ರಾಜಣ್ಣ ಕೇಳುವುದರಲ್ಲಿ ತಪ್ಪೇನೂ ಇಲ್ಲ. ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೂ ಈ ಬಗ್ಗೆ ಅವರೇ ತಿಳಿಸಬೇಕು. ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದರೂ ಉದ್ದೇಶ ಒಳ್ಳೆಯದಿದೆ. ಲೋಕಸಭೆ ಚುನಾವಣೆಗೆ ಮೊದಲು ಎಲ್ಲ ಸಮುದಾಯಗಳಿಗೂ ಅವಕಾಶ ನೀಡುವಂತೆ ಕೇಳಿದ್ದಾರೆ. ಇದು ತಪ್ಪಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌ 

ಬೆಂಗಳೂರು(ಸೆ.17): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಮೂರು ಮಂದಿ ಉಪ ಮುಖ್ಯಮಂತ್ರಿಗಳನ್ನು ಮಾಡಬೇಕು ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಕೇಳಿರುವುದರಲ್ಲಿ ತಪ್ಪಿಲ್ಲ. ಇನ್ನೂ ಕೆಲ ಮಂದಿಯನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂಬ ಅವರ ಉದ್ದೇಶ ಒಳ್ಳೆಯದು. ಆದರೆ, ಅದನ್ನು ಮಾಡುವುದು, ಬಿಡುವುದು ಹೈಕಮಾಂಡಿಗೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಕೆ.ಎನ್‌. ರಾಜಣ್ಣ ಹೇಳಿಕೆಯನ್ನು ಸಮರ್ಥಿಸಿ ಮಾತನಾಡಿರುವ ಅವರು, ರಾಜಣ್ಣ ಕೇಳುವುದರಲ್ಲಿ ತಪ್ಪೇನೂ ಇಲ್ಲ. ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೂ ಈ ಬಗ್ಗೆ ಅವರೇ ತಿಳಿಸಬೇಕು. ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದರೂ ಉದ್ದೇಶ ಒಳ್ಳೆಯದಿದೆ. ಲೋಕಸಭೆ ಚುನಾವಣೆಗೆ ಮೊದಲು ಎಲ್ಲ ಸಮುದಾಯಗಳಿಗೂ ಅವಕಾಶ ನೀಡುವಂತೆ ಕೇಳಿದ್ದಾರೆ. ಇದು ತಪ್ಪಲ್ಲ ಎಂದರು. ಆದರೆ, ಈ ಬಗ್ಗೆ ತೀರ್ಮಾನ ಮಾಡುವವರು ಬಿಡುವವರು ಎಐಸಿಸಿ ನಾಯಕರು. ಉಪ ಮುಖ್ಯಮಂತ್ರಿ ಸ್ಥಾನ ಮಾಡುವ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿರುವುದು. ಹೀಗಾಗಿ ಹೈಕಮಾಂಡ್‌ ಸೂಕ್ತ ನಿರ್ಧಾರ ಮಾಡಲಿದೆ ಎಂದು ಹೇಳಿದರು.

ಎಸ್ಸಿ,ಎಸ್ಟಿ, ಅಲ್ಪಸಂಖ್ಯಾತ, ವೀರಶೈವರಿಗೂ ಡಿಸಿಎಂ ಹುದ್ದೆ ಸಿಗಲಿ: ಸಚಿವ ರಾಜಣ್ಣ

ಕಾವೇರಿ ವಿಚಾರದಲ್ಲಿ ಬಿಜೆಪಿ ರಾಜಕೀಯ:

ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆಗೆ ಪರ್ತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಕಾವೇರಿ ನೀರಿನ ಪ್ರಕರಣ ಸಂಪೂರ್ಣವಾಗಿ ತಿಳಿದಿದೆ. ತಿಳಿದೂ ತಿಳಿದೂ ಹೋರಾಟ ಮಾಡುತ್ತೇವೆ ಎನ್ನುವುದು ರಾಜಕೀಯ. ಕಾವೇರಿ ನೀರನ್ನು ಯಾರ ಆದೇಶದ ಮೇರೆಗೆ ಬಿಡುತ್ತಿದ್ದೇವೆ ಎನ್ನುವುದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಚೆನ್ನಾಗಿ ಗೊತ್ತಿದೆ.

ಎಲ್ಲ ಗೊತ್ತಿದ್ದೂ ಯಡಿಯೂರಪ್ಪ ಅವರು ಹೋರಾಟ ಮಾಡುತ್ತೇವೆ ಎನ್ನುವುದು ಸರಿಯೇ? ಒಳಗಡೆ ನಾವು ರಾಜಕೀಯ ಮಾಡಲ್ಲ ಎನ್ನುತ್ತಾರೆ. ಹೊರಗಡೆ ಬಂದು ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ಇದು ಕಾವೇರಿ ವಿಚಾರದಲ್ಲಿ ಮಾಡುತ್ತಿರುವ ರಾಜಕೀಯವಲ್ಲವೇ ಎಂದು ಪ್ರಶ್ನೆ ಮಾಡಿದರು.

3 ಡಿಸಿಎಂ ವರಿಷ್ಠರ ಮಟ್ಟದಲ್ಲಿ ಚರ್ಚೆಗೆ ಬಂದಿಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

ತನಿಖೆ ಬಳಿಕ ಚೈತ್ರಾ ಕೇಸಿನ ಎಲ್ಲಾ ಲಿಂಕ್‌ ಬೆಳಕಿಗೆ: ಪರಂ

ವಿಧಾನಸಭೆ ಬಿಜೆಪಿ ಟಿಕೆಟ್‌ ಕೊಡಿಸಲು ಹಣ ವಸೂಲಿ ಮಾಡಿರುವ ಆರೋಪದ ಮೇಲೆ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ಹಲವರ ಬಂಧನವಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, "ತನಿಖೆ ಬಳಿಕ ಅವರೇ ಹಣ ತೆಗೆದುಕೊಂಡಿದ್ದಾರಾ? ಬೇರೆಯವರಿಗೆ ಕೊಟ್ಟಿದ್ದರಾ? ಯಾರೆಲ್ಲಾ ಇದರಲ್ಲಿದ್ದಾರೆ ಎಂಬುದು ಬಯಲಾಗಲಿದೆ" ಎಂದು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಅವರ ವಿಚಾರದಲ್ಲಿ ಸ್ವಲ್ಪ ಡ್ರಾಮಾ ನಡೆದಿದೆ. ಇಲಾಖೆಯವರು ಸೂಕ್ತವಾಗಿ ನಿಭಾಯಿಸುತ್ತಿದ್ದಾರೆ. ತನಿಖೆ ನಡೆದು ಎಲ್ಲ ಮಾಹಿತಿ ಹೊರಬರಲಿ. ಯಾರ ಯಾರದು ಲಿಂಕ್‌ ಇದೆ ಎಲ್ಲವೂ ಹೊರ ಬರುತ್ತದೆ ಎಂದರು.