ದೇಶ, ರಾಜ್ಯದಲ್ಲಿ ಏನಾಗಿದೆ ಅಂದರೆ ಪಾಪಿಗಳಾಗಲಿ, ರೌಡಿಗಳಾಗಲಿ, ಕೊಲೆಗಡುಕರಾಗಲಿ ಬಿಜೆಪಿ ಶಾಲು, ಕೇಸರಿ ಶಾಲು ಹಾಕಿಕೊಂಡರೆ ಅವರ ಎಲ್ಲ ಪಾಪಗಳು, ಅಪರಾಧಗಳು ತೊಳೆದುಬಿಡುತ್ತವೆ: ಪ್ರಿಯಾಂಕ ಖರ್ಗೆ

ಬೆಂಗಳೂರು(ನ.30):  ಪೊಲೀಸರಿಗೆ ಬೇಕಿರುವ ಮೋಸ್ಟ್‌ ವಾಂಟೆಡ್‌ಗಳು ಬಿಜೆಪಿ ಸಚಿವರು, ಶಾಸಕರು ಮತ್ತು ಸಂಸದರ ಕೈಗೆ ಸುಲಭವಾಗಿ ಸಿಗುತ್ತಿದ್ದಾರೆ. ಅವರ ಜತೆಯೇ ಇರುತ್ತಾರೆ. ಆದರೆ, ಪೊಲೀಸರ ಕೈಗೆ ಸಿಗುತ್ತಿಲ್ಲ ಯಾಕೆ? ಎಂದು ಕೆಪಿಸಿಸಿ ಸಂವಹನ ಘಟಕದ ಮುಖ್ಯಸ್ಥ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

Add Asianetnews Kannada as a Preferred SourcegooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವೊಂದರಲ್ಲಿ ಕುಖ್ಯಾತ ರೌಡಿ ಸೈಲೆಂಟ್‌ ಸುನೀಲ್‌ ಜೊತೆ ಬಿಜೆಪಿಯ ಕೆಲ ಸಚಿವ, ಶಾಸಕ, ಸಂಸದರು ಕಾಣಿಸಿಕೊಂಡ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಲುಕ್‌ಔಟ್‌ ಇರುವವರು, ಮೋಸ್ಟ್‌ ವಾಂಟೆಡ್‌ ಇರುವವರು ಸಿಸಿಬಿ ಪೊಲೀಸರಿಗೆ ಸಿಗುವುದಿಲ್ಲ ಅಂದರೆ ಗೃಹ ಸಚಿವರಿಗೂ ಅವರಿಗೂ ಹೊಂದಾಣಿಕೆ ಆಗಿದೆಯಾ? ಇಲ್ಲ ರೌಡಿ ಶೀಟರ್‌ಗಳು ಪಕ್ಷದ ಫಲಾನುವಿಗಳು ಅಂತ ಸೂಚನೆಯೇನಾದರೂ ಹೋಗಿದೆಯಾ? ಸಿಸಿಬಿ ಪೊಲೀಸರಿಗೆ ಯಾಕೆ ಸೈಲೆಂಟ್‌ ಸುನೀಲ ಸಿಗುತ್ತಿಲ್ಲ? ಆತ ಎಲ್ಲಿ ಅಂತ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕೇಳಿದರೆ ಗೊತ್ತಾಗುತ್ತದಲ್ಲ?’ ಎಂದರು.

ಚಿತ್ತಾಪುರ: ಗ್ರಾಮೀಣ ಭಾಗಗಳ ಅಭಿವೃದ್ಧಿ ನನ್ನ ಬದ್ಧತೆ: ಪ್ರಿಯಾಂಕ್‌ ಖರ್ಗೆ

‘ದೇಶ, ರಾಜ್ಯದಲ್ಲಿ ಏನಾಗಿದೆ ಅಂದರೆ ಪಾಪಿಗಳಾಗಲಿ, ರೌಡಿಗಳಾಗಲಿ, ಕೊಲೆಗಡುಕರಾಗಲಿ ಬಿಜೆಪಿ ಶಾಲು, ಕೇಸರಿ ಶಾಲು ಹಾಕಿಕೊಂಡರೆ ಅವರ ಎಲ್ಲ ಪಾಪಗಳು, ಅಪರಾಧಗಳು ತೊಳೆದುಬಿಡುತ್ತವೆ. ಬಿಜೆಪಿ ಸೇರಿದರೆ ಪಾಪಿಗಳೂ ಪಾವನವಾಗಿ ಬಿಡುತ್ತಾರೆ ಎನ್ನುವಂತಾಗಿದೆ. ಪೊಲೀಸರು ಗೃಹ ಸಚಿವರನ್ನು ಕತ್ತಲಲ್ಲಿ ಇಟ್ಟಿದ್ದಾರೆ. ಪುಡಿ ರೌಡಿಗಳನ್ನು ಇಟ್ಟುಕೊಂಡು ಬಿಜೆಪಿಯವರು ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ. ಇದರಿಂದ ಅಧಿಕಾರಕ್ಕಾಗಿ ಬಿಜೆಪಿಯವರು ಹಣ ಹಾಗೂ ತೋಲ್ಬಲ ಬಳಸುತ್ತಿರುವುದು ಸ್ಪಷ್ಟವಾಗಿದೆ’ ಎಂದರು.

ಬಿಜೆಪಿ ಹಾಲಿ ಶಾಸಕರು ಕಾಂಗ್ರೆಸ್‌ ಸೇರಲು ಅರ್ಜಿ ಹಾಕಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹೇಳಿದ್ದಾರೆ ಅಂದರೆ ಅದು ಸತ್ಯ ಇರುತ್ತದೆ. ಸಂದರ್ಭ ಬಂದಾಗ ಪಕ್ಷ ಸೇರುವವರ ಪಟ್ಟಿಬಿಡುಗಡೆ ಮಾಡುತ್ತಾರೆ. ಸೈಲೆಂಟಾಗಿ ತಂತ್ರಗಾರಿಕೆ ಮಾಡಬೇಕಾಗುತ್ತದೆ. ಬಹಿರಂಗವಾಗಿ ಮಾಡಲು ಆಗುತ್ತಾ? ಬಿಜೆಪಿಗರಿಗೆ ಯಾಕೆ ಈಗಲೇ ಆತಂಕ? ಅಂತ ಮಾಜಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.