Asianet Suvarna News Asianet Suvarna News

ಸಿದ್ದರಾಮಯ್ಯ ಕೋಲಾರಕ್ಕೆ ಹೋಗಿ ಬಾದಾಮಿ ಜನರಿಗೆ ಮೋಸ: ಈಶ್ವರಪ್ಪ ಆಕ್ರೋಶ

ಬಾದಾಮಿ ಕ್ಷೇತ್ರ ದೂರವಾಗುತ್ತದೆ ಎಂಬ ಕಾರಣಕ್ಕೆ ಕೋಲಾರಕ್ಕೆ ಹೋಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಜನತೆಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಕಿಡಿಕಾರಿದರು.

Former Minister KS Eshwarappa Outraged Against Siddaramaiah gvd
Author
First Published Jan 29, 2023, 2:00 AM IST

ಬಾಗಲಕೋಟೆ (ಜ.29): ಬಾದಾಮಿ ಕ್ಷೇತ್ರ ದೂರವಾಗುತ್ತದೆ ಎಂಬ ಕಾರಣಕ್ಕೆ ಕೋಲಾರಕ್ಕೆ ಹೋಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಜನತೆಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಕಿಡಿಕಾರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದುಗೆ ಬಾದಾಮಿ ದೂರಾದರೆ ಅವರು ಆರು ಬಾರಿ ಗೆದ್ದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಾದರೂ ನಿಲ್ಲಬಹುದಿತ್ತಲ್ಲ? ಎಂದು ಪ್ರಶ್ನಿಸಿದರಲ್ಲದೆ, ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರೆ ದೊಡ್ಡವರಾಗುತ್ತೇವೆ ಎನ್ನುವ ಭ್ರಮೆ ಕಾಂಗ್ರೆಸ್‌ನವರಲ್ಲಿ ಎಂದು ಸಿದ್ದು ಟೀಕೆಗೆ ಈಶ್ವರಪ್ಪ ತಿರುಗೇಟು ನೀಡಿದರು.

ಇನ್ನು, ಜೆಡಿಎಸ್‌ನ ಭವಾನಿ ರೇವಣ್ಣ ನಾನೇ ಅಭ್ಯರ್ಥಿ ಅನ್ನುತ್ತಾರೆ. ಮತ್ತೊಂದೆಡೆ ಅನಿತಾ ಕುಮಾರಸ್ವಾಮಿ ತನ್ನ ಮಗನನ್ನು ಅಭ್ಯರ್ಥಿಯಾಗಿ ಘೋಷಿಸುತ್ತಾರೆ. ಹೀಗೆ ತಮ್ಮ ಮೊಮ್ಮಕ್ಕಳು, ಮಕ್ಕಳನ್ನೇ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದರೆ ಒಂದು ಪಕ್ಷ ಅಂತ ಯಾಕಿರಬೇಕು? ಚುನಾವಣಾ ಸಮಿತಿ ಏತಕ್ಕೆ ಎಂದು ಪ್ರಶ್ನಿಸಿದ ಅವರು, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಕಾಂಗ್ರೆಸ್‌ನದು ಪ್ರಜಾ ಗೋವಿಂದ ಯಾತ್ರೆ: ಸಚಿವ ಅಶ್ವತ್ಥ ನಾರಾಯಣ್‌

ರಾಜ್ಯದಲ್ಲಿ ಮತ್ತೆ ಬಿಜೆಪಿ ಬಹುಮತ ಖಚಿತ: ಬಿಜೆಪಿ ಸರ್ಕಾರ ಜನಪರ ಕಾರ್ಯಕ್ರಮಗಳ ಮೂಲಕ ರಾಜ್ಯದ ಜನತೆಯ ವಿಶ್ವಾಸ ಗಳಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದಾಗ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಬಿಜೆಪಿ ಒಂದು ಸಿದ್ಧಾಂತದ ಪಕ್ಷ. ತಳಹಂತದ ಕಾರ್ಯಕರ್ತರಿಂದ ಸಂಘಟಿತವಾಗಿರುವ ಪಕ್ಷವಾಗಿರುವುದರಿಂದ ಇಲ್ಲಿ ಶಿಸ್ತು ಮತ್ತು ಸಿದ್ಧಾಂತದಿಂದ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಮೂಲ ಕಾಂಗ್ರೆಸ್‌ ಪಕ್ಷವಾಗಿದೆ. ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಭ್ರಷ್ಟಾಚಾರಗಳು ತನಿಖೆ ಆಗಬಾರದು ಎಂಬ ಉದ್ದೇಶದಿಂದ ಇದೇ ಸಿದ್ದರಾಮಯ್ಯನವರು ಲೋಕಾಯುಕ್ತ ಸಂಸ್ಥೆಯನ್ನು ತೆಗೆದು ಹಾಕಿದ್ದರು. ಲೋಕಾಯುಕ್ತ ಸಂಸ್ಥೆಗೆ ನಮ್ಮ ಸರ್ಕಾರ ಮತ್ತೆ ಶಕ್ತಿ ತುಂಬಿದೆ. ಸಿದ್ದರಾಮಯ್ಯನವರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಅನೇಕ ದೂರುಗಳು ಬಂದಿವೆ. ಮೊದಲು ಅವರು ಆ ದೂರುಗಳಿಗೆ ಉತ್ತರವನ್ನು ನೀಡಲಿ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದೇನೆ ಎನ್ನುತ್ತಾರೆ. ಹಾಗಾದರೆ ತಮ್ಮ ಸ್ವಕ್ಷೇತ್ರ ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಏಕೆ ಸೋತರು? ಬಾದಾಮಿ ಮತ ಕ್ಷೇತ್ರದಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದಿರುವ ಸಿದ್ದರಾಮಯ್ಯ ಅಲ್ಲಿಯೇ ಸ್ಪರ್ಧೆ ಮಾಡದೆ ಸೋಲಿನ ಭಯದಿಂದ ಬೇರೆ ಮತಕ್ಷೇತ್ರದತ್ತ ಮುಖ ಮಾಡಿದ್ದಾರೆ. ಅವರಿಗೆ ಗೆಲ್ಲುವ ಆತ್ಮವಿಶ್ವಾಸವಿದ್ದರೆ ಬಾದಾಮಿ ಮತಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿ ಎಂದು ಸವಾಲು ಎಸೆದರು.

ಬಿಜೆಪಿಗೆ ಕಾಂಗ್ರೆಸ್‌ ಕಂಡರೆ ಭಯ: ಸಿದ್ದರಾಮಯ್ಯ ತಿರುಗೇಟು

ಬೆಳಗಾವಿ ರಾಜಕಾರಣದಲ್ಲಿರುವ ಭಿನ್ನಮತ ಕೇಂದ್ರದ ವರಿಷ್ಠರು ಬಂದು ಹೋದ ನಂತರ ಶಮನವಾಗಲಿದೆ. ಒಂದು ಕುಟುಂಬದಲ್ಲಿನ ಸಹೋದರರ ಮಧ್ಯೆ ಭಿನ್ನಾಭಿಪ್ರಾಯಗಳು ಇರುವಂತೆ ಪ್ರತಿಯೊಂದು ಪಕ್ಷದಲ್ಲಿಯೂ ಮುಖಂಡರಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಂಡ ನಂತರ ಭಿನ್ನಮತ ಶಮನಗೊಳಿಸಿ ಎಲ್ಲರೂ ಒಗ್ಗಟ್ಟಿನಿಂದ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂದ ಅವರು, ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನಗಳಿಗೆ ಮುಟ್ಟಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲೇ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios