ದೊರೆಸ್ವಾಮಿ ಒಳ್ಳೆ ರಾಜಕಾರಣಿ ಎಂದು ರೇವಣ್ಣ ಪೇಚು!| ಕರೆಕ್ಟಾಗಿ ಹೇಳಿದ್ದೀರಿ ಎಂದು ತಿವಿದ ಬಿಜೆಪಿ

ಬೆಂಗಳೂರು[ಫೆ.04]: ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರನ್ನು ಒಳ್ಳೆಯ ರಾಜಕಾರಣಿ ಎಂದು ಹೇಳುವ ಮೂಲಕ ಜೆಡಿಎಸ್‌ ಸದಸ್ಯ ಎಚ್‌.ಡಿ.ರೇವಣ್ಣ ಎಡವಟ್ಟು ಮಾಡಿಕೊಂಡ ಪ್ರಸಂಗ ಜರುಗಿತು.

Add Asianetnews Kannada as a Preferred SourcegooglePreferred

ಮಂಗಳವಾರ ಸದನದಲ್ಲಿ ದೊರೆಸ್ವಾಮಿ ಕುರಿತು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ವಿರೋಧಿಸಿ ಧರಣಿ ನಡೆಯುತ್ತಿದ್ದ ವೇಳೆ ಮಾತನಾಡಲು ಮುಂದಾದ ಅವರು, ಸ್ವಾತಂತ್ರ್ಯ ಹೋರಾಟಗಾರ ಎನ್ನುವ ಬದಲು ರಾಜಕಾರಣಿ ಎಂದು ಹೇಳಿಕೆ ನೀಡಿದರು. ಇದಕ್ಕೆ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದರು.

ಚರ್ಚೆಗೆ ಅವಕಾಶ ನೀಡಬೇಕು ಎಂದು ಎಚ್‌.ಡಿ.ರೇವಣ್ಣ ಸಭಾಧ್ಯಕ್ಷರಲ್ಲಿ ಕೋರಿದಾಗ ಕಾಂಗ್ರೆಸ್‌ ಧರಣಿ ನಡೆಸುತ್ತಿದ್ದುದರಿಂದ, ತಮಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಮಾತನಾಡಲು ಅವಕಾಶ ನೀಡದಿದ್ದರೆ ಜೆಡಿಎಸ್‌ ಸಭಾತ್ಯಾಗ ಮಾಡಲಿದೆ ಎಂದು ಹೇಳಿದರು. ಆಗಲೂ ಕಾಂಗ್ರೆಸ್‌ ಸದಸ್ಯರ ಧಿಕ್ಕಾರದ ಕೂಗು ಅವರಿಗೆ ಅಡ್ಡಿಪಡಿಸಿತು. ಕೊನೆಗೆ ಕಾಂಗ್ರೆಸ್‌ ಸದಸ್ಯರಲ್ಲಿಯೇ ಮನವಿ ಮಾಡಿಕೊಂಡು ಸುಮ್ಮನಿರಬೇಕು ಎಂದು ವಿನಂತಿಸಿದರು. ಮಾತನಾಡುವ ವೇಳೆ ದೊರೆಸ್ವಾಮಿ 100 ವರ್ಷ ತುಂಬಿದ ಒಳ್ಳೆಯ ರಾಜಕಾರಣಿ ಎಂದರು. ತಕ್ಷಣ ಬಿಜೆಪಿ ಸದಸ್ಯರು ಕರೆಕ್ಟ್ ಆಗಿ ಹೇಳಿದ್ದೀರಿ ಎಂದು ಹೇಳಿದರು.

ಬಳಿಕ ತಮ್ಮ ಹೇಳಿಕೆಯಿಂದಾದ ಎಡವಟ್ಟಿನಿಂದ ಎಚ್ಚೆತ್ತ ಎಚ್‌.ಡಿ.ರೇವಣ್ಣ ಅವರು ದೊರೆಸ್ವಾಮಿ ಅವರು ರಾಜಕಾರಣಿ ಅಲ್ಲ, ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಲು ಮುಂದಾದೆ. ಅಷ್ಟರಲ್ಲಿ ಮಾತಿಗೆ ಅಡ್ಡಿಪಡಿಸಿದ್ದೀರಿ ಎಂದು ಸಮಜಾಯಿಷಿ ನೀಡಿದರು.