ನನ್ನ ಕ್ಷೇತ್ರದ ಬಗ್ಗೆ ಹೈಕಮಾಂಡ್ ತೀರ್ಮಾನ: ಸಿದ್ದರಾಮಯ್ಯ
ನನ್ನ ಮಾವನ ಊರು ಚಾಮರಾಜಪೇಟೆ. ಆ ಕಾರಣಕ್ಕಾಗಿ ಜಮೀರ್ ನನ್ನನ್ನು ಚಾಮರಾಜಪೇಟೆಯ ಅಳಿಯ ಎಂದು ಹಾಗೂ ನಾನು ಆ ಆಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಹೇಳಿರಬಹುದು. ಆದರೆ, ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ತೀರ್ಮಾನ ತೆಗೆದುಕೊಳ್ಳುವುದನ್ನು ಹೈಕಮಾಂಡ್ಗೆ ಬಿಟ್ಟಿದ್ದೇನೆ: ಸಿದ್ದು
ಬೆಂಗಳೂರು(ಡಿ.07): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ವಿಚಾರವನ್ನು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
‘ನಾನು ಚಾಮರಾಜಪೇಟೆಯ ಮಗ, ಸಿದ್ದರಾಮಯ್ಯ ಅವರು ಅಳಿಯ’ ಎಂದು ಶಾಸಕ ಜಮೀರ್ ಅಹಮದ್ ನೀಡಿದ್ದ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ನನ್ನ ಮಾವನ ಊರು ಚಾಮರಾಜಪೇಟೆ. ಆ ಕಾರಣಕ್ಕಾಗಿ ಜಮೀರ್ ನನ್ನನ್ನು ಚಾಮರಾಜಪೇಟೆಯ ಅಳಿಯ ಎಂದು ಹಾಗೂ ನಾನು ಆ ಆಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಹೇಳಿರಬಹುದು. ಆದರೆ, ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ತೀರ್ಮಾನ ತೆಗೆದುಕೊಳ್ಳುವುದನ್ನು ಹೈಕಮಾಂಡ್ಗೆ ಬಿಟ್ಟಿದ್ದೇನೆ. ಹಾಗಾಗಿ ನಾನು ಸ್ಪರ್ಧೆ ಮಾಡುವ ಕ್ಷೇತ್ರವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು. ಗುಜರಾತ್ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿ, ಒಂದೊಂದು ಮಾಧ್ಯಮಗಳು ಒಂದೊಂದು ರೀತಿ ಸಮೀಕ್ಷೆ ಕೊಡುತ್ತಿವೆ. ಡಿಸೆಂಬರ್ 8ಕ್ಕೆ ಫಲಿತಾಂಶ ಬರುತ್ತದೆ. ಅಲ್ಲಿಯವರೆಗೆ ಕಾಯೋಣ. ಅಲ್ಲಿನ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
Assembly Election: ಸಿದ್ದು ಸ್ಪರ್ಧೆ: ಕೋಲಾರದ ಕಾಂಗ್ರೆಸ್ ಸಭೆಯಲ್ಲಿ ಗದ್ದಲ
ಏಕೆಂದರೆ ಪ್ರತಿ ರಾಜ್ಯದ ರಾಜಕಾರಣ, ಸಮಸ್ಯೆಗಳು ಬೇರೆ ಬೇರೆ ಇರುತ್ತವೆ. ಅವುಗಳ ಆಧಾರದಲ್ಲಿ ಜನ ಮತಚಲಾಯಿಸುತ್ತಾರೆ. ಆದರೆ, ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತಗಳನ್ನು ಪಡೆಯುತ್ತಿದೆ ಎಂಬುದು ನಿಜ. ಆಮ… ಆದ್ಮಿ ಪಾರ್ಟಿ ಈಟಿಂಗ್ ದಿ ಕಾಂಗ್ರೆಸ್ ವೋಟ್ಸ್ ಎಂದರು.
ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ
ಗಡಿ ವಿವಾದವನ್ನು ಜೀವಂತವಾಗಿಡಲು ಮಹಾರಾಷ್ಟ್ರದವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರೇನೇ ಮಾಡಿದರೂ ಗಡಿ ವಿವಾದದಲ್ಲಿ ಮಹಾರಾಷ್ಟ್ರದವರೇ ಆದ ಮಹಾಜನ್ ಅವರು ನೀಡಿರುವ ವರದಿಯೇ ಅಂತಿಮ ಎಂದರು.
ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಪುಂಡಾಟಿಕೆ ಕುರಿತ ಪ್ರಶ್ನೆಗೆ, ಮಹಾಜನ್ ಮಹಾರಾಷ್ಟ್ರದವರು. ಅವರ ವರದಿಯನ್ನೇ ಮಹಾರಾಷ್ಟ್ರ ಸರ್ಕಾರ ಒಪ್ಪುವುದಿಲ್ಲ ಎಂದರೆ ಹೇಗೆ. ಆ ವರದಿ ಒಪ್ಪಿಲ್ಲ ಅಂದ್ರೆ ಅದು ಮಹಾರಾಷ್ಟ್ರದವರ ಪುಂಡಾಟಿಕೆ. ನಾವು ಪುಂಡಾಟಿಕೆಗೆ ಹೆದರಬಾರದು. ಉತ್ತಮ ನ್ಯಾಯವಾದಿಗಳನ್ನು ನೇಮಕ ಮಾಡಬೇಕು. ಸರ್ವ ಪಕ್ಷಗಳ ಸಭೆ ಕರೆಯುತ್ತೇನೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ. ಇನ್ನು ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.