Asianet Suvarna News Asianet Suvarna News

ಕಾರ್ಮಿಕರನ್ನ ನಡೆಸಿಕೊಳ್ಳುತ್ತಿರುವ ರೀತಿಗೆ ಸರ್ಕಾರದ ವಿರುದ್ಧ ಕೆಂಡಕಾರಿದ ಕುಮಾರಸ್ವಾಮಿ

ರಾಜಧಾನಿಯಿಂದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ರಾಜ್ಯ ಸರಕಾರ ಸರಿಯಾಗಿ ನಿಭಾಯಿಸದೇ ವಿರೋಧ ಪಕ್ಷಗಳಿಗೆ ಆಹಾರವಾಗಿದೆ.

HD kumaraswamy Hits Out at BSY Govt Over Migrant workers
Author
Bengaluru, First Published May 3, 2020, 4:19 PM IST

ಬೆಂಗಳೂರು, (ಮೇ.03):  ಲಾಕ್‌ಡೌನ್ ಹಿನ್ನಲೆ ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕರ್ನಾಟಕ ಸರ್ಕಾರ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿದೆ. 

ಆದ್ರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಯ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ನಿಂದ ಸಂಚಾರ ಮಾಡುತ್ತಿವೆ. ಆದರೆ, ಊರಿಗೆ ಹೋಗುವ ಧಾವಂತದಲ್ಲಿ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.

ವಿರೋಧ ಪಕ್ಷ 'ಕೈ'ಗೆ ತಾನಾಗಿಯೇ ಪ್ರಬಲ ಅಸ್ತ್ರವನ್ನು ನೀಡಿದ ಸರ್ಕಾರ

ಸರ್ಕಾರದ ಈ ಯಡವಟ್ಟಿಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ವಲಸೆ ಕಾರ್ಮಿಕರು ಊರಿಗೆ ಹೋಗಲು ಅವಕಾಶ ಮಾಡಿಕೊಟ್ಟಿರುವ ರಾಜ್ಯ ಸರ್ಕಾರ ಜನರು ಭಾರಿ ಪ್ರಮಾಣದಲ್ಲಿ ಗುಂಪುಗೂಡುವಂತೆ ಮಾಡಿದೆ. ಈ ಮೂಲಕ ಕಾರ್ಮಿಕರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದು.

ವಿದೇಶದಿಂದ ಸೋಂಕು ಹೊತ್ತು ಬರುವವರನ್ನೆಲ್ಲ ಬರಮಾಡಿಕೊಂಡ ಸರ್ಕಾರ ಕೊನೆಗೆ ಪೂರ್ವ ಸಿದ್ಧತೆಗಳಿಲ್ಲದೇ, ಜನರಿಗೆ ಮಾಹಿತಿ ನೀಡದೇ ಲಾಕ್‌ಡೌನ್‌ ಜಾರಿ ಮಾಡಿತು. ಜನರೂ ಸರ್ಕಾರದ ನಿರ್ಧಾರವನ್ನು ಪಾಲಿಸಿದ್ದಾರೆ. ಹೀಗಾಗಿ ದೇಶ ಮತ್ತು ರಾಜ್ಯದಲ್ಲಿ ಕೋವಿಡ್‌ ಸಂಪೂರ್ಣ ನೀಗದೇ ಹೋದರೂ, ಸಂಭವಿಸಬಹುದಾಗಿದ್ದ ದೊಡ್ಡ ಪ್ರಮಾದ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟು ದಿನ ಸಾವಿರಾರು ಕೋಟಿ ರೂಪಾಯಿಗಳನ್ನು ನಷ್ಟ ಮಾಡಿಕೊಂಡು ಪಾಲಿಸಲಾದ ಲಾಕ್‌ಡೌನ್‌ನಿಂದ ಗಳಿಸಿಕೊಂಡಿದ್ದನ್ನು ಸರ್ಕಾರ ಒಂದು ಅವೈಜ್ಞಾನಿಕ ನಡೆಯಿಂದ ಕಳೆದುಕೊಳ್ಳಬಾರದು. ಕಾರ್ಮಿಕರು ಮತ್ತು ಹಳ್ಳಿಗಳು ಸೌಖ್ಯವಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರನ್ನು ಊರುಗಳಿಗೆ ತಲುಪಿಸುವುದು ಆಗಬೇಕಾದ ಕಾರ್ಯವೇ. ಆದರೆ, ಈ ಕಾರ್ಯದಲ್ಲಿ ಅವರ ಆರೋಗ್ಯಕ್ಕೆ ಅಪಾಯ ಎದುರಾಗಬಾರದು. ಅವರ ಹಿತಕ್ಕಾಗಿ ಕೈಗೊಂಡ ಈ ನಿರ್ಧಾರವೇ ಅವರಿಗೆ ಸಂಚಕಾರವಾಗಿ ಪರಿಣಮಿಸಬಾರದು. ಬಸ್‌ಗಳಲ್ಲೂ ದೈಹಿಕ ಅಂತರ ಪಾಲನೆಯಾಗಲಿ, ಸೂಕ್ತ ರೀತಿಯ ಪರೀಕ್ಷೆಗಳು ನಡೆಯಲಿ ಎಂದು ಆಗ್ರಹಿಸಿದರು.

Follow Us:
Download App:
  • android
  • ios