ದಾಖಲೆಗಳಿಲ್ಲದೇ ಕಾಂಗ್ರೆಸ್ ಆರೋಪ ಮಾಡುತ್ತಿಲ್ಲ| ರಾಜ್ಯ ಸರ್ಕಾರ ಖರೀದಿ ಮಾಡಿರುವ ವೆಂಟಿಲೇಟರ್‌ಗಳು ಸೆಕೆಂಡ್ ಹ್ಯಾಂಡ್ ಅಗಿವೆ| ಸರ್ಕಾರ ಅತೀ ಕಳಪೆ ಗುಣಮಟ್ಟದ ವೆಂಟಿಲೇಟರ್‌ಗಳನ್ನು ಖರೀದಿ ಮಾಡಿದೆ| ಕಳಪೆ ಮಟ್ಟದ ಪಿಪಿಇ ಕಿಟ್ ಖರೀದಿಸಿ ಕೊರೋನಾ ವಾರಿಯರ್ಸ್ ಜೀವದ ಜೊತೆ ಚೆಲ್ಲಾಟವಾಡುತ್ತಿದೆ

ಹಾವೇರಿ(ಆ.03): ಕೊರೋನಾ ಮಹಾಮಾರಿ ರಾಜ್ಯ ಸರ್ಕಾರಕ್ಕೆ ಕಲ್ಪವೃಕ್ಷ, ಕಾಮಧೇನುವಾಗಿ ಮಾರ್ಪಟ್ಟಿದೆ. ಕೊರೋನಾ ಇಡೀ ವಿಶ್ವಕ್ಕೆ ಹೆಮ್ಮಾರಿಯಾಗಿ ಕಾಡುತ್ತಿದೆ. ವೈರಸ್‌ ನಿಯಂತ್ರಿಸಲು ಕೊರೋನಾ ವಾರಿಯರ್ಸ್ ಶ್ರಮಿಸುತ್ತಿದ್ದಾರೆ. ಆದರೆ, ಸರ್ಕಾರಕ್ಕೆ ಕೊರೋನಾ ಹಬ್ಬದ, ಜಾತ್ರೆಯ ವಾತಾವರಣ ಸೃಷ್ಟಿ ಮಾಡಿದೆ. ಸಿಎಂ ಯಡಿಯೂರಪ್ಪ ಅವರಿಂದ ಹಿಡಿದು ಮಂತ್ರಿಗಳು, ಅಧಿಕಾರಿಗಳು ಹಣವನ್ನ ಲೂಟಿ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್‌ ಅವರು ಗಂಭೀರವಾಗಿ ಅರೋಪಿಸಿದ್ದಾರೆ. 

Add Asianetnews Kannada as a Preferred SourcegooglePreferred

ಇಂದು(ಸೋಮವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಜನತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿತ್ತು. ದುರ್ದೈವದ ಸಂಗತಿ ಅಂದ್ರೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಇದುವೇ ಬಂಡವಾಳವಾಗಿದೆ. ಕೊರೋನಾ ಸಲುವಾಗಿ ಸರ್ಕಾರ ಒಟ್ಟಾರೆ 4167 ಕೋಟಿ ರೂ. ಗಳನ್ನು ಖರ್ಚು ಮಾಡಿದೆ. ಇದರ ಅರ್ಧದಷ್ಟು ಹಣವನ್ನು ಸಿಎಂ ಅವರಿಂದ ಹಿಡಿದು ಮಂತ್ರಿಗಳು, ಅಧಿಕಾರಿಗಳು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಕೊರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆ: ಹಾವೇರಿ ವೈದ್ಯರ ಕಾರ್ಯಕ್ಕೆ ಸಚಿವ ಸುಧಾಕರ್‌ ಶ್ಲಾಘನೆ

ಇದರ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ. ದಾಖಲೆಗಳಿಲ್ಲದೇ ಕಾಂಗ್ರೆಸ್ ಆರೋಪ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಖರೀದಿ ಮಾಡಿರುವ ವೆಂಟಿಲೇಟರ್‌ಗಳು ಸೆಕೆಂಡ್ ಹ್ಯಾಂಡ್ ಅಗಿವೆ. ಅತೀ ಕಳಪೆ ಗುಣಮಟ್ಟದ ವೆಂಟಿಲೇಟರ್‌ಗಳನ್ನು ಖರೀದಿ ಮಾಡಿದೆ. ಕಳಪೆ ಮಟ್ಟದ ಪಿಪಿಇ ಕಿಟ್ ಖರೀದಿಸಿ ಕೊರೋನಾ ವಾರಿಯರ್ಸ್ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದು ಎಂ.ಬಿ. ಪಾಟೀಲ್‌ ಆಗ್ರಹಿಸಿದ್ದಾರೆ.