ತಮ್ಮ ಪುತ್ರನಿಗೆ ಹೊಸಕೋಟೆ ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರಾಜ್ಯ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಮನವಿ ಮಾಡಿದ್ದಾರೆ. 

ಬೆಂಗಳೂರು (ಏ.08): ತಮ್ಮ ಪುತ್ರನಿಗೆ ಹೊಸಕೋಟೆ ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರಾಜ್ಯ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಮನವಿ ಮಾಡಿದ್ದಾರೆ. ಶುಕ್ರವಾರ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಬಾರಿ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸಲ್ಲ. ಮಗನಿಗೆ ಟಿಕೆಟ್‌ ಕೊಡಿ. ಗೆಲ್ಲಿಸಿಕೊಂಡು ಬರುತ್ತೇನೆ ಎಂಬ ಮನವಿಯನ್ನು ಯಡಿಯೂರಪ್ಪನವರ ಮುಂದೆ ಇಟ್ಟಿದ್ದೇನೆ ಎಂದರು. ಈಗಾಗಲೇ ಹೊಸಕೋಟೆ ಕ್ಷೇತ್ರದಿಂದ ಮಗನಿಗೆ ಟಿಕೆಟ್‌ ನೀಡಿಕೆ ಸಂಬಂಧ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಸಹ ಚರ್ಚಿಸಿದ್ದೇನೆ. ಮಗನಿಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದರು.

ಈ ಚುನಾವಣೆ ನನಗೆ ಪ್ರತಿಷ್ಠೆಯಾಗಿದೆ: ನನ್ನ ನಾಯಕತ್ವದಲ್ಲಿ ನಡೆಯುತ್ತಿರುವ 6ನೇ ಚುನಾವಣೆ ನನಗೊಂದು ಪ್ರತಿಷ್ಠಿತ ಚುನಾವಣೆಯಾಗಿದೆ. ನಾನು ಮೊದಲ ಬಾರಿಗೆ 2004ರಲ್ಲಿ ಇಲ್ಲಿ ಸ್ಪರ್ಧೆ ಮಾಡಿದಾಗ ಯಾವ ರೀತಿ ಚುನಾವಣೆ ಎದುರಿಸಿದ್ದೇವೆ. ಆ ರೀತಿ ಚುನಾವಣೆಗೆ ಸಿದ್ಧರಾಗಬೇಕು ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಕಟ್ಟಿಗೇನಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ದೇವೇಗೌಡರೇ ನಮಗೆ ಸ್ಟಾರ್‌ ಪ್ರಚಾರಕರು: ನಿಖಿಲ್‌ ಕುಮಾರಸ್ವಾಮಿ

ನಾನು 2004ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪ​ರ್ಧಿಸುವಾಗ ಅನೇಕ ಜನ ನನಗೆ ಹೊಸಕೋಟೆ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪ​ರ್ಧಿಸಲು ತಿಳಿಸಿದ್ದರು. ಇದು ಒಂದು ಮಿನಿ ಬಿಹಾರ್‌ ರೀತಿಯಲ್ಲಿ ಇದ್ದು ಅಂತಹ ಸಮಯದಲ್ಲೂ ಮತದಾರರು ನಮ್ಮ ಕೈಹಿಡಿದು ಜಯಗಳಿಸಿ ಶಾಸಕರನ್ನಾಗಿ ಸಚಿವರನ್ನಾಗಿ ಮಾಡಿದ್ದಾರೆ. ನನ್ನ ನಾಯಕತ್ವದಲ್ಲಿ 3 ಗ್ರಾಪಂ ಹಾಗೂ 3 ಜಿಪಂ ಚುನಾವಣೆ ಹಾಗೂ 3 ನಗರಸಭೆ ಚುನಾವಣೆಗಳನ್ನು ನನ್ನ 19 ವರ್ಷದ ಚುನಾವಣೆ ಸಮಯದಲ್ಲಿ ಎದುರಿಸಿದ್ದು ಈಗ 6ನೇ ಚುನಾವಣೆ ನನ್ನ ನಾಯಕತ್ವದಲ್ಲಿ ನಡೆಯುತ್ತಿದೆ. 

ಬ್ರಿಟೀಷರ ಆಳ್ವಿಕೆ ರೀತಿಯಲ್ಲಿದ್ದ ಈ ಕ್ಷೇತ್ರಕ್ಕೆ ಮುಕ್ತಿ ದೊರಕಿಸಿ ಎಲ್ಲರಿಗೂ ಮುಕ್ತ ಮತದಾನ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದೇವೆ. ಈ ಚುನಾವಣೆಯಲ್ಲಿ ಮತದಾರರು ಮುಕ್ತವಾಗಿ ಮತದಾನ ಮಾಡುವ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಬಮುಲ್‌ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್‌ ಮಾತನಾಡಿ, ನಾನು ಹುಟ್ಟಿನಿಂದಲೂ ಕಾಂಗ್ರೆಸ್‌ ವಿರೋ​ಧಿ. ಬಚ್ಚೇಗೌಡರ ಕುಟುಂಬದ ಜೊತೆ ಹಲವು ಪಕ್ಷಗಳನ್ನು ಬದಲಾವಣೆ ಮಾಡಿದ್ದೇವೆ. ನಂತರ ಬಿಜೆಪಿ ಪಕ್ಷ ಸೇರಿ ಈ ಮಧ್ಯದಲ್ಲಿ ಸ್ವಾಭಿಮಾನಿ ಪಕ್ಷದಲ್ಲಿದ್ದೆ. ಈಗ ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದಾರೆ. 

ನಾನು ಬಿಜೆಪಿ ಪಕ್ಷದಲ್ಲಿಯೇ ಇದ್ದೇನೆ. ನನಗೆ ಎಂಟಿಬಿ ಅವರಿಗೆ ರಾಜಕೀಯವಾಗಿ ಪರ ವಿರೋಧ ಮಾಡುವುದು ಸಹಜ. ಆದರೆ 38 ವರ್ಷ ಅವರ ಜೊತೆಯಲ್ಲಿದ್ದೆ. ಆಗ ನನ್ನ ನೋವನ್ನು ಸಮಯ ಬಂದಾಗ ತಿಳಿಸುತ್ತೇನೆ. ಮಂಜುನಾಥ ಸ್ವಾಮಿ ಫೋಟೋ ನನ್ನ ಬಳಿಯೇ ಇದೆ. ನನ್ನ ಮಗನ ವಿರುದ್ಧ ಅವರು ಕೇಸು ದಾಖಲಿಸಿಲ್ಲ ಎಂದು ಆಣೆ ಮಾಡಲಿ. ನಾನು ಈಗಲೇ ಅವರ ಜೊತೆ ಹೋಗುತ್ತೇನೆ ಎಂದು ಬಚ್ಚೇಗೌಡರ ಕುಟುಂಬಕ್ಕೆ ಪರೋಕ್ಷವಾಗಿ ಟಾಂಗ್‌ ಕೊಟ್ಟರು. ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಅನೇಕ ಮಂದಿ ಸೇರ್ಪಡೆಯಾಗುತ್ತಿದ್ದಾರೆ. ಆದರೆ ಪಕ್ಷ ಯಾವತ್ತೂ ಜನ ವಿರೋಧಿ​ಯಲ್ಲ ಹಾಗೂ ಸಂವಿಧಾನ ವಿರೋ​ಧಿಯಲ್ಲ. 

60 ಕ್ಷೇತ್ರದಲ್ಲಿ ‘ಕಾಂಗ್ರೆಸ್‌’ಗೆ ಅಭ್ಯರ್ಥಿಯೇ ಇಲ್ಲ, ನಮ್ಮವರನ್ನು ಕರೀತಿದ್ದಾರೆ: ಸಿಎಂ ಬೊಮ್ಮಾಯಿ

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಬಗ್ಗೆ ಗೌರವ ಇಲ್ಲದಂತೆ ನಡೆದುಕೊಂಡ ಸರಕಾರ ಎಂದರೆ ಅದು ಕಾಂಗ್ರೆಸ್‌ ಸರಕಾರ. ಆದರೆ ಇಲ್ಲಿನ ಶಾಸಕರು ಜನರ ದಿಕ್ಕು ತಪ್ಪಿಸಲು ಬಿಜೆಪಿ ಸರಕಾರದ ಮೇಲೆ ಆರೋಪ ಮಾಡುತ್ತಿದ್ದಾರೆಂದು ಎಂಟಿಬಿ ರಾಜೇಶ್‌ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.