ಹಿಂದೂಗಳು ನ್ಯಾಯಕ್ಕಾಗಿ ತಾಳ್ಮೆಯಿಂದ ಕಾದಿದ್ದಾರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನಾವಶ್ಯಕವಾಗಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ ಸೇಡಿನ ರಾಜಕಾರಣ ಮಾಡುತ್ತಿದ್ದು, ಇದು ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.
![Hindus patiently wait for justice Says MP Renukacharya At Honnali gvd Hindus patiently wait for justice Says MP Renukacharya At Honnali gvd](https://static-ai.asianetnews.com/images/01hdhfz324m04r6b3rspzafr9t/mp_363x203xt.jpg)
ಹೊನ್ನಾಳಿ (ಜ.09): ಅಯೋಧ್ಯೆಯಲ್ಲಿ ಜ. 22ರಂದು ರಾಮಮಂದಿರ ಉದ್ಘಾಟನೆ ಅಂಗವಾಗಿ ದೇಶಾದ್ಯಂತ ಹಮ್ಮಿಕೊಂಡಿರುವ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರ ಹಾಗೂ ಕರಪತ್ರ ವಿತರಣಾ ಮಹಾಸಂಪರ್ಕ ಅಭಿಯಾನ ಅಂಗವಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಬಿಜೆಪಿ ಕಾರ್ಯಕರ್ತರು ನ್ಯಾಮತಿ ಪಟ್ಟಣದಲ್ಲಿ ಮಹಾಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡು ಅಂದು ಎಲ್ಲರೂ ಉತ್ತರ ದಿಕ್ಕಿಗೆ ಐದು ದೀಪಗಳ ಹಚ್ಚಿ ಪೂಜೆ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನಾವಶ್ಯಕವಾಗಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ ಸೇಡಿನ ರಾಜಕಾರಣ ಮಾಡುತ್ತಿದ್ದು, ಇದು ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನ್ಯಾಯಾಲಯದಲ್ಲಿ ಅಯೋಧ್ಯೆ ಬಗ್ಗೆ ವಿಚಾರಣೆಗೆ ಅಂಗೀಕಾರ ಮಾಡಿದಾಗಲೂ ಕಾಂಗ್ರೆಸ್ ಮುಸ್ಲಿಂರ ಪರವಾಗಿ ವಕೀಲರ ನೇಮಿಸಿದ್ದರು, ಅಲ್ಲದೆ ಕೆಲವು ಕಾಂಗ್ರೆಸ್ ನಾಯಕರು ಅಯೋಧ್ಯೆ ಬಗ್ಗೆ ಹಿಂದೂಗಳ ಪರವಾಗಿ ತೀರ್ಪು ನೀಡಿದಾಗಲೂ ತೀರ್ಪನ್ನೇ ಪ್ರಶ್ನಿಸಿ ಮುಸ್ಲಿಂ ಪರ ತುಷ್ಟೀಕರಣ ವ್ಯಕ್ತಪಡಿಸಿದ್ದು ಇದೇ ಕೆಲವು ಕಾಂಗ್ರೆಸ್ಸಿಗರು ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳೇ ಟಾರ್ಗೆಟ್: ರೇಣುಕಾಚಾರ್ಯ ಆರೋಪ
ಸುಮಾರು ಐದುನೂರು ವರ್ಷಗಳ ಸತತ ಹೋರಾಟದ ಬಳಿಕ ನಮಗೆ ರಾಮಮಂದಿರ ವಿಚಾರದಲ್ಲಿ ಸುಪ್ರೀಂ ನ್ಯಾಯಾಲಯದ ತೀರ್ಪಿನ ನಂತರವೇ ಹಿಂದೂಗಳು ಅಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದು, ಅಲ್ಲಿಯವರೆಗೂ ಹಿಂದೂಗಳು ತಾಳ್ಮೆಯಿಂದ ಕಾಯ್ದಿದ್ದಾರೆ. ಯಾವುದೇ ಕಾರಣಕ್ಕೂ ದಾಳಿ ಮಾಡಲಿಲ್ಲ, ಆದರೂ ಕೆಲವು ಕಾಂಗ್ರೆಸ್ಸಿಗರು ಸುಖಾಸುಮ್ಮನೆ ಹಿಂದೂ ಸಂಘಟನೆ ಹಾಗೂ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರೂ ನ್ಯಾಯಾಲಯದಲ್ಲಿ ರಾಮಮಂದಿರ ವಿಚಾರದಲ್ಲಿ ಐತಿಹಾಸಿಕ ತೀರ್ಪು ನೀಡಿ ಹಿಂದೂಗಳ ಭಾವನೆಗೆ ಗೌರವ ನೀಡಿದೆ ಎಂದರು.
ದೇಶದಲ್ಲಿ ಕೋಮು ದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್: ಸಚಿವೆ ಶೋಭಾ ಕರಂದ್ಲಾಜೆ ಆರೋಪ
1992 ರಲ್ಲಿ ಕರಸೇವಕರಾಗಿ ರಾಮನ ಸೇವೆ ಮಾಡಲಿಕ್ಕೆ ಅಯೋಧ್ಯೆಗೆ ಹೋಗಿದ್ದ ನೂರಾರು ಕರಸೇವಕರ ಮಾರಣ ಹೋಮ ಆಗಿದೆ, ಸರಯು ನದಿಯಲ್ಲಿ ನೂರಾರು ಋಷಿಮುನಿಗಳ ಹಾಗೂ ಕರ ಸೇವಕರ ಕಾಲಿಗೆ ಮರಳು ಕಟ್ಟಿ ನೀರಿನಲ್ಲಿ ಮುಳುಗಿಸಿದ್ದರು ಅಲ್ಲಿನ ಸಮಾಜವಾದಿ ಪಕ್ಷದ ಸರ್ಕಾರ. ಇಂತಹ ಸಂದರ್ಭದಲ್ಲೂ ಕರಸೇವಕರು ತಮ್ಮ ಪ್ರಾಣಕ್ಕೂ ಹೆದರದೆ ಹೋರಾಟ ಮಾಡಿದ್ದಾರೆ ಎಂದರು. ನ್ಯಾಮತಿ ತಾಲೂಕು ಬಿಜೆಪಿ ಮುಖಂಡರಾದ ರತ್ನಾಕರ್, ಸದಾಶಿವ, ತಾ.ಪಂ. ಮಾಜಿ ಅಧ್ಯಕ್ಷ ರವಿಕುಮಾರ್, ಸೋಮಶೇಖರ್, ಶ್ರೀನಿವಾಸ್, ರತ್ನಮ್ಮ,ಗೀತಮ್ಮ, ಕುಮಾರ್ ಹಾಗೂ ಇತರರರಿದ್ದರು.