Asianet Suvarna News Asianet Suvarna News

ಅಲ್ಪಸಂಖ್ಯಾತರ ವೋಟಿಗಾಗಿ ಸಿದ್ದು ಜೊಲ್ಲು ಸುರಿಸುತ್ತಿದ್ದಾರೆ: ಜ್ಞಾನೇಂದ್ರ

*  ಕಾಂಗ್ರೆಸ್‌, ಜೆಡಿಎಸ್‌ ಜಾತಿವಾದ ಮಾಡ್ತಿವೆ
*  ದೇಶದಲ್ಲಿ ಕೇಸರಿ ಬ್ಯಾನ್‌ ಆಗಿದೆಯಾ? ಕೇಸರಿ ಬಣ್ಣ ಪಕ್ಷಕ್ಕೆ ಸೀಮಿತವಾಗಿದೆಯಾ? 
*  ಪೊಲೀಸ್‌ ಇಲಾಖೆಯಲ್ಲಿ ನಾಲ್ಕು ಸಾವಿರ ಸಿಬ್ಬಂದಿಗಳ ನೇಮಕಾತಿ

Home Minister Araga Jnanendra Slams on Siddaramaiah grg
Author
Bengaluru, First Published Oct 27, 2021, 1:17 PM IST

ಗೋಕರ್ಣ(ಅ.27):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ(Minorities) ವೋಟಿಗಾಗಿ(Vote) ಜೊಲ್ಲು ಸುರಿಸುತ್ತಿದ್ದಾರೆ. ಸೈದ್ಧಾಂತಿಕವಾಗಿ ಪಕ್ಷ ಕಟ್ಟಲಾರದವರು ಜಾತಿಯನ್ನು ಬಂಡವಾಳ ಮಾಡಿಕೊಳ್ಳುತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ವ್ಯಂಗ್ಯವಾಡಿದ್ದಾರೆ.

ಗೋಕರ್ಣಕ್ಕೆ ಆಗಮಿಸಿದ್ದ ಅವರು, ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ, ಸಿದ್ದರಾಮಯ್ಯ(Siddaramaiah) ಹಾಗೂ ಕುಮಾರಸ್ವಾಮಿ(HD Kumaraswamy) ಆರ್‌ಎಸ್‌ಎಸ್‌(RSS) ಬಗ್ಗೆ ಮಾತನಾಡುತ್ತಿರುವ ಬಗ್ಗೆ ಕೇಳಿದಾಗ, ಎಷ್ಟು ಕೆಳಮಟ್ಟದಲ್ಲಿ ಮಾತನಾಡುತ್ತೇವೆಯೋ ಅಷ್ಟು ವೋಟು ಸಿಗುತ್ತದೆ ಎಂದು ಇವರಿಬ್ಬರೂ ಭಾವಿಸಿದ್ದಾರೆ. ಅದು ಅವರ ಭ್ರಮೆ ಅಷ್ಟೆ ಎಂದರು.

ಬಿಜೆಪಿ(BJP) ಕುಟುಂಬ ರಾಜಕಾರಣ(Family Politics) ಮಾಡುತ್ತಿದೆ ಎನ್ನುತ್ತಾರೆ. ಅರ್ಹತೆ, ಯೋಗ್ಯತೆ ಇದ್ದ ವ್ಯಕ್ತಿಯೋರ್ವ ಒಬ್ಬರ ಮಗ, ಸಹೋದರ ಎಂದು ಮೂಲೆಗುಂಪು ಮಾಡಲಾಗುವುದಿಲ್ಲ. ಯಾರಿಗೆ ಸೇವಾ ಮನೋಭಾವನೆ, ಅರ್ಹತೆ ಇರುತ್ತದೆಯೋ ಅವರು ಮೂಲೆಗೆ ಹೋಗಬಾರದು ಎಂದರು.

ಕೇಸರಿ ಶಾಲಿನ ಪೊಲೀಸರಿಗೆ ಗೃಹ ಮಂತ್ರಿ ಆರಗ ಬೆಂಬಲ

ಬಿಜೆಪಿ ಇದನ್ನೇ ಮಾನದಂಡವಾಗಿ ಇಟ್ಟುಕೊಂಡಿದೆ. ಆದರೆ ಕಾಂಗ್ರೆಸ್‌ನಲ್ಲಿ(Congress) ಹಾಗಲ್ಲ. ಯೋಗ್ಯತೆ ದಕ್ಷತೆ ಇಲ್ಲದಿದ್ದರೂ ಗಾಂಧಿ ಕುಟುಂಬ ವಂಶಪಾರಂಪರ್ಯವಾಗಿ ಪಕ್ಷದ ಅಧ್ಯಕ್ಷ ಸ್ಥಾನ, ಪ್ರಧಾನಿ ಸ್ಥಾನವನ್ನು ಪಡೆದುಕೊಳ್ಳುತ್ತ ಬಂದಿದೆ ಎಂದರು.

ಯಾರಿಗೆ ಸೈದ್ಧಾಂತಿಕವಾಗಿ ಪಕ್ಷ ಕಟ್ಟಲು ಯೋಗ್ಯತೆ ಇಲ್ಲವೋ ಅವರು ಜಾತಿಯನ್ನು(Caste) ಬಂಡವಾಳ ಮಾಡಿಕೊಳ್ಳುತ್ತಾರೆ. ಕಾಂಗ್ರೆಸ್‌, ಜೆಡಿಎಸ್‌(JDS) ಜಾತಿವಾದ ಮಾಡುತ್ತಿವೆ. ಜನ ಅವರನ್ನು ತಿರಸ್ಕಾರ ಮಾಡುತ್ತಾರೆ. ಇವರ ಉದ್ಧಾರಕ್ಕಾಗಿ ಜಾತಿ ಅಲೆ ಎಬ್ಬಿಸಿದ್ದಾರೆ. ದಸರಾದಲ್ಲಿ ಪೊಲೀಸರು(Police) ಕೇಸರಿ ಬಣ್ಣದ ವಸ್ತ್ರ ಧರಿಸಿದಕ್ಕೆ ಆಕ್ಷೇಪ ತೆಗೆದಿದ್ದಾರೆ. ದೇಶದಲ್ಲಿ ಕೇಸರಿ ಬ್ಯಾನ್‌ ಆಗಿದೆಯಾ? ಕೇಸರಿ ಬಣ್ಣ ಪಕ್ಷಕ್ಕೆ ಸೀಮಿತವಾಗಿದೆಯಾ? ಎಂದು ಪ್ರಶ್ನೆ ಮಾಡಿದ ಅವರು, ನಾಳೆ ರಾಷ್ಟ್ರಧ್ವ​ಜದ(National Flag) ಕೇಸರಿ ಬಣ್ಣ ತೆಗೆದು ಹಸಿರು ಬಣ್ಣ ಇದ್ರೆ ಸಾಕು ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

4 ಸಾವಿರ ಸಿಬ್ಬಂದಿ ನೇಮಕ

ಪೊಲೀಸ್‌ ಇಲಾಖೆಯಲ್ಲಿ ನಾಲ್ಕು ಸಾವಿರ ಸಿಬ್ಬಂದಿಗಳ ನೇಮಕಾತಿ(Recruitment) ನಡೆಯುತ್ತಿದ್ದು, ಯಾವ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆಯೂ ಅಲ್ಲಿ ಭರ್ತಿ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷದ ಹಿಂದೆ 33 ಸಾವಿರ ಸಿಬ್ಬಂದಿ ಕೊರತೆ ಇತ್ತು. ಆದರೆ ನಿರಂತರ ನೇಮಕಾತಿಯಿಂದ ಇಂದು 12 ಸಾವಿರ ಸಿಬ್ಬಂದಿ ಕೊರತೆ ಇದೆ. ಇದರ ನೇಮಕಾತಿ ಪ್ರಕ್ರಿಯೆ ಸಹ ನಡೆಯುತ್ತಿದೆ. ಪೊಲೀಸರಿಗೆ ಉತ್ತಮ ವಸತಿಗಾಗಿ ಕಳೆದ ಸಾಲಿನಲ್ಲಿ 11 ಸಾವಿರ ವಸತಿ ಗೃಹ ನಿರ್ಮಾಣ ಮಾಡಿದ್ದು ಇದರಂತೆ ಮುಂದಿನ ದಿನದಲ್ಲಿ ಇಲ್ಲಿನ ಪೊಲೀಸ್‌ ಠಾಣೆ, ಮತ್ತು ವಸತಿಗೃಹಕ್ಕೆ ಬೇಕಾದ ಸೌಲಭ್ಯ ಒದಗಿಸಿ ಕೊಡಲಾಗುವುದು ಎಂದರು.

ಮುಸ್ಲಿಂ ಮತಕ್ಕಾಗಿ ಆರೆಸ್ಸೆಸ್‌ ಟೀಕಿಸಲು ಸಿದ್ದು, ಎಚ್‌ಡಿಕೆ ಪೈಪೋಟಿ : ಆರಗ

ಹಿಂದೆ ವರ್ಷಕ್ಕೆ ನಾಲ್ಕೈದು ನೂತನ ಪೊಲೀಸ್‌ ಠಾಣೆ ನಿರ್ಮಿಸಲಾಗುತ್ತಿತ್ತು. ಈಗ ಒಂದೇ ವರ್ಷಕ್ಕೆ 200 ಕೋಟಿ ಹಣ ಮೀಸಲಿಟ್ಟು 100 ಪೊಲೀಸ್‌ ಠಾಣೆ ನಿರ್ಮಾಣದ ಗುರಿ ಹೊಂದಿದ್ದು, ಶಿಥಿಲಗೊಂಡ ಹಳೆ ಠಾಣೆಯ ಬದಲಾಗಿ ಹೊಸ ಕಟ್ಟಡ ನಿರ್ಮಾಣವಾಗಲಿದೆ ಎಂದರು.

ವಸತಿ ಗೃಹ ನಿರ್ಮಾಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಇದರ ಜೊತೆ ಎಸ್‌ಎಫ್‌ಎಲ್‌ ಲ್ಯಾಬ್‌(FSL Lab) ಮೇಲ್ದರ್ಜೇಗೇರಿಸಿ, ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸೈಬರ್‌ ಅಪರಾಧದ ಮೇಲೂ ನಿಗಾ ಇಡಲಾಗುತ್ತಿದೆ. ಯಡಿಯೂರಪ್ಪ(BS Yediyurappa) ಮತ್ತು ಬಸವರಾಜ ಬೊಮ್ಮಾಯಿ(Basvaraj Bommai)  ಸರ್ಕಾರದಲ್ಲಿ ಪೊಲೀಸರಿಗೆ ಅತಿ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದರು.

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಪ್ರಮುಖರಾದ ವಿನೋದ ಪ್ರಭು, ಕುಮಾರ ಕವರಿ ತೊರ್ಕೆ, ತೊರ್ಕೆ ಗ್ರಾಂಪಂ ಅಧ್ಯಕ್ಷ ಆನಂದು ಕವರಿ, ಮಾಜಿ ತಾಂಪಂ ಸದಸ್ಯ ಮಹೇಶ ಶೆಟ್ಟಿಮತ್ತಿತರ ಸ್ಥಳೀಯ ಮುಖಂಡರು ಜೊತೆಯಲ್ಲಿದ್ದರು.
 

Follow Us:
Download App:
  • android
  • ios