ಸಚಿವ ಸ್ಥಾನ: ಎಂಟಿಬಿ, ಶಂಕರ್, ವಿಶ್ವನಾಥ್ಗೆ ನೋಟಿಸ್
ಎಂ.ಟಿ.ಬಿ.ನಾಗರಾಜ್, ಆರ್. ಶಂಕರ್ ಹಾಗೂ ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಲು ಹೈಕೋರ್ಟ್ ನಿರಾಕರಿಸಿದೆ
ಬೆಂಗಳೂರು (ಸೆ.01): ವಿಧಾನ ಪರಿಷತ್ಗೆ ಇತ್ತೀಚೆಗೆ ಆಯ್ಕೆಯಾಗಿರುವ ಎಂ.ಟಿ.ಬಿ.ನಾಗರಾಜ್, ಆರ್. ಶಂಕರ್ ಹಾಗೂ ನಾಮ ನಿರ್ದೇಶನಗೊಂಡಿರುವ ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಲು ಹೈಕೋರ್ಟ್ ನಿರಾಕರಿಸಿದೆ. ಈ ಅರ್ಜಿ ಸಂಬಂಧ ಮೂವರೂ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದೆ. ಬೆಂಗಳೂರಿನ ವಕೀಲ ಎ.ಎಸ್. ಹರೀಶ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಅರ್ಜಿ ಕುರಿತು ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿತಲ್ಲದೆ, ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ಸಚಿವಾಲಯ, ಮುಖ್ಯಮಂತ್ರಿಗಳು, ಕಾನೂನು ಇಲಾಖೆ ಹಾಗೂ ಮೂವರೂ ವಿಧಾನ ಪರಿಷತ್ ಸದಸ್ಯರಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.
ನಾನ್ ರೆಡಿ, ನೀವ್ ರೆಡಿನಾ? HDKಗೆ ಸುಧಾಕರ್ ಸೂಪರ್ ಚಾಲೆಂಜ್!...
ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಆರ್. ಶಂಕರ್ ಮತ್ತು ಎಂ.ಟಿ.ಬಿ. ನಾಗರಾಜ್ ಇತ್ತೀಚೆಗೆ ಬಿಜೆಪಿಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾರೆ. ಎಚ್. ವಿಶ್ವನಾಥ್ ನಾಮನಿರ್ದೇಶಿತರಾಗಿದ್ದಾರೆ. ಅವರು ಶಾಸಕ ಸ್ಥಾನದಿಂದ ಅನರ್ಹತೆಗೊಳಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಈ ಮೂವರೂ ಸಚಿವ ಹುದ್ದೆ ಪಡೆದುಕೊಳ್ಳಬೇಕಾದರೆ ಮರು ಆಯ್ಕೆಯಾಗಬೇಕು. ವಿಧಾನ ಪರಿಷತ್ಗೆ ಪ್ರವೇಶ ಮಾಡಿರುವುದನ್ನು ಮರು ಆಯ್ಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಒಂದು ವೇಳೆ ಈ ಮೂವರನ್ನು ಸಚಿವ ಸಂಪುಟಕ್ಕೆ ಸೇರಿಸಿದರೆ ಅದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಲಿದೆ ಎಂದು ವಿವರಿಸಿದರು.
ಶಿರಾ ಉಪಚುನಾವಣೆಗೆ ಪಕ್ಷಗಳ ಪೈಪೋಟಿ : ಯಾವ ಪಕ್ಷದಿಂದ ಯಾರಿಗೆ ಟಿಕೆಟ್?...
ಈ ಮೂವರಿಗೂ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ಒಂದು ವೇಳೆ ಸಚಿವ ಸ್ಥಾನ ನೀಡಬೇಕಾದ ಸಂದರ್ಭ ಬಂದರೆ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿಯೇ ನಿರ್ಧಾರ ಕೈಗೊಳ್ಳುತ್ತಾರೆಂಬ ವಿಶ್ವಾಸ ನ್ಯಾಯಾಲಯಕ್ಕಿದೆ. ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ನೇಮಕಗೊಂಡರೆ, ಆಗ ಅದನ್ನು ಪ್ರಶ್ನಿಸಬಹುದು. ಈ ಹಂತದಲ್ಲಿಯೇ ಅರ್ಜಿ ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.