ದಳಕ್ಕೆ ಹೀನಾಯ ಸೋಲು : ಸಿದ್ದರಾಮಯ್ಯ ವಿರುದ್ಧ ಗುಡುಗಿದ ಎಚ್ಡಿಕೆ
ಬಸವ ಕಲ್ಯಾಣ ಕ್ಷೇತ್ರ ಇದೀಗ ಉಪ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿದ್ದು, ಇದೇ ವೇಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೈ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು (ಮೇ.03): ಕೆಲವು ವರ್ಷಗಳ ಹಿಂದೆ ದಳಪತಿಗಳ ಭದ್ರಕೋಟೆಯಾಗಿದ್ದ ಬಸವ ಕಲ್ಯಾಣ ಕ್ಷೇತ್ರ ಇದೀಗ ಉಪ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿದ್ದು, ಇದೇ ವೇಳೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೈ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಎಚ್ಡಿಕೆ ಮಾನ್ಯ ಸಿದ್ದರಾಮಯ್ಯನವರೇ, ಬಸವ ಕಲ್ಯಾಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಕ್ಕಾಗಿ ಕಾಂಗ್ರೆಸ್ ಸೋತಿದೆ ಎಂದು ಹೇಳಿದ್ದೀರಿ. ನಿಮಗೆ ಅಲ್ಪಸಂಖ್ಯಾತರ ಮೇಲೆ ಕೋಪವೋ? ಜೆಡಿಎಸ್ ಮೇಲೆ ಅಸಮಾಧಾನವೋ? ಅರ್ಥವಾಗುತ್ತಿಲ್ಲ.. ಅಷ್ಟಕ್ಕೂ ನೀವು ಯಾವ ಅಲ್ಪಸಂಖ್ಯಾತ ನಾಯಕರನ್ನೂ ಬೆಳೆಸಿದ ನಿದರ್ಶನ ಇಲ್ಲ ಎಂದಿದ್ದಾರೆ.
ಮುಂದಿನ ಮುಖ್ಯಮಂತ್ರಿ ಹುದ್ದೆ ಕನಸು ಕಾಣುತ್ತಿರುವ ನೀವು ಕನಿಷ್ಠ ಪಕ್ಷ ಸ್ವಂತ ಪಕ್ಷಕ್ಕಾದರೂ ಮೋಸ ಮಾಡುವುದನ್ನು ಬಿಡಿ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಎಲ್ಲ ಸ್ವಾತಂತ್ರ್ಯವನ್ನು ಹೊಂದಿದೆ ಮತ್ತು ಬರುವ ದಿನಗಳಲ್ಲಿ ಮತ್ತಷ್ಟು ಸಮರ್ಥವಾಗಿ ಜನರ ವಿಶ್ವಾಸ ಗೆಲ್ಲಲಿದೆ ಎಂಬುದು ನಿಮಗೆ ಗೊತ್ತಿರಲಿ ಎಂದಿದ್ದಾರೆ.
ಇಲ್ಲಿ ಸ್ಥಳೀಯ ನಾಯಕತ್ವದ ಕೊರತೆ ಜೆಡಿಎಸ್ ಸೋಲಿಗೆ ಕಾರಣವಾಗಿದ್ದು, ಅಭ್ಯರ್ಥಿ ಸೈಯದ್ ಯಸ್ರೂಬ್ ಅಲಿ 11,402 ಮತಗಳನ್ನು ಪಡೆದುಕೊಂಡು ಸೋಲುಂಡರು.
ಇವರು ಗೆಲುವಿನ ಸರದಾರ : ಉಸ್ತುವಾರಿ ಹೊತ್ತಲ್ಲಿ ಸೋಲೇ ಇಲ್ಲ ...
ಇನ್ನು ಇಲ್ಲಿ ದಿವಂಗತ ನಾರಾಯಣ ರಾವ್ ಅವರ ಪತ್ನಿ ಮಾಲಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿಸಿದ್ದು ಬಿಜೆಪಿ ಅಭ್ಯರ್ಥಿ ಶರಣು ಸಲಗರ ವಿರುದ್ಧ ಸೋಲುಂಡಿದ್ದು ಇಲ್ಲಿ ಅನುಕಂಪದ ಅಲೆ ಕೆಲಸ ಮಾಡಿಲ್ಲ.
ಇದಕ್ಕೆ ಜೆಡಿಎಸ್ ನಿಲ್ಲಿಸಿದ್ದ ಅಲ್ಪಸಂಖ್ಯಾತ ಅಭ್ಯರ್ಥಿ ಕಾರಣ ಎನ್ನುವ ದೂರುಗಳು ಕೇಳಿಬಂದಿತ್ತು. ಕಾಂಗ್ರೆಸ್ ಮತಗಳ ವಿಭಜನೆ ಮಾಡುವ ದೃಷ್ಟಿಯಿಂದ ಸೈಯದ್ ಯಸ್ರೂಬ್ ಅಲಿ ಅವರಿಗೆ ಟಿಕೆಟ್ ನೀಡಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿತ್ತು. ಈ ಸಂಬಂಧ ಮಾಜಿ ಸಿಎಂ ಎಚ್ಡಿಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.