ಎನ್ಡಿಎ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಘೋಷಣೆ, ದ್ರೌಪದಿ ಮುರ್ಮುಗೆ ಬರ್ತ್ಡೇ ಗಿಫ್ಟ್ ನೀಡಿದ ಬಿಜೆಪಿ!
- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸುದ್ದಿಗೋಷ್ಟಿ
- ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿ ಘೋಷಣೆ
- ಮಹಿಳಾ ಅಭ್ಯರ್ಥಿ ಘೋಷಿಸಿದ ಜೆಪಿ ನಡ್ಡಾ
ನವದೆಹಲಿ(ಜೂ.21): ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಕೂಟದ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಆದಿವಾಸಿ ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಈ ಬಾರಿ ಬಿಜೆಪಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಿದ ನಾಯಕರು, ಬಳಿಕ ಅಭ್ಯರ್ಥಿ ಘೋಷಿಸಿದ್ದಾರೆ. ಜೆಪಿ ನಡ್ಡಾ ಸುದ್ದಿಗೋಷ್ಠಿಯಲ್ಲಿ ದ್ರೌಪದಿ ಮುರ್ಮು ಎನ್ಡಿಎ ಕೂಟದ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಯಾರೀಕೆ ದ್ರೌಪದಿ ಮುರ್ಮು.. ಬಿಜೆಪಿಯ ರಾಷ್ಟಪತಿ ಅಭ್ಯರ್ಥಿ?
ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ. ಸಮಾಜ ಸೇವೆ, ಬಡವರು, ದೀನದಲಿತರು, ಮಹಿಳೆಯರ ಸಬಲೀಕರಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ದ್ರೌಪದಿ ಮುರ್ಮು, ಅತ್ಯುತ್ತಮ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ದ್ರೌಪದಿ ಮುರ್ಮು ದೇಶದ ಅತ್ಯುತ್ತಮ ರಾಷ್ಟ್ರಪತಿಯಾಗುತ್ತಾರೆ ಅನ್ನೋ ವಿಶ್ವಾಸವಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಬಡತನ,ಕಷ್ಟಗಳನ್ನು ಅನುಭವಿಸಿದ ದ್ರೌಪದಿ ಮುರ್ಮು, ತಮ್ಮ ಜೀವನ ಪಾಠದಿಂದ ಹೆಚ್ಚಿನ ಶಕ್ತಿಯನ್ನು ಪಡೆದಿದ್ದಾರೆ. ಆಡಳಿತ, ನೀತಿ ಕುರಿತು ಅವರ ತಿಳುವಳಿಕೆ ಮತ್ತೂ ಅರಿವು ದೇಶಕ್ಕೆ ಪ್ರಯೋಜನ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕರ್ನಾಟಕದ ಹಾಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಮೊದಲಾದವರ ಹೆಸರು ಬಿಜೆಪಿ ಪಾಳಯದಿಂದ ರಾಷ್ಟ್ರಪತಿ ಹುದ್ದೆಗೆ ಮುಂಚೂಣಿಯಾಗಿ ಕೇಳಿಬಂದಿತ್ತು. ಈ ಬಾರಿಯೂ ಬಿಜೆಪಿ ಅಚ್ಚರಿ ನೀಡಿದೆ. ಟ್ರೈಬಲ್ ಲೀಡರ್ ಎಂದೇ ಗುರುತಿಸಿಕೊಂಡಿರುವ ದ್ರೌಪದಿ ಮುರ್ಮುಗೆ ಬಿಜೆಪಿ ಹುಟ್ಟು ಹಬ್ಬದ ಗಿಫ್ಟ್ ನೀಡಿದೆ.
"
ಜೂನ್ 20ಕ್ಕೆ ಅಂದರೆ ನಿನ್ನೆ 64ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ದ್ರೌಪದಿ ಮುರ್ಮುಗೆ ಬಿಜೆಪಿ ಗಿಫ್ಟ್ ನೀಡಿದೆ. ಜೂನ್ 20, 1958ರಲ್ಲಿ ಒಡಿಶಾದ ಮಯೂರ್ಬಂಜ್ ಜಿಲ್ಲೆಯ ಬೈದಾಪೊಸಿ ಗ್ರಾಮದಲ್ಲಿ ಹುಟ್ಟಿದ ದ್ರೌಪದಿ ಮುರ್ಮು, ಜೀವನದಲ್ಲಿ ಹಲವು ಸವಾಲು ಹಾಗು ಸಂಕಷ್ಟ ಎದುರಿಸಿದ್ದಾರೆ.
2015ರಿಂದ 2021ರ ವರೆಗೆ ಜಾರ್ಖಂಡ್ನ ರಾಜ್ಯಪಾಲೆಯಾಗಿ ಕಾರ್ಯನಿರ್ವಹಿಸಿದ ದ್ರೌಪದಿ ಮುರ್ಮು, ಬಿಜಿಪಿಯ ಹಿರಿಯ ನಾಯಕಿಯಾಗಿದ್ದಾರೆ. 64 ವರ್ಷದ ದ್ರೌಪದಿ ಮುರ್ಮು ಸಂಪೂರ್ಣ ಅವಧಿ ಪೂರೈಸಿದ ಜಾರ್ಖಂಡ್ನ ಮೊದಲ ರಾಜ್ಯಪಾಲೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ಯಶವಂತ್ ಸಿನ್ಹ ಕಣಕ್ಕಿಳಿಸಿದ ವಿಪಕ್ಷ!
ಒಡಿಶಾ ಮೂಲದ ದ್ರೌಪದಿ ಮುರ್ಮು ರೈರಂಗ್ಪುರದಿಂದ ಜಿಲ್ಲಿಯಿಂದ 1997ರಲ್ಲಿ ಕೌನ್ಸಿಲರ ಆಗಿ ಆಯ್ಕೆಯಾದರು. 2000ನೇ ಇಸವಿಯಲ್ಲಿ ಒಡಿಶಾ ವಿಧಾನಸಭೆಗೆ ಸ್ಪರ್ಧಿಸಿದ ದ್ರೌಪದಿ ಮುರ್ಮು, ಭರ್ಜರಿ ಬಹುಮತಗಳಿಂದ ಆಯ್ಕೆಯಾದರು. 2000 ದಿಂದ 2002ರವರೆಗೆ ಸಾರಿಗೆ ಹಾಗೂ ವಾಣಿಜ್ಯ ಖಾತೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. 2002ರಿಂದ 2004ರ ವರೆಗೆ ಮೀನುಗಾರಿಕೆ ಮತ್ತು ಪಶುಸಂಗೋಪನೆ ಖಾತೆಯನ್ನು ನಿರ್ವಹಿಸಿದ್ದಾರೆ.