Asianet Suvarna News Asianet Suvarna News

ಈಶ್ವರಪ್ಪ ಎಂಬ ವ್ಯಕ್ತಿ ನನಗೆ ಗೊತ್ತಿಲ್ಲ: ರಾಧಾಮೋಹನ್ ಅಗರವಾಲ್

ಮೋದಿ ಬಿಜೆಪಿ ನೇತಾ ಅವರ ಫೋಟೋ ಬಿಜೆಪಿಗರು ಮಾತ್ರ ಬಳಸುತ್ತಾರೆ. ಚುನಾವಣೆಯಲ್ಲಿ ಇತರರು ಬಳಸಿದರೆ ಐಪಿಸಿಯಲ್ಲಿ ಕೋಡ್ ಇದೆ 420. ಇದು ರಾಜಕೀಯ 420 ಆಗುತ್ತದೆ. ಇದು ಶೋಭೆ ತರುವುದಿಲ್ಲ ಎನ್ನುವ ಮೂಲಕ ಈಶ್ವರಪ್ಪ ಅವರಿಗೆ 420 ಎಂದು ಪರೋಕ್ಷವಾಗಿ ಜರಿದ ರಾಧಾಮೋಹನ್‌

I Do Not Know KS Eshwarappa Says Karnataka BJP is in charge Radha Mohan Das Agrawal grg
Author
First Published Apr 17, 2024, 1:30 PM IST

ಬಾಗಲಕೋಟೆ(ಏ.17): ಕೆ.ಎಸ್‌. ಈಶ್ವರಪ್ಪ ಎಂಬ ಯಾವುದೇ ವ್ಯಕ್ತಿ ನನಗೆ ಗೊತ್ತಿಲ್ಲ. ನಮಗೆ ಯಾರ ಬಗ್ಗೆ ಗೊತ್ತಿಲ್ಲವೋ ಅವರ ಬಗ್ಗೆ ಟಿಪ್ಪಣಿ ಮಾಡೋದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಪಕ್ಷ ಸಂಘಟನೆ ಮಾಡಿದವರು ಈಶ್ವರಪ್ಪ ಯಾರೆಂದು ಗೊತ್ತಿಲ್ಲ ಅನ್ನೋದು ಅಪಮಾನವಲ್ಲವಾ ಎಂಬ ಪ್ರಶ್ನೆಗೆ, ವ್ಯಕ್ತಿಯ ಅಪಮಾನ ಅವರ ಹೆಸರಿಂದ ಆಗೋದಿಲ್ಲ. ಅವರ ಕೆಲಸದಿಂದ ಆಗುತ್ತದೆ. ಬಿಜೆಪಿ ಕಾರ್ಯಕರ್ತ ಯಾವುದೇ ಸಮಯದಲ್ಲೂ ಬಿಜೆಪಿ ಜೊತೆ ಇರ್ತಾರೆ ಎಂದರು.

ಈಶ್ವರಪ್ಪ ಮೋದಿ ಭಾವಚಿತ್ರ ಬಳಕೆ ಬಗ್ಗೆ ರಾಜ್ಯ ನಾಯಕರು ದೂರು ನೀಡಿರುವ ಕುರಿತು ಉತ್ತರಿಸಿದ ಅವರು, ಇದು ಚುನಾವಣಾ ಆಯೋಗದ ಕೆಲಸ. ಅವರು ನಿರ್ಧಾರ ಮಾಡುತ್ತಾರೆ. ಚುನಾವಣೆಯಲ್ಲಿ ಮೋಸ ನಡೆಯುವುದಿಲ್ಲ. ನೀವು ಜನರನ್ನು ಪ್ರಚೋದಿಸಿ ಅವರಲ್ಲಿ ಭ್ರಮೆ ಹುಟ್ಟಿಸಿ, ಜನರಿಗೆ ಮೋಸ ಮಾಡಿ, ರಾಜನೀತಿ ದೂರ್ತತೆ ಮಾಡಿ ಜನರ ಮತ ಸೆಳೆಯಲು ಬಯಸಿದರೆ, ಅದು ಕರ್ನಾಟಕದಂತಹ ಸುಶಿಕ್ಷಿತ ರಾಜ್ಯದಲ್ಲಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಯತ್ನಾಳ್ ಗಂಡಸ್ತನಕ್ಕೆ ಸವಾಲ್‌ ಹಾಕಿದ ಸಚಿವ ಶಿವಾನಂದ ಪಾಟೀಲ..!

ಕರ್ನಾಟಕ ಸಾಮಾನ್ಯ ಪ್ರಾಂತವಲ್ಲ. ಈ ಬಗ್ಗೆ ಕೇವಲ ನಗಬೇಕಷ್ಟೆ, ಮೋದಿ ಬಿಜೆಪಿ ನೇತಾ ಅವರ ಫೋಟೋ ಬಿಜೆಪಿಗರು ಮಾತ್ರ ಬಳಸುತ್ತಾರೆ. ಚುನಾವಣೆಯಲ್ಲಿ ಇತರರು ಬಳಸಿದರೆ ಐಪಿಸಿಯಲ್ಲಿ ಕೋಡ್ ಇದೆ 420. ಇದು ರಾಜಕೀಯ 420 ಆಗುತ್ತದೆ. ಇದು ಶೋಭೆ ತರುವುದಿಲ್ಲ ಎನ್ನುವ ಮೂಲಕ ಈಶ್ವರಪ್ಪ ಅವರಿಗೆ ರಾಧಾಮೋಹನ್‌ ಪರೋಕ್ಷವಾಗಿ 420 ಎಂದು ಜರಿದರು.

ಧಾರವಾಡದಲ್ಲಿ ಪ್ರಹ್ಲಾದ್‌ ಜೋಶಿ ವಿರುದ್ಧ ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಎದುರು ಯಾರೂ ಇಲ್ಲ. ಮೋದಿ ಎದುರು ಮೋದಿ ಮಾತ್ರ ಇರ್ತಾರೆ. ಪ್ರಹ್ಲಾದ್ ಜೋಶಿ ಯುದ್ಧ ಪ್ರಹ್ಲಾದ್ ಜೋಶಿ ಜೊತೆಗೆ. 2019ರ ಪ್ರಹ್ಲಾದ್ ಜೋಶಿ 2024ರ ಪ್ರಹ್ಲಾದ್ ಜೋಷಿ ಮಧ್ಯೆ ಸಂಘರ್ಷ ನಡೆಯುತ್ತಿದೆ. ಅವರು ಅಧಿಕ ಮತಗಳಿಂದ ಗೆಲ್ಲಬೇಕಿದೆ ಎಂದು ಹೇಳಿದರು.

ಜೋಶಿ ಅವರು ಲಿಂಗಾಯತ ವಿರೋಧಿ ಎಂಬ ದಿಂಗಾಲೇಶ್ವರ ಶ್ರಿ ಹೇಳಿಕೆ ನೋಡಿ, ಸ್ವಾಮೀಜಿಗಳ ಬಗ್ಗೆ ಹೆಚ್ಚು ಮಾತಾಡೋದು ನಮಗೆ ಶೋಭೆ ತರುವುದಿಲ್ಲ. ಅದಕ್ಕಾಗಿ ಹೆಚ್ಚು ಮಾತನಾಡುವುದಿಲ್ಲ. ಶ್ರೀಗಳ ಸ್ಪರ್ಧೆಯಿಂದ ಮತದಾನ ಹೆಚ್ಚಾಗಲಿದ್ದು, ಜೋಶಿ ಇನ್ನೂ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಶಿವಮೊಗ್ಗ ಸುತ್ತಿದ್ದೇನೆ. ಬಿ.ವೈ.ರಾಘವೇಂದ್ರಜೀ ಬಹಳ ಐತಿಹಾಸಿಕ ಮತಗಳಿಂದ ಗೆಲ್ಲುತ್ತಾರೆ. ಜನರು ಮೋದಿ ಬಂದಾಗ ಎಷ್ಟು ಕೇಕೆ ಹಾಕುತ್ತಿದ್ದರೆಂದರೆ, ಪಾಪ ಮೋದಿ ಅವರಿಗೆ ಮಾತಾಡಲು ಆಗುತ್ತಿರಲಿಲ್ಲ. ಮೋದಿ ಬಗ್ಗೆ ಶಿವಮೊಗ್ಗ ಜನರಲ್ಲಿ ಭಾರೀ ಉತ್ಸಾಹವಿದೆ. ಮೋದಿ ವಿರೋಧಿಗಳಿಗೆ ಶಿವಮೊಗ್ಗ ಜನ ಚೆನ್ನಾಗಿ ದಂಡನೆ ನೀಡುತ್ತಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ವಿರುದ್ಧ ಹರಿಹಾಯ್ದರು.

ಕರಡಿ ಸಂಗಣ್ಣ ಪ್ರಚಾರಕ್ಕೆ ಬರ್ತಾರೆ:

ಕೊಪ್ಪಳ ಸಂಸದ ಕರಡಿ ಸಂಗಣ್ಣಗೆ ಕಾಂಗ್ರೆಸ್ ಗಾಳ ಹಾಕಿದ ಕುರಿತು ಮಾತನಾಡಿದ ಅವರು, ನಾನು ಕರಡಿ ಸಂಗಣ್ಣ ಜೊತೆ ಮಂಗಳವಾರ ಬೆಳಗ್ಗೆ ಮಾತಾಡಿದ್ದೇನೆ. ಕರಡಿ ಸಂಗಣ್ಣ ಎಲ್ಲೂ ಹೋಗೋದಿಲ್ಲ. ಅವರು ಬಿಜೆಪಿ ಜೊತೆಗೆ ಇರ್ತಾರೆ. ಬಿಜೆಪಿ ಪರ ಪ್ರಚಾರ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ನೂರಾರು ವಿಷಯಗಳು ನನ್ನ ಬಳಿ ಇವೆ: ಕೂಡಲ ಶ್ರೀಗಳಿಗೆ ಎಚ್ಚರಿಕೆ ಕೊಟ್ಟ ನಿರಾಣಿ..!

ರಾಜಶೇಖರ್ ಹಿಟ್ನಾಳ್ ಅವರು ಸಂಗಣ್ಣ ಭೇಟಿ ಮಾಡಿದ ಕುರಿತು ಮಾತನಾಡಿ, ರಾಜನೀತಿಯಲ್ಲಿ ಅನ್ ಟಚೆಬಲಿಟಿಗೆ ಜಾಗ ಇರೋದಿಲ್ಲ. ಇಬ್ಬರು ರಾಜಕೀಯ ಮುಖಂಡರು ಭೇಟಿಯಾದರೆ ಅದು ಪ್ರಶಂಸೆಗೆ ಅರ್ಹವಾದದ್ದು. ನನಗೆ ಇದರಲ್ಲಿ ಯಾವ ತಪ್ಪು ಕಾಣುತ್ತಿಲ್ಲ ಎಂದು ಉತ್ತರಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಾನು ತಿಳಿದುಕೊಂಡಿಲ್ಲ. ಆದರೆ ಬೆಳಗ್ಗೆ ಪತ್ರಿಕೆ ಓದಿದಾಗ ಕುಮಾರಸ್ವಾಮಿ ಹೇಳಿರುವುದನ್ನು ನೋಡಿದೆ. ಅವರು ನಾನು ಆ ಅರ್ಥದಲ್ಲಿ ಹೇಳಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದ್ದಾರೆ. ಅವರ ಫೇಸ್ ವ್ಯಾಲ್ಯೂ ಪ್ರಕಾರ ಅವರ ಹೇಳಿಕೆಯನ್ನು ಸ್ವೀಕಾರ ಮಾಡುತ್ತೇನೆ. ಎರಡು ತಿಂಗಳಿಂದ ಪೂರ್ಣ ರಾಜ್ಯ ಸುತ್ತಿದ್ದೇನೆ. ಎಲ್ಲ ಮುಖಂಡರು ಮತ್ತು ಜನರನ್ನು ಭೇಟಿ ಮಾಡಿದ್ದೇನೆ. ಜೂ.4 ರಂದು 28 ಸ್ಥಾನ ಬಿಜೆಪಿ ವಶವಾಗಲಿವೆ. ಕಾಂಗ್ರೆಸ್ 2019 ರಲ್ಲಿ ಹಣಬಲದಿಂದ ಒಂದು ಸೀಟ್ ಗೆದ್ದಿತ್ತು. ಈ ಬಾರಿ ಅದನ್ನು ಗೆಲ್ಲೋದಿಲ್ಲ, ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲೂ ಕಾಂಗ್ರೆಸ್ ಸೋಲುತ್ತದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರವಾಲ್‌ ತಿಳಿಸಿದ್ದಾರೆ. 

Follow Us:
Download App:
  • android
  • ios