ಕುಮಾರಸ್ವಾಮಿ ಬಿಜೆಪಿ ಬಗ್ಗೆ 'ಮೃದು ಧೋರಣೆ'? ದೇವೇಗೌಡ್ರು ಕೊಟ್ರು ಸ್ಪಷ್ಟನೆ
ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ "ಪ್ರಜಾಪ್ರಭುತ್ವ ಉಳಿಸಿ" ಎಂದು ಹೋರಾಟ ನಡೆಸುತ್ತಿದೆ ಎಂದ ಕುಮಾರಸ್ವಾಮಿ ಹೇಳಿಕೆಗೆ ದೊಡ್ಡಗೌಡ್ರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, (ಜುಲೈ.28): ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿಲ್ಲ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ "ಪ್ರಜಾಪ್ರಭುತ್ವ ಉಳಿಸಿ" ಎಂದು ಹೋರಾಟ ನಡೆಸುತ್ತಿದೆ ಎಂದು ಕುಮಾರಸ್ವಾಮಿ ಕೈ ನಾಯಕನ್ನು ಟೀಕಿಸಿದ್ದರು. ಇದು ಬಿಜೆಪಿ ಮೇಲಿನ ಮೃದುಧೋರಣೆ ಎನ್ನುವಂತಿತ್ತು. ಇದೀಗ ಇದಕ್ಕೆ ದೇವೇಗೌಡ್ರು ಸ್ಪಷ್ಟನೆ ಕೊಟ್ಟಿದ್ದಾರೆ.
ಕುದುರೆ ವ್ಯಾಪಾರಕ್ಕೆ ಕಾಂಗ್ರೆಸ್ ಅನ್ವರ್ಥ ನಾಮ: ಖರೀದಿ ವಿಚಾರದಲ್ಲಿ 2 ಪಕ್ಷಗಳೂ ಅಪರಾಧಿಗಳೇ ಎಂದ ಎಚ್ಡಿಕೆ
ಈ ಕುರಿತು ಇಂದು (ಮಂಗಳವಾರ) ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರಲು ಯಾರು ಕಾರಣ ಎಂಬುವುದು ಜನತೆಗೆ ಗೊತ್ತಿದೆ, ಇದರ ಬಗ್ಗೆ ಮಾತಾಡೋಕೆ ಹೋಗಲ್ಲ ಎಂದರು.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದಿದ್ದು ಯಾರು? ರಾಜಾಸ್ಥಾನ ದಲ್ಲಿ ಕಾಂಗ್ರೆಸ್ ಸರ್ಕಾರ ತೆಗೀತಾ ಇರೋದು ಯಾರು? ಎರಡೂ ರಾಷ್ಟ್ರೀಯ ಪಕ್ಷಗಳು ಜನತೆಯ ತೀರ್ಪು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಕೇವಲ ಅಧಿಕಾರ ಹಿಡಿಯುವುದೇ ಇವರಿಗೆ ಮುಖ್ಯ ಆಗಿದೆ ಎಂದು ಕಿಡಿಕಾರಿದರು.
ಈ ವಿಚಾರವಾಗಿ ಎಷ್ಟು ದಿನಾ ಅಂತಾ ಸುಮ್ನೆ ಮಾತನಾಡುತ್ತಾ ಹೋಗೋದು, ನಮ್ಮ ಪಕ್ಷವನ್ನು ಉಳಿಸೋದು ನಮ್ಮ ಗುರಿ. ಅಧಿಕಾರಕ್ಕೆ ಬರುತ್ತೇವೆಯೋ ಇಲ್ಲ ವಿರೋಧ ಪಕ್ಷದಲ್ಲಿ ಇರುತ್ತೇವೆಯೋ ಅದು ಜನ ತೀರ್ಮಾನ ಮಾಡಬೇಕು .ಹಾಗಂತ ನಮ್ಮ ಜನತೆಗೆ ತೊಂದರೆ ಆದರೆ ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಹೇಳಿದ್ದೇನು?
ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದ ಎಚ್ಡಿ ಕುಮಾರಸ್ವಾಮಿ ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ "ಪ್ರಜಾಪ್ರಭುತ್ವ ಉಳಿಸಿ" ಎಂದು ಹೋರಾಟ ನಡೆಸುತ್ತಿದೆ. ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ? ಸರ್ಕಾರ ರಚಿಸಲು ಬೆಂಬಲ ನೀಡಿದ BSPಯ ಎಲ್ಲ ಶಾಸಕರನ್ನೂ ಕಾಂಗ್ರೆಸ್ ಸೆಳೆದಿಲ್ಲವೇ? ಇದು ಖರೀದಿಯಲ್ಲವೇ?
ಸರ್ಕಾರ ರಚಿಸಲು ಬೆಂಬಲ ಕೊಟ್ಟವರನ್ನೇ ಕುತಂತ್ರದಿಂದ ಸೆಳೆದುಕೊಳ್ಳುವುದು, ಇಡೀ ಪಕ್ಷವನ್ನೇ ವಿಲೀನ ಮಾಡಿಸಿಕೊಳ್ಳುವುದು ಪ್ರಜಾಪ್ರಭುತ್ವ ನಡೆಯೇ? ಸಮಾನ ಮನಸ್ಕ ಪಕ್ಷಗಳನ್ನು ಒಡೆದು ಶಾಸಕರನ್ನು ಸೆಳೆಯುತ್ತಿದ್ದರೆ ನಿಮಗೆ ಯಾರು ಬೆಂಬಲ ಕೊಟ್ಟಾರು. ಈ ತಪ್ಪುಗಳು ನಿಮಗೆ ಕಾಣುತ್ತಿಲ್ಲವೇ? ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.