ಯಡಿಯೂರಪ್ಪ ನಂತರ ಮುಂದ್ಯಾರು? ಕೇಳಿಬರುತ್ತಿವೆ ಆರೇಳು ಹೆಸರು
* ಬಿಎಸ್ ಯಡಿಯೂರಪ್ಪ ನಂತರ ಮುಂದ್ಯಾರು?
* ಮುಖ್ಯಮಂತ್ರಿ ಹುದ್ದೆಗೆ ಹಲವು ಹೆಸರುಗಳು
* ಮುಂದಿನ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿವೆ ಆರೇಳು ಹೆಸರುಗಳು
ಬೆಂಗಳೂರು, (ಜು.24): ಮುಖ್ಯಮಂತ್ರಿ ಬದಲಾವಣೆ ಖಚಿತ ಎನ್ನಲಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಹಲವು ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ.
ಹಲವು ಮಠಾಧೀಶರು ಯಡಿಯೂರಪ್ಪ ಪರ ಹೇಳಿಕೆಗಳನ್ನು ನೀಡುವುದು ಮುಂದುವರಿದಿದ್ದರೆ, ಮತ್ತೊಂದೆಡೆ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಸಿಎಂ ಹುದ್ದೆ ತ್ಯಜಿಸಲು 2 ವರ್ಷ ಹಿಂದೆಯೇ ಒಪ್ಪಂದ: ಬಿಜೆಪಿ ಸಂಸದನ ಸ್ಫೋಟಕ ಹೇಳಿಕೆ!
ಇದೇ ಜುಲೈ 26ಕ್ಕೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಬಿಜೆಪಿ ಹೈಕಮಾಂಡ್ ಮಾತ್ರ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದು ಮಾತ್ರ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಳೆದು ತೂಗಿ ಅರ್ಹರನ್ನೇ ಸಿಎಂ ಮಾಡುವ ಬಗ್ಗೆ ಹೈಕಮಾಂಡ್ ಪ್ಲಾನ್ ಮಾಡಿದೆ.
ಅದರಲ್ಲೂ ಮಹತ್ವದ ಹುದ್ದೆಗಳಿಗೆ ಅಚ್ಚರಿ ಅಂದ್ರೆ ಯಾರೂ ಊಹಿಸದ ವ್ಯಕ್ತಿಯನ್ನೇ ಆಯ್ಕೆ ಮಾಡುವುದರಲ್ಲಿ ಜೆಪಿ ನಡ್ಡಾ, ಅಮಿತ್ ಶಾ ಹಾಗೂ ನರೇಂದ್ರ ಮೋದಿ ಮಾಸ್ಟರ್ಗಳು. ಅದರಂತೆ ಕರ್ನಾಟಕದಲ್ಲೂ ಹೊಸ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಮುಖಕ್ಕೆ ಮಣೆ ಹಾಕುತ್ತಾರೆ ಎಂದು ಚರ್ಚೆಗಳು ಶುರುವಾಗಿವೆ.
ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಕೋನದೊಂದಿಗೆ ಅಂದ್ರೆ, ಜಾತಿವಾರು, ಪಕ್ಷ ನಿಷ್ಠೆ, ಸಂಘ ಪರಿವಾರ ಹೀಗೆ ಹಲವು ಮಾನದಂಡಗಳ ಮೇಲೆಯೇ ಹೈಕಮಾಂಡ್, ಸಿಎಂ ಕ್ಯಾಂಡಿಡೇಟ್ ಆಯ್ಕೆ ಮಾಡುತ್ತೆ. ಈ ಮಾನದಂಡಗಳ ಆಧಾರದ ಮೇಲೆ ನೋಡುವುದಾದರೆ ಆರೇಳು ಹೆಸರುಗಳು ಕೇಳಿಬರುತ್ತಿವೆ.
ಸಿಎಂ ಸ್ಥಾನಕ್ಕೆ ಕೇಳಿದ ಹೆಸರುಗಳು
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಬ್ರಾಹ್ಮಣ), ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲಾದ್ (ಪಂಚಮಸಾಲಿ ಲಿಂಗಾಯತ), ಬಸವರಾಜ್ ಬೊಮ್ಮಾಯಿ (ವೀರಶೈವ ಲಿಂಗಾಯತ), ಆರ್ ಅಶೋಕ್ (ಒಕ್ಕಲಿಗ), ಸಿಟಿ ರವಿ (ಒಕ್ಕಲಿಗ) ಇವರ ಹೆಸರುಗಳು ಚರ್ಚೆಯಲ್ಲಿವೆ. ಇನ್ನೊಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಹೆಸರು ಸಹ ಓಡಾಡುತ್ತಿದೆ. ಆದ್ರೆ, ಸಿಎಂ ಆಗುವುದು ಸಾಧ್ಯತೆಗಳು ಕಡಿಮೆ. ಒಂದು ವೇಳೆ ಅವರೇ ಸಿಎಂ ಆದರೂ ಅಚ್ಚರಿಪಡಬೇಕಿಲ್ಲ.