Asianet Suvarna News Asianet Suvarna News

ಎಚ್‌ಎಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ: ಸಚಿವ ಪರಮೇಶ್ವರ್‌

ತಾಲೂಕಿನ ಬಿದ್ರೆಹಳ್ಳ ಕಾವಲ್‌ನ ಎಚ್‌ಎಎಲ್‌ ಘಟಕಕ್ಕೆ ಶನಿವಾರ ಗೃಹಮಂತ್ರಿ ಡಾ.ಜಿ.ಪರಮೇಶ್ವರ್‌ ಭೇಟಿ ನೀಡಿ ಘಟಕದ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದ ಬಳಿಕ ತುಮಕೂರು ನಗರದಿಂದ ಎಚ್‌ಎಎಲ್‌ ಘಟಕಕ್ಕೆ ಪ್ರಯಾಣಿಸಲು ಸರ್ಕಾರಿ ಬಸ್‌ ಓಡಾಟಕ್ಕೆ ಹಸಿರು ನಿಶಾನೆ ತೋರಿದರು. 

Give employment to locals in HAL Says Minister Dr G Parameshwar gvd
Author
First Published Aug 13, 2023, 6:40 PM IST

ಗುಬ್ಬಿ (ಆ.13): ತಾಲೂಕಿನ ಬಿದ್ರೆಹಳ್ಳ ಕಾವಲ್‌ನ ಎಚ್‌ಎಎಲ್‌ ಘಟಕಕ್ಕೆ ಶನಿವಾರ ಗೃಹಮಂತ್ರಿ ಡಾ. ಜಿ.ಪರಮೇಶ್ವರ್‌ ಭೇಟಿ ನೀಡಿ ಘಟಕದ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಪಡೆದ ಬಳಿಕ ತುಮಕೂರು ನಗರದಿಂದ ಎಚ್‌ಎಎಲ್‌ ಘಟಕಕ್ಕೆ ಪ್ರಯಾಣಿಸಲು ಸರ್ಕಾರಿ ಬಸ್‌ ಓಡಾಟಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌ ಎಚ್‌ಎಎಲ್‌ ಘಟಕದಲ್ಲಿ ಉದ್ಯೋಗಾವಕಾಶಕ್ಕೆ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡುವಂತೆ ಇಲ್ಲಿನ ಘಟಕದ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ ದಿನದಲ್ಲಿ ಹೆಚ್ಚಿನ ರೀತಿಯಲ್ಲಿ ಉದ್ಯೋಗಾವಕಾಶಗಳು ಈ ಭಾಗದಲ್ಲಿ ಸಿಗಲಿದ್ದು, ವಿದ್ಯಾವಂತರಿಗೆ ಉದ್ಯೋಗ ಸೃಷ್ಟಿಹಾಗೂ ಇಲ್ಲಿನ ಪ್ರಗತಿಗೆ ಹೆಚ್ಚಿನ ಕೈಗಾರಿಕೆ ಸ್ಥಾಪನೆಗೆ ರಾಜ್ಯ ಸರ್ಕಾರ ಸಹ ಮುಂದಾಗಿದೆ.

ಎಚ್‌ಎಎಲ್‌ ಘಟಕಕ್ಕೆ ಕಡಬ ಕೆರೆಯಿಂದ ನೀರು ಹರಿಸಲಾಗುತ್ತಿದ್ದು, ಮುಂದಿನ ದಿನದಲ್ಲಿ ಹೇಮಾವತಿ ಅಲೋಕಶನ್‌ ಮಾಡುವ ಮೂಲಕ ಕಡಬ ಕೆರೆಗೆ ಪ್ರತಿ ವರ್ಷ ಹೆಚ್ಚು ನದಿ ಮೂಲದ ನೀರು ತುಂಬಿಸುವ ಕೆಲಸವನ್ನು ಮಾಡಲಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಎಚ್‌ಎಎಲ್‌ ನಿರ್ಮಾಣವಾಗಿರುವುದು ನಮಗೆ ಹೆಚ್ಚಿನ ಸಂತೋಷ ತಂದಿದೆ. ಮುಂದಿನ ದಿನದಲ್ಲಿ ಐತಿಹಾಸಿಕವಾಗಿ ಹೆಚ್ಚು ಅಭಿವೃದ್ಧಿಯತ್ತ ಸಾಗಲಿದ್ದು, ರಾಜ್ಯದಲ್ಲಿ ತುಮಕೂರು ಜಿಲ್ಲೆ ಮಾದರಿ ಮತ್ತು ಪ್ರಗತಿದತ್ತವಾಗಲಿದೆ ಎಂದರು. ಕಳೆದ ಬಾರಿ ನಾನು ಗೃಹ ಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರ ಜತೆಯಲ್ಲಿ ಗುದ್ದಲಿ ಪೂಜೆ ಮಾಡಿದ್ದೇವೆ. 

ಗಣಿಗಾರಿಕೆ ನಿಯಮ ಸರಳೀಕರಣಕ್ಕೆ ಸರ್ಕಾರ ಚಿಂತನೆ: ಸಚಿವ ಮಹದೇವಪ್ಪ

ನಿಮ್ಮೆಲ್ಲರ ಸಹಕಾರದ ಮೇರೆಗೆ ಈಗ ಮತ್ತೊಮ್ಮೆ ರಾಜ್ಯದ ಗೃಹ ಮಂತ್ರಿಯಾಗಿ ಆಗುವ ಭಾಗ್ಯ ಸಿಕ್ಕಿದೆ. ಎಚ್‌ಎಎಲ್‌ ಘಟಕದ ಸಿದ್ಧತೆ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಅತ್ಯಂತ ಖುಷಿಯ ವಿಚಾರವಾಗಿದೆ. ಈ ಭಾಗದ ಪ್ರಗತಿಗೆ ಹೆಚ್ಚು ಸಹಕಾರಿ ಮತ್ತು ಸಾವಿರಾರು ಮಂದಿಗೆ ಉದ್ಯೋಗವಕಾಶ ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಕೆಪಿಸಿಸಿ ವಕ್ತಾರ ಮುರಳೀಧರ್‌ ಹಾಲಪ್ಪ, ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ಶಂಕರಾನಂದ ತಾತಯ್ಯ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌, ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌, ತಹಸೀಲ್ದಾರ್‌ ಬಿ.ಆರತಿ, ತಾಪಂ ಇಒ ಪರಮೇಶ್‌ಕುಮಾರ್‌, ಮುಖಂಡರಾದ ಪನೀಂದ್ರ, ಕುಂದರನಹಳ್ಳಿ ರವೀಶ್‌, ಶಶಿಧರ್‌ ಹಾಗೂ ಎಚ್‌ಎಎಲ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರದಿಂದ ಕುಡಿವ ನೀರಿನ ಸಮಸ್ಯೆ ನಿವಾರಣೆ: ಬುಗುಡನಹಳ್ಳಿ ಕೆರೆಯಿಂದ ತುಮಕೂರು ನಗರಕ್ಕೆ ನೀರು ಸರಬರಾಜು ಆಗುತ್ತಿದ್ದು, ಈ ನೀರು ವರ್ಷ ಪೂರ್ತಿ ಸಾಕಾಗಲ್ಲ. ಪರ್ಯಾಯವಾಗಿ ನಗರಕ್ಕೆ 24 ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದ್ದು, ಸಮರ್ಪಕ ಕುಡಿಯುವ ನೀರಿನ ಪೂರೈಕೆ ಬಗ್ಗೆ ಸರ್ಕಾರ ಕ್ರಮವಹಿಸಿದ ನಂತರ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್‌ ತಿಳಿಸಿದರು.

ಪಾಲಿಕೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ನಗರದ 7 ವಾರ್ಡ್‌ಗಳಲ್ಲಿ ಸ್ಮಾರ್ಚ್‌ ಸಿಟಿ ಯೋಜನೆ ಅನುಷ್ಟಾನವಾಗಿದ್ದು, ಇನ್ನೂ 28 ವಾರ್ಡ್‌ಗಳಲ್ಲಿ ಅನುಷ್ಟಾನವಾಗಬೇಕಿದೆ. ನಗರದ ರಸ್ತೆಗಳಲ್ಲಿರುವ 2000ಕ್ಕೂ ಹೆಚ್ಚು ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ಸ್ಮಾರ್ಚ್‌ ಸಿಟಿ ಹಾಗೂ ಪಾಲಿಕೆಯವರು ಒಟ್ಟಾಗಿ ಕಾರ್ಯನಿರ್ವಹಿಸಿ ನಗರದಲ್ಲಿ ಸಮರ್ಪಕ ರಸ್ತೆ ನಿರ್ಮಾಣ, ಚರಂಡಿ, ವಿದ್ಯುತ್‌, ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ಅನುಷ್ಟಾನಗೊಳಿಸಬೇಕು ಹಾಗೂ ನಗರದ ರಸ್ತೆಗಳನ್ನು ಸುಂದರಗೊಳಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ವಕೀಲನಾದಾಗ ಕುರುಬ ಜನಾಂಗದಿಂದ ನಾನೊಬ್ಬನೇ ಇದ್ದೆ: ಸಿದ್ದರಾಮಯ್ಯ

ನಗರಗಳಲ್ಲಿ 14 ಲಕ್ಷ ಯೂನಿಟ್‌ ವಿದ್ಯುತ್‌ ಖರ್ಚಾಗುತ್ತಿತ್ತು. ಎಲ್‌ಇಡಿ ದೀಪಗಳ ವ್ಯವಸ್ಥೆ ಅಳವಡಿಸಿದ ನಂತರ 6 ಲಕ್ಷ ಯೂನಿಟ್‌ ವಿದ್ಯುತ್‌ ಬಳಕೆ ಕಡಿಮೆಯಾಗಿದೆ. ಇದರಿಂದ ಹಣ ಉಳಿತಾಯವಾಗಿದೆ. ಇನ್ನು ನಗರದಲ್ಲಿ ಹಲವೆಡೆ ಹೊಸ ಬಡಾವಣೆಗಳು ಆಗುತ್ತಿದ್ದು, ಅಲ್ಲಿಯೂ ಸಹ ಎಲ್‌ಇಡಿ ದೀಪಗಳ ವ್ಯವಸ್ಥೆ ಕಲ್ಪಿಸುವಂತೆ ಪಾಲಿಕೆಗೆ ಸೂಚನೆ ನೀಡಲಾಗಿದೆ. ನಗರದ ಅಮಾನಿಕೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್‌ 12 ಶನಿವಾರ ಮತ್ತು ಆ.13ರ ಭಾನುವಾರದಂದು ಮಹಿಳೆಯರಿಗೋಸ್ಕರ ಉಚಿತ ಬೋಟಿಂಗ್‌ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಗಸ್ಟ್‌ 15ರಂದು ಅಧಿಕೃತವಾಗಿ ಅಮಾನಿಕೆರೆ ಅಂಗಳದಲ್ಲಿ ಸಂಗೀತ ಕಾರಂಜಿ, ಫುಡ್‌ಕೋರ್ಚ್‌, ಬೋಟಿಂಗ್‌ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದರು.

Follow Us:
Download App:
  • android
  • ios