*   ಬೇರೆ ಜಾತಿಯವರು ಸಂಘದ ಉನ್ನತ ಹುದ್ದೆಗೆ ಏಕೆ ಅಸ್ಪೃಶ್ಯರು?*   ನನ್ನ ಪ್ರಶ್ನೆಗೆ ಉತ್ತರಿಸಲಾಗದಷ್ಟು ದುರ್ಬಲ ಸಂಘವೇ ನಿಮ್ಮದು?*   ಆರೆಸ್ಸೆಸ್‌, ಕಟೀಲ್‌ ವಿರುದ್ಧ ವಿರೋಧ ಪಕ್ಷದ ನಾಯಕ ಮತ್ತೆ ಕಿಡಿ 

ಬೆಂಗಳೂರು(ಮೇ.31): ನಿಮ್ಮ ಸಂಘದಲ್ಲಿ ಒಂದು ಜಾತಿಯ ಪದಾಧಿಕಾರಿಗಳು ಮಾತ್ರ ಯಾಕಿದ್ದಾರೆ? ದಲಿತರು, ಹಿಂದುಳಿದವರು ಸೇರಿದಂತೆ ಬೇರೆ ಜಾತಿಗಳಿಗೆ ಯಾಕೆ ಅವಕಾಶ ಇಲ್ಲ ಎಂಬ ಸರಳ ಪ್ರಶ್ನೆಗೆ ಆರ್‌ಎಸ್‌ಎಸ್‌ನಲ್ಲಿ ಉತ್ತರ ಇಲ್ಲ. ಇದೇ ಈ ಸಂಘಟನೆಯ ಡೋಂಗಿತನಕ್ಕೆ ಸಾಕ್ಷಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಆರ್‌ಎಸ್‌ಎಸ್‌ ವಿರುದ್ಧ ಕಿಡಿ ಕಾರಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವಾನ್ವಿತ ನಾಯಕರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇನೆ. ಹಿಂದೂಗಳೆಲ್ಲ ಒಂದು ಎನ್ನುವ ನಿಮ್ಮ ಸಂಘದ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಉಳಿದ ಜಾತಿಗಳು ಯಾಕೆ ಅಸ್ಪೃಶ್ಯವಾಗಿವೆ? ದಯವಿಟ್ಟು ಉತ್ತರಿಸಿ ಎಂದು ಸವಾಲು ಎಸೆದಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ನನ್ನ ಸರಳ ಪ್ರಶ್ನೆಗೆ ಉತ್ತರಿಸಲಾಗದ ಆರ್‌ಎಸ್‌ಎಸ್‌ ಸಂಘಟನೆಯು ಬಿಜೆಪಿಯ ಕೂಗುಮಾರಿಗಳನ್ನು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲು ಛೂ ಬಿಟ್ಟಿದೆ. 97 ವರ್ಷಗಳ ಇತಿಹಾಸವಿರುವ ಆರ್‌ಎಸ್‌ಎಸ್‌ ನನ್ನದೊಂದು ಸರಳ ಪ್ರಶ್ನೆಗೆ ಉತ್ತರಿಸಲಾಗದಷ್ಟುದುರ್ಬಲ ಸಂಘಟನೆಯೇ ಎಂದು ಪ್ರಶ್ನಿಸಿದ್ದಾರೆ.

ಪ್ರಶ್ನೆ ಮಾಡಿದ್ದು RSS ಎಂಬ ಸಂಸ್ಥೆಯನ್ನ, ಬಿಜೆಪಿ ನಾಯಕರು ಏಕೆ ಎದೆ ಬಡಿದುಕೊಳ್ಳುತ್ತಿದ್ದಾರೆ?

ಬಿಜೆಪಿಯ ಒಬ್ಬ ನಾಯಕರು ಆರ್‌ಎಸ್‌ಎಸ್‌ ಶಾಖೆಗೆ ಬನ್ನಿ ಎಂದು ಕರೆಯುತ್ತಿದ್ದಾರೆ. ಇನ್ನೊಬ್ಬರು ಆರ್‌ಎಸ್‌ಎಸ್‌ ಪುಸ್ತಕ ಓದಿ ಎಂದು ಸಲಹೆ ನೀಡಿದ್ದಾರೆ. ಅಲ್ಲಿಗೆ ಹೋಗಿ ಓದಿ ಏನನ್ನು ಕಲಿಯಬೇಕು? 40% ಕಮಿಷನ್‌ ಹೊಡೆಯುವುದಾ? ದುಡ್ಡು ಪಡೆದು ಪಕ್ಷಾಂತರ ಮಾಡುವುದಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಳಿನ್‌ ಕುಮಾರ್‌ ಕಟೀಲ್‌ ಬಗ್ಗೆ ಕಿಡಿ:

ಆರ್‌ಎಸ್‌ಎಸ್‌ ಶಾಖೆಗಳಿಗೆ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೇ ಜೀವಂತ ಉದಾಹರಣೆ. ಸಂಸ್ಕೃತಿ, ಸಂಸ್ಕಾರ, ಸಚ್ಚಾರಿತ್ರ್ಯದಂತಹ ಮೌಲ್ಯಗಳಿಗೂ ನಿತ್ಯ ಶಬ್ದಭೇದಿ ಮಾಡುತ್ತಿರುವ ಕಟೀಲ್‌ ಅವರಿಗೂ ಏನಾದರೂ ಸಂಬಂಧವಿದೆಯೇ? ಬಿಜೆಪಿ ನಾಯಕರ ಮಾತುಗಳಿಂದಲೇ ಆರ್‌ಎಸ್‌ಎಸ್‌ ತನ್ನ ಸ್ವಯಂಸೇವಕರಿಗೆ ಕಲಿಸಿಕೊಡುವ ಸಂಸ್ಕಾರ-ಸಂಸ್ಕೃತಿ ಏನು ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.