ಅತೃಪ್ತಿಗೆ ಕಾರಣ ಗೊತ್ತಿಲ್ಲ: ಸತೀಶ್ ಜಾರಕಿಹೊಳಿ
ಅತೃಪ್ತ ಶಾಸಕರ ಸಂಪರ್ಕವೂ ಸಾಧ್ಯವಾಗುತ್ತಿಲ್ಲ ಮತ್ತು ಅವರ ಬೇಡಿಕೆ ಏನೆಂಬುದೂ ತಿಳಿಯುತ್ತಿಲ್ಲ: ಶಾಸಕ ಸತೀಶ್ ಜಾರಕಿಹೊಳಿ
ಬೆಳಗಾವಿ[ಫೆ.11]: ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರ ಸಂಪರ್ಕವೂ ಸಾಧ್ಯವಾಗುತ್ತಿಲ್ಲ ಮತ್ತು ಅವರ ಬೇಡಿಕೆ ಏನೆಂಬುದೂ ತಿಳಿಯುತ್ತಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತಿಗೆ ಕಾರಣ ಏನೆಂಬುದು ತಿಳಿಯುವವರೆಗೆ ಅವರ ಜತೆ ಚರ್ಚೆ ಮಾಡಲು ಸಾಧ್ಯವಿಲ್ಲ. ಮುಂಬೈಯಿಂದ ಬಂದರೆ ಮಾತ್ರ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಅತೃಪ್ತರ ವಿರುದ್ಧ ಕ್ರಮಕ್ಕೆ ನಿಯಮವಿದ್ದು, ಓರ್ವ ಶಾಸಕನನ್ನು ಪಕ್ಷದಿಂದ ತೆಗೆದುಹಾಕುವುದು ಅಷ್ಟುಸುಲಭದ ಕೆಲಸವಲ್ಲ. ಕಾನೂನು ರೀತಿ ಅವರ ವಿರುದ್ಧ ವರಿಷ್ಠರು ಕ್ರಮ ತೆಗೆದುಕೊಳ್ಳುತ್ತಾರೆ. ಅದಕ್ಕೆ ಸಮಯಬೇಕು ಹೊರತು, ತಕ್ಷಣ ಮಾಡಲು ಆಗುವುದಿಲ್ಲ ಎಂದಿದ್ದಾರೆ.
ಇನ್ನು ಅತೃಪ್ತರು ಯಾವಾಗ ಬೇಕಾದರೂ ಬಂದು ಮಾತಾಡಬಹುದು ಎಂದು ನಮ್ಮ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ. ಶನಿವಾರ ಬಿ.ಸಿ.ಪಾಟೀಲ ಮಾತನಾಡಿದ್ದಾರೆ. ಮುಂಬೈನಲ್ಲಿರುವ ಜೆಡಿಎಸ್ ಶಾಸಕ ನಾರಾಯಣಗೌಡ ಮಾತನಾಡಿದ್ದಾರೆ. ಉಳಿದವರೂ ಮಾತನಾಡಬಹುದು. ಬಿಜೆಪಿಯವರು ಎಷ್ಟುಹಣ ಕೊಟ್ಟು ಶಾಸಕರನ್ನು ಖರೀದಿಸಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಆದರೆ, ಶಾಸಕರು ಮುಂಬೈಗೆ ಹೋಗಿದ್ದು ಮತ್ತು ಕೆಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿರುವುದು ಸತ್ಯ. ಅದರಲ್ಲಿ ಬಹುತೇಕರು ವಾಪಸ್ ಬಂದಿದ್ದಾರೆ. ನಮಗೆ ಯಾವುದೇ ಭಯವಿಲ್ಲ. ಸಮ್ಮಿಶ್ರ ಸರ್ಕಾರ ಸೇಫ್ ಆಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.