5 ನೇ ದಿನದ ಜೆಡಿಎಸ್ ಕಾರ್ಯಾಗಾರಕ್ಕೆ ಇಂದು ರಾಮನಗರದ ಬಿಡದಿಯ ಕೇತನಗಾನಹಳ್ಳಿಯಲ್ಲಿ ಚಾಲನೆ  ಜನತಾ ಪರ್ವ 1.0 - ಮಿಷನ್ 123  ಅಲ್ಪಸಂಖ್ಯಾತರ ಕಾರ್ಯಾಗಾರಕ್ಕೆ ಚಾಲನೆ

ರಾಮನಗರ (ಅ.03): 5 ನೇ ದಿನದ ಜೆಡಿಎಸ್ (JDS) ಕಾರ್ಯಾಗಾರಕ್ಕೆ ಇಂದು ರಾಮನಗರದ (Ramanagara) ಬಿಡದಿಯ ಕೇತನಗಾನಹಳ್ಳಿಯಲ್ಲಿ ಚಾಲನೆ ನೀಡಲಾಗಿದೆ. ಜನತಾ ಪರ್ವ 1.0 - ಮಿಷನ್ 123 ಅಲ್ಪಸಂಖ್ಯಾತರ ಕಾರ್ಯಾಗಾರಕ್ಕೆ ಚಾಲನೆ ದೊರಕಿದೆ.

ರಾಜ್ಯದ ಪ್ರಮುಖ ಮುಸ್ಲಿಂ ಮುಖಂಡರು (Muslim Leaders) ಕಾರ್ಯಾಗಾರದಲ್ಲಿ ಭಾಗಿಯಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (HD Devegowda) - ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜೆಡಿಎಸ್ ಮುಖಂಡರಾದ ಜಫ್ರುಲ್ಲಾ ಖಾನ್, ಫಾರುಖ್ ಖಾನ್ ಸೇರಿ ಹಲವರು ಭಾಗಿಯಾಗಿದ್ದು, ಸಾವಿರಕ್ಕೂ ಹೆಚ್ಚು ಜನರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಾಗಾರದಲ್ಲಿ ಪ್ರಮುಖವಾಗಿ 2023 ರ ಚುನಾವಣೆ ವಿಚಾರವಾಗಿ ಪಕ್ಷದ ಯೋಜನೆ ಬಗ್ಗೆ ಪ್ರಸ್ತಾಪ ಮಾಡಲಾಗುತ್ತಿದೆ. 

ಬಾಗಿಲು ತಟ್ಟಿದ್ದು ಕಾಂಗ್ರೆಸ್, ದೊಣ್ಣೆ ನಾಯಕನ ಕೇಳಿ ಅಭ್ಯರ್ಥಿ ಹಾಕ್ಬೇಕಾ? ಸಿದ್ದು ವಿರುದ್ಧ HDK ವಾಗ್ದಾಳಿ!

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನಾಲ್ಕು ದಿನಗಳ ಮೊದಲ ಕಾರ್ಯಗಾರ ಯಶಸ್ವಿಯಾಗಿದೆ. ಇಂದು ಅಲ್ಪ ಸಂಖ್ಯಾತರ ಕಾರ್ಯಗಾರ ನಡೆಯುತ್ತಿದೆ. ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳು, ಮತ್ತು ಮುಂದಿನ ದಿನಗಳಲ್ಲಿ ಜೆಡಿಎಸ್ ಕಾರ್ಯಕ್ರಮ ಹಾಗೂ ರಕ್ಷಣೆ ವಿಚಾರ ತಿಳಿಸಲಾಗುತ್ತದೆ. ಕಾಂಗ್ರೆಸ್ (Congress) ನಾಯಕರು ನಮ್ಮ ಪಕ್ಷದ ಬಗ್ಗೆ ನಡೆಸಿದ ಅಪಪ್ರಚಾರದ ಬಗ್ಗೆಯೂ ಈ ಕಾರ್ಯಗಾರದಲ್ಲಿ ಮಾತನಾಡುತ್ತೇವೆ ಎಂದು ಹೇಳಿದರು. 

ಎಲ್ಲಾ ಸಮಾಜದವರಿಗೂ ಜೆಡಿಎಸ್ ಗೌರವ ನೀಡುತ್ತಿದೆ. ಈ ಸಮಾಜಕ್ಕೆ ನಾವು ಹಲವಾರು ಕೊಡುಗೆ ನೀಡಿದ್ದೇವೆ. ಮುಂದಿನ ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಅಲ್ಪ ಸಂಖ್ಯಾತರು ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ತಿಳಿಸಲಾಗುತ್ತದೆ ಎಂದರು.

ಇನ್ನು ನಮ್ಮ ಪಕ್ಷದ ಶಕ್ತಿ ಬಳಕೆ ಮಾಡಿಕೊಂಡು ನಮ್ಮ ಕಾರ್ಯಕರ್ತರನ್ನು ನಡು ನೀರಿನಲ್ಲಿ ಕೆಲವರು ಬಿಟ್ಟು ಹೋದರು. ಇವರಿಂದಲೇ ಪಕ್ಷದ ಸಂಘಟನೆ ಹಿಂದೆ ಉಳಿದಿದ್ದು. ನಿನ್ನೆಯೂ ಒಬ್ಬ ಶಾಸಕರು ಹೇಳ್ತಾ ಇದ್ದರು. ನಾನು ಪಕ್ಷ ಬಿಟ್ಟು ಹೋಗಲ್ಲ ನಾಯಕರೇ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು. ಒಳ ಒಳಗೇ ಸಂಚು ರೂಪಿಸಿಕೊಂಡು ನನ್ನ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಅಸಮಾಧಾನ ಹೊರಹಾಕಿದರು. 

ಜೆಡಿಎಸ್‌ನಲ್ಲಿ ನಿಖಿಲ್- ಪ್ರಜ್ವಲ್ ಜುಗಲ್ಭಂಧಿ ಶುರು, ಇನ್ನೇನಿದ್ರೂ ಎಚ್‌ಡಿಕೆ ಆಟ..?

ಪಕ್ಷ ತೊರೆಯುವ ಬಗ್ಗೆ ಕೆಲವರು ಅನಗತ್ಯವಾಗಿ ಗೊಂದಲದ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಅವರೇ ಸ್ವತಃ ಗೊಂದಲ ಸೃಷ್ಟಿಸಿಕೊಂಡು ಬಹಿರಂಗ ಹೇಳಿಕೆ ಕೊಡುವುದು ಯಾಕೆ ? ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಬಹುದಾದ ವಿಚಾರವನ್ನ ಹೊರಗೆ ಹೇಳುವುದು ಸರಿಯಲ್ಲ. ಏನೇ ಸಮಸ್ಯೆ, ಗೊಂದಲ ಇದ್ದರೂ ಬರಲಿ. ಪಕ್ಷದ ಸಂಘಟನೆಗೆ ಹೊಡೆತ ಬೀಳುವಂತೆ ನಡೆದುಕೊಳ್ಳಬಾರದು. ಶಾಸಕರ ಸಮಸ್ಯೆಗಳನ್ನು ಬಗೆಹರಿಸಲು ನಾನು ಸದಾ ಸಿದ್ಧನಿದ್ದೇನೆ. ಆದರೆ, ಮೂರ್ನಾಲ್ಕು ಮಂದಿ ಪಕ್ಷ ತೊರೆಯುವ ಮಾತನಾಡಿದ್ದಾರೆ. ಪಕ್ಷ ತ್ಯಜಿಸುವ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನ ಹುಡುಕಿದ್ದೇವೆ ಎಂದು ಉತ್ತರಿಸಿದರು. 

ಕಾಂಗ್ರೆಸ್ ನಿಂದಲೂ ಸಣ್ಣಪುಟ್ಟ ಜಾತಿಗಳ ಕಾರ್ಯಾಗಾರ ಆಯೋಜನೆ ಮಾಡುತ್ತಿರುವ ವಿಚಾರದ ಬಗ್ಗೆಯು ಮಾತನಾಡಿದ ಎಚ್‌ಡಿಕೆ ನಮ್ಮ ಪಕ್ಷ ನಿಷ್ಕ್ರಿಯರಾಗಿಬಿಟ್ಟಿದೆ ಅಂದುಕೊಂಡಿದ್ದರು. ಈಗ ಜೆಡಿಎಸ್ ಬಗ್ಗೆ ಕಾಂಗ್ರೆಸ್ ನಾಯಕರಿಗೆ ನಡುಕ ಉಂಟಾಗಿರುವಂತಿದೆ. ಅದೇ ಕಾರಣಕ್ಕೆ ನಮ್ಮಂತೆಯೇ ಕಾರ್ಯಾಗಾರ ಆಯೋಜಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.