* ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಅಂತರ್ ಯುದ್ಧ* ಇದೀಗ ಬಿಜೆಪಿಯಲ್ಲೂ ಶುರುವಾಯ್ತು ಸಿಎಂ ಆಕಾಂಕ್ಷಿ ಹೇಳಿಕೆ"* ಮತ್ತೆ ರಾಜ್ಯ ರಾಜಕಾರಣದಲ್ಲಿ ಕತ್ತಿ ವರಸೆ

ವಿಜಯಪುರ, (ಜೂನ್,.28): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಸೈಲೆಂಟ್ ಆಗಿದ್ದು, ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಬಗ್ಗೆ ಅಂತರ್‌ ಯುದ್ಧ ಶುರುವಾಗಿದೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳನ್ನ ಬಿಜೆಪಿ ಲೇವಡಿ ಮಾಡುತ್ತಿದೆ. ಇದರ ಮಧ್ಯೆ ನಾನು 8 ಬಾರಿ ಶಾಸಕನಾಗಿರುವ ನನಗೂ ಸಿಎಂ ಆಗುವ ಅರ್ಹತೆ ಇದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿ ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಂಚಲನ ಮೂಡಿಸಿದ್ದಾರೆ.

ಅತ್ತ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಕಿತ್ತಾಟ, ಇತ್ತ ಬಿಜೆಪಿಗೆ ಚೆಲ್ಲಾಟ

ಇಂದು (ಸೋಮವಾರ) ವಿಜಯಪುರ ಜಿಲ್ಲೆಯ ಆಲಮಟ್ಟಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ಬಾರಿ ಶಾಸಕನಾಗಿ ಅಯ್ಕೆ ಆಗಿರುವ ನನಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಹೈಕಮಾಂಡ್ ಯಡಿಯೂರಪ್ಪ ಅವರನ್ನು ವಯಸ್ಸು ಹಾಗೂ ಇತರೆ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದ ಬದಲಾವಣೆಗೆ ಮುಂದಾದಲ್ಲಿ ನಾನೂ ಆಕಾಂಕ್ಷಿ ಎಂದು ಮನದಾಸೆಯನ್ನು ವ್ಯಕ್ತಪಡಿಸಿದರು.

,ಅಭಿವೃದ್ಧಿ ಹಿನ್ನಡೆ ಕಂಡು ಬಂದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಧ್ವನಿ ಎತ್ತುವಲ್ಲಿ ಹಿಂದೆ ಬೀಳುವುದಿಲ್ಲ. ಜಲಸಂಪನ್ಮೂಲ ಖಾತೆ ಸೇರಿದಂತೆ ಹಲವು ಖಾತೆ ನಿರ್ವಹುಸುವ ಸಾಮರ್ಥ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದೆ. ಪ್ರಮುಖ ಖಾತೆಗಳು ಸೇರಿದಂತೆ ಹಲವು ಖಾತೆಗಳ ನಿರ್ವಹಣೆ ವಿಷಯದಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಡ ಆಗಲಿದೆ ಎಂಬುದು ನಿಮ್ಮ ಹಾಗೂ ನನ್ನ ಅಭಿಪ್ರಾಯ ಅಷ್ಟೇ. ಆದರೆ ಮುಖ್ಯಮಂತ್ರಿ ಹಲವು ಖಾತೆ ನಿರ್ವಹಿಸುವಲ್ಲಿ ಸಮರ್ಥರಿದ್ದಾರೆ ಎಂದರು.

ನಾಯಕತ್ವ ಬದಲಾವಣೆ ಬಗ್ಗೆ ಎದ್ದಿದ್ದ ಬಿರುಗಾಳಿ ಕೊಂಚ ಕಡಿಮೆ ಆಯ್ತು ಎನ್ನುವಷ್ಟರಲ್ಲಿ ಉಮೇಶ್ ಕತ್ತಿ ಮತ್ತೆ ತಮ್ಮ ಕತ್ತಿ ವರಸೆ ಶುರುಮಾಡಿಕೊಂಡಿರುವುದು ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ. ಇನ್ನು ಈ ಬಗ್ಗೆ ಯಾವೆಲ್ಲ ನಾಯಕರು ಹೇಗೆಲ್ಲಾ ಪ್ರತಿಕ್ರಿಯಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.