Asianet Suvarna News Asianet Suvarna News

ಎಚ್‌ಡಿಕೆ ಕುಟುಂಬ ನಂಗೆ ಬ್ಲಾಕ್ಮೇಲ್‌ ಮಾಡಿ ಹಣ ಪಡೆದಿತ್ತು: ಯೋಗೇಶ್ವರ್‌

30 ವರ್ಷಗಳ ಹಿಂದೆ ನಾನು ರಿಯಲ್‌ ಎಸ್ಟೇಟ್‌ ಆರಂಭಿಸಿದಾಗ ಎಚ್‌ಡಿಕೆ ಕುಟುಂಬ ನನ್ನನ್ನು ಬ್ಲಾಕ್‌ಮೇಲ್‌ ಮಾಡಿ ನನ್ನಿಂದ ಹಣ ಪಡೆದಿತ್ತು ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ಆರೋಪಿಸಿದ್ದಾರೆ. 

HDK family blackmailed me and got money says cp yogeshwar gvd
Author
Bangalore, First Published Aug 13, 2022, 5:00 AM IST

ಚನ್ನಪಟ್ಟಣ (ಆ.13): 30 ವರ್ಷಗಳ ಹಿಂದೆ ನಾನು ರಿಯಲ್‌ ಎಸ್ಟೇಟ್‌ ಆರಂಭಿಸಿದಾಗ ಎಚ್‌ಡಿಕೆ ಕುಟುಂಬ ನನ್ನನ್ನು ಬ್ಲಾಕ್‌ಮೇಲ್‌ ಮಾಡಿ ನನ್ನಿಂದ ಹಣ ಪಡೆದಿತ್ತು ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಾನು ರಿಯಲ್‌ ಎಸ್ಟೇಟ್‌ ಆರಂಭಿಸಿದಾಗ ಭೂಪರಿವರ್ತನೆ ಮುಂತಾದ ಕೆಲಸಗಳು ಆಗದಂತೆ ತಡೆಹಿಡಿಯಲಾಗಿತ್ತು. ನನ್ನನ್ನು ಹೆದರಿಸಿ ತೊಂದರೆ ಮಾಡಿ ನನ್ನಿಂದ ದುಡ್ಡು ತರಿಸಿಕೊಂಡಿದ್ದರು. ಬ್ಯಾಟಪ್ಪ, ನರಸಿಂಹಯ್ಯ, ವೆಂಟೇಶ್‌ ಎಂಬುವರು ನನ್ನನ್ನು ಹೆದರಿಸಿ ಹಣ ಕೊಡಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.

ಅಲ್ಲದೇ ಜಿಲ್ಲೆಯ ಎಲ್ಲ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕುಮಾರಸ್ವಾಮಿ ರೂಢಿಸಿಕೊಂಡಿದ್ದಾರೆ. ತೆಂಗಿನಕಾಯಿ ಮಾರಿಕೊಂಡು ಯೋಗೇಶ್ವರ್‌ ನೀರಾವರಿ ತಜ್ಞರಾದರಾ ಎಂದು ಕೇವಲವಾಗಿ ಮಾತನಾಡಿದ್ದಾರೆ. ನನ್ನ ವೃತ್ತಿಯ ಬಗ್ಗೆ ಸಹ ಲಘುವಾಗಿ ಮಾತನಾಡಿದ್ದಾರೆ. ಇದನ್ನು ಅವರು ಮತ್ತೆ ಮುಂದುವರಿಸಿದ್ದೇ ಆದಲ್ಲಿ ಅವರನ್ನು ನಿಲ್ಲಿಸಿ ಎದುರಿಗೇ ಪ್ರಶ್ನೆ ಮಾಡಬೇಕಾಗುತ್ತದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಹೇಳಿದ್ದಾರೆ.

ಹಗುರ ಮಾತು ಮುಂದುವರಿಸಿದರೆ ಎದುರಿಗೆ ನಿಲ್ಲಿಸಿ ಪ್ರಶ್ನೆ: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದು, ನನ್ನ ವೃತ್ತಿಯ ಬಗ್ಗೆ ಸಹ ಲಘುವಾಗಿ ಮಾತನಾಡಿದ್ದಾರೆ. ಇದನ್ನು ಅವರು ಮತ್ತೆ ಮುಂದುವರಿಸಿದ್ದೇ ಆದಲ್ಲಿ ಅವರನ್ನು ನಿಲ್ಲಿಸಿ ಎದುರಿಗೇ ಪ್ರಶ್ನೆ ಮಾಡಬೇಕಾಗುತ್ತದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಗುಡುಗಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಂಗಿನಕಾಯಿ ಮಾರಿಕೊಂಡು ಯೋಗೇಶ್ವರ್‌ ನೀರಾವರಿ ತಜ್ಞರಾದರಾ? ಎಂದು ಕೇವಲವಾಗಿ ಮಾತನಾಡಿದ್ದಾರೆ. ಹಾಗಿದ್ದರೆ, ನೀರಾವರಿ ಯೋಜನೆಗಳ ಬಗ್ಗೆ ಅರಿವಿಲ್ಲದ ಅವರು ಹೇಗೆ ನೀರಾವರಿ ತಜ್ಞರಾದರು ಎಂದು ಪ್ರಶ್ನಿಸಿದರು.

'ಕಾರ್ಪೋರೇಷನ್ ಕೊಠಡಿಯ ದಾಖಲೆಗಳಿಗೆ ಬೆಂಕಿ‌ ಇಟ್ಟಿದ್ದು ಇದೇ ಅಶ್ವಥ್ ನಾರಾಯಣ'

ಹಗುರ ಮಾತು ರೂಢಿ: ಜಿಲ್ಲೆಯ ಎಲ್ಲ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕುಮಾರಸ್ವಾಮಿ ರೂಢಿಸಿಕೊಂಡಿದ್ದಾರೆ. ಇದೀಗ ಸಚಿವ ಅಶ್ವತ್ಥ ನಾರಾಯಣ ವಿರುದ್ಧವೂ ಸಹ ಅವರು ನಾಲಗೆ ಹರಿಬಿಟ್ಟಿದ್ದಾರೆ. ಈ ರೀತಿ ಹಗುರವಾಗಿ ಮಾತನಾಡುವುದು ಅವರ ಯೋಗ್ಯತೆಗೆ ಸರಿಬರುವುದಿಲ್ಲ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ತೆಂಗಿನಕಾಯಿ ವ್ಯಾಪಾರ ಮಾಡಿದ್ದೇನೆ, ಬಾಳೆ ದಿಂಡು ಕುಯ್ದು ವ್ಯಾಪಾರ ಮಾಡಿದ್ದೇನೆ ರಿಯಲ್‌ ಎಸ್ಟೇಟ್‌ ಸೇರಿದಂತೆ ನಾನಾ ವೃತ್ತಿ ಮಾಡಿದ್ದೇನೆ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿಗೆ ಹಿನ್ನೆಲೆ ಇರಬಹದು.

ಎಚ್‌ಡಿಕೆ ಕೊಡುಗೆ ಶೂನ್ಯ: ನೀರಾವರಿ ಯೋಜನೆಗಳಿಗೆ ಕುಮಾರಸ್ವಾಮಿಯವರದು ನಯಾ ಪೈಸ ಕೊಡುಗೆ ಇಲ್ಲ. ಕಣ್ವ ಎಡದಂಡೆ, ಬಲದಂಡೆ. ಮಾಕಳಿ ನೀರಾವರಿ ಯೋಜನೆ ಎಲ್ಲ ನನ್ನ ಕೊಡುಗೆಗಳೇ. ನೀರಾವರಿ ಯೋಜನೆಗಳ ಬಗ್ಗೆ ಕಾಳಜಿ ಇಟ್ಟುಕೊಂಡು ನಾನು ಮಾಡಿದ ಯೋಜನೆಗಳು ಇವು. ಅವರಿಗೆ ಮಾಕಳಿ ನೀರಾವರಿ ಯೋಜನೆಯ ಏನೆಂದೇ ಗೊತ್ತಿಲ್ಲ ಎಂದು ಕಿಡಿಕಾರಿದರು.

ಗುತ್ತಿಗೆದಾರರು ಉದ್ಧಾರ: ಕೊಡಂಬಳ್ಳಿ-ಬಾಣಗಹಳ್ಳಿ ಸೇತುವೆ ಕುಸಿದು ಬಿದ್ದಿದೆ. ತಾಲೂಕಿನಲ್ಲಿ ಐದಾರು ಸೇತುವೆಗಳ ಅಗತ್ಯವಿದ್ದು, ಇದಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಆದರೆ, ಕುಮಾರಸ್ವಾಮಿ ಅವಧಿಯಲ್ಲಿ ಉದ್ಧಾರವಾದವರು ಇಬ್ಬರು ಗುತ್ತಿಗೆದಾರರು ಮಾತ್ರ ಎಂದು ಹರಿಹಾಯ್ದರು.

ಜನರೇ ನಿರ್ಧರಿಸುತ್ತಾರೆ: 2023ರ ಚುನಾವಣೆಯಲ್ಲಿ ತಾಲೂಕಿನಿಂದ ನಾನು ಸ್ಪರ್ಧಿಸುತ್ತೇನೆ ಅವರು ಸ್ಪರ್ಧಿಸಲಿ. ಅಲ್ಲಿ ಯಾರು ಏನು ಮಾಡಿದ್ದಾರೆ ಎಂದು ಜನ ತೀರ್ಮಾನಿಸುತ್ತಾರೆ. ಅದನ್ನು ಬಿಟ್ಟು ಹೀಗೆ ಉಡಾಫೆಯಾಗಿ ಮಾತನಾಡುವುದು ಸರಿಯಲ್ಲ ಎಂದರು.

ಸಚಿವರ ಜತೆ ಭಿನ್ನಾಭಿಪ್ರಾಯವಿಲ್ಲ: ನನ್ನ ಹಾಗೂ ಸಚಿವ ಅಶ್ವತ್ಥನಾರಾಯಣ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರು ಚನ್ನಾಗಿಯೇ ಇದ್ದೇವೆ. ಕೆಲವು ಕಾರ್ಯಗಳ ಒತ್ತಡದಿಂದ ಅವರೊಂದಿಗಿನ ಕಾರ್ಯಕ್ರಮಗಳಿಗೆ ಭಾಗಿಯಾಗಲು ಆಗಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಮುಂದಿನ ದಿನಗಳಲ್ಲಿ ನಾವಿಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಬಮೂಲ್‌ ಮಾಜಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ಯೋಜನಾ ಪ್ರಾ​ಕಾರದ ಅಧ್ಯಕ್ಷ ಮಲುವೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ಮುಖಂಡರಾದ ವಿ.ಬಿ.ಚಂದ್ರು, ಆನಂದ ಸ್ವಾಮಿ, ಕೂರಣಗೆರೆ ರವಿ, ಜಯಕುಮಾರ್‌ ಮುಂತಾದವರು ಇದ್ದರು.

ನನ್ನತ್ರ ನಿಮ್ಮಾಟ ನಡೆಯಲ್ಲ: ಅಶ್ವತ್ಥ್‌ಗೆ ಎಚ್‌ಡಿಕೆ ಎಚ್ಚರಿಕೆ

1001 ಗಣೇಶ ವಿತರಣೆ: ಈ ಬಾರಿ ನನ್ನ ಜನ್ಮದಿನ ಪ್ರಯುಕ್ತ ಯಾವುದೇ ಆಚರಣೆಗಳನ್ನು ಮಾಡಿಕೊಳ್ಳದಿರಲು ನಿರ್ಧರಿಸಿದ್ದೇನೆ. ಅದರ ಬದಲು ಇಡೀ ತಾಲೂಕಿನಲ್ಲಿ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, 1001 ಗಣೇಶ ಮೂರ್ತಿಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಹಬ್ಬ ಆಚರಿಸಿರಲಿಲ್ಲ. ಆದ್ದರಿಂದ ಈ ಬಾರಿ ಅದ್ದೂರಿಯಾಗಿ ಗೌರಿ-ಗಣೇಶ ಹಬ್ಬ ಆಚರಿಸಲು ಗಣೇಶ ಮೂರ್ತಿಗಳನ್ನು ವಿತರಿಸಲಾಗುತ್ತಿದೆ ಎಂದು ಯೋಗೇಶ್ವರ್‌ ತಿಳಿಸಿದರು.

Follow Us:
Download App:
  • android
  • ios