ಸಂಕ್ರಾಂತಿ ನಂತರ ದೊಡ್ಡ ಮಟ್ಟದಲ್ಲಿ ಬದಲಾವಣೆ: ಹೊಸ ಬಾಂಬ್ ಸಿಡಿಸಿದ ಎಚ್ಡಿಕೆ
ಬಿಜೆಪಿ ಜೊತೆ ಹೊಂದಾಣಿಕೆ ಹಾಗೂ ಕಾಂಗ್ರೆಸ್ ಶಾಲಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು, (ಜ.04): ಸಂಕ್ರಾಂತಿ ನಂತರ ಪಕ್ಷದ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಲು ನಿರ್ಧಾರ ಮಾಡಿದ್ದೇವೆ. ಆ ಹಿನ್ನೆಲೆಯಲ್ಲಿ ಮೊದಲ ಸಭೆ ನಡೆಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
"
ಬೆಂಗಳೂರಿನಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಜೆಡಿಎಸ್ ಅನ್ನು ಯಾವುದೇ ಪಕ್ಷದೊಂದಿಗೆ ಮರ್ಜ್ ಮಾಡುವ ಅಥವಾ ಬೆಂಬಲಿಸುವ ಉದ್ದೇಶ ಇಲ್ಲ, ಸೀಟು ಹೊಂದಾಣಿಕೆ ವಿಚಾರವೂ ನಮ್ಮ ಮುಂದೆ ಇಲ್ಲ. ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷಗಳ ಚಿನ್ಹೆ ಮೇಲೆ ನಡೆಯಲ್ಲ. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ನಿಜವಾದ ರಾಜಕಾರಣ ಆರಂಭ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರಿಗಿಂತಲೂ ನನಗೆ ಪ್ರಧಾನಿಯೊಂದಿಗೆ ಉತ್ತಮ ಬಾಂಧವ್ಯ: ಎಚ್ಡಿಕೆ ಬಾಂಬ್
ಇವತ್ತಿನ ಬಿಜೆಪಿ ಆಡಳಿತ ಮತ್ತು ಕಾಂಗ್ರೆಸ್ ನಡವಳಿಕೆಯೂ ನನಗೆ ಗೊತ್ತು. ಮುಂದಿನ ದಿನಗಳಲ್ಲಿ ಜೆಡಿಎಸ್ ಸ್ವಂತಂತ್ರವಾಗಿ ಅಧಿಕಾರ ಕೊಟ್ರೆ ಏನೆಲ್ಲಾ ಕೆಲಸ ಮಾಡ್ತೀವಿ ಎಂಬ ಯೋಜನೆ ಮುಂದಿಟ್ಟಿದ್ದೇವೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಕಾಲದ ಕಾಂಗ್ರೆಸ್ ಶಾಲಿನ ಬಗ್ಗೆ ನಾನು ಲೇವಡಿ ಮಾಡಿಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಾಂಗ್ರೆಸ್ ಶಾಲಿನ ಬಗ್ಗೆ ಲೇವಡಿ ಮಾಡಿದ್ದೇನೆ. ನಾನಾಗಲೀ, ನನ್ನ ತಂದೆಯವರಾಗಲಿ ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಲಿಲ್ಲ. ದೇವೇಗೌಡರ ಮನೆ ಬಾಗಿಲಿಗೆ ಬಂದಿದ್ದು ಕಾಂಗ್ರೆಸ್. ಪ್ರಧಾನಿ ಪಟ್ಟ ದೇವೇಗೌಡರು ಆಸೆ ಪಟ್ಟಿರಲಿಲ್ಲ. ಕರ್ನಾಟಕ ಬಿಟ್ಟು ಹೋಗುವ ಮನಸ್ಸಿರಲಿಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ನಾನು ಬಿಜೆಪಿ ಹಾಗೂ ಕಾಂಗ್ರೆಸ್ ಶಾಲಿನ ಬೆಂಬಲ ಪಡೆದೆ. ಎರಡು ಪಕ್ಷಗಳ ಬೆಂಬಲದಿಂದ ಎರಡು ಬಾರಿ ಸಿಎಂ ಆಗಿದ್ದೆ. ಆದರೆ ನಾನು ಅವರ ಮನೆಬಾಗಿಲಿಗೆ ಹೋಗಲಿಲ್ಲ
ಯಾಕೆ ಪದೇ ಪದೇ ಜೆಡಿಎಸ್ ಬಿಜೆಪಿ ವಿಲೀನ ಅಥವಾ ಮೈತ್ರಿ ಎಂಬ ವಿಚಾರಗಳು ಬರ್ತಿವೆ. ನಮ್ಮ ಪಕ್ಷದ ಯಾರೇ ಆಗಲಿ ಬಿಜೆಪಿ ಮುಂದೆ ಹೋಗಿ ಅರ್ಜಿ ಹಾಕಿಕೊಂಡಿಲ್ಲ ಈ ಪಕ್ಷವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದರು.