ್ಕೆ ಇಳಿದಿರುವುದರಿಂದ ಬಿಜೆಪಿಗೆ ವ್ಯತ್ಯಾಸ ಆಗಲಿದೆ. ನಮ್ಮವರು ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಲಖನ್‌ ಜಾರಕಿಹೊಳಿ ಬಿಜೆಪಿಯಲ್ಲೇ ಇದ್ದವರು. ಹೀಗಾಗಿ ಗೊಂದಲ ಇರೋದು ಬಿಜೆಪಿಯಲ್ಲಿ ಮಾತ್ರ. ನಮ್ಮಲ್ಲಿ ಅಲ್ಲ ಎಂದರು.
 

Follow Us:
Download App:
  • android
  • ios