*   ಮಂಡ್ಯ, ಹಾಸನದಲ್ಲಿ ಮುಸ್ಲಿಂರನ್ನು ಕಣಕ್ಕಿಳಿಸಲಿ: ಸಿದ್ದು ಸವಾಲ್‌*  ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲುವುದು ಮಾತ್ರ ಕಾಂಗ್ರೆಸ್‌*  ಬೆಲೆ ಏರಿಕೆಯಿಂದ ತತ್ತರಿಸಿದ ಸಾಮಾನ್ಯ ಜನರು  

ಹುಬ್ಬಳ್ಳಿ(ಅ.08): ಜೆಡಿಎಸ್‌ಗೆ ಯಾವಾಗಲೂ ಕಾಂಗ್ರೆಸ್‌(Congress)ಪಕ್ಷವೇ ಟಾರ್ಗೆಟ್‌. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿರುವ ಹಾನಗಲ್‌ ಹಾಗೂ ಸಿಂದಗಿ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಟೀಕಿಸಿದ್ದಾರೆ.

Add Asianetnews Kannada as a Preferred SourcegooglePreferred

ಮಾಧ್ಯಮಗಳೊಂದಿಗೆ ಮಾತನಾಡಿ, ಬಸವ ಕಲ್ಯಾಣದಲ್ಲೂ ಇದೇ ರೀತಿ ಮಾಡಿದ್ದರು. ಇದೀಗ ಈ ಎರಡು ಕ್ಷೇತ್ರಗಳಲ್ಲೂ ಈ ತರಹ ಮಾಡಿದ್ದಾರೆ. ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಎಲ್ಲಿ ಕಣಕ್ಕಿಳಿಸಬೇಕೋ ಅಲ್ಲಿ ನಿಲ್ಲಿಸಲ್ಲ. ಮಂಡ್ಯ, ಹಾಸನ ಮತ್ತಿತರ ಕಡೆಗಳಲ್ಲಿ ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿ ನೋಡೋಣ ಎಂದ ಅವರು, ಇಲ್ಲಿ ಬಿಜೆಪಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ: ಕುಮಾರಸ್ವಾಮಿ

ಬಿಜೆಪಿ(BJP) ಹಾಗೂ ಜೆಡಿಎಸ್‌(JDS) ಒಳ ಒಪ್ಪಂದ ಮಾಡಿಕೊಂಡಿದೆಯೋ ಗೊತ್ತಿಲ್ಲ ಎಂದ ಅವರು, ಹಳೆ ಮೈಸೂರು ಭಾಗದಲ್ಲಿ ಅಷ್ಟೇ ಜೆಡಿಎಸ್‌ ಪ್ರಬಲವಾಗಿದೆ. ಅಲ್ಲಿ ಕಾಂಗ್ರೆಸ್‌ ಕೂಡ ಪ್ರಬಲವಾಗಿದೆ. ಹೀಗಾಗಿ, ಪದೇ ಪದೇ ಕಾಂಗ್ರೆಸ್‌ನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯನ್ನು ಮಾತ್ರ ಟಾರ್ಗೆಟ್‌ ಮಾಡುತ್ತಿಲ್ಲ ಎಂದು ನುಡಿದರು.

ಜೆಡಿಎಸ್‌ನವರು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನಾದರೂ ಹಾಕಲಿ, ಬಿಜೆಪಿ ಅಧಿಕಾರ ದುರುಪಯೋಗವನ್ನಾದರೂ ಮಾಡಲಿ. ಆದರೆ, ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ(Byelection) ಗೆಲ್ಲುವುದು ಮಾತ್ರ ಕಾಂಗ್ರೆಸ್‌. ಮತದಾರ ಬಿಜೆಪಿ ಹಾಗೂ ಜೆಡಿಎಸ್‌ಗೆ ತಕ್ಕ ಪಾಠ ಕಲಿಸುತ್ತಾನೆ ಎಂದು ನುಡಿದರು.

ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಸಾಮಾನ್ಯ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಬೆಲೆ ಏರಿಕೆಗೆ ಪ್ರಧಾನಿ ಮೋದಿಯೇ ಹೊಣೆ ಎಂದ ಅವರು, ರಾಜ್ಯ ಸರ್ಕಾರ ಇಲ್ಲಿ ತಮಟೆ ಹೊಡೆದುಕೊಂಡು ಕುಳಿತಿದೆ ಎಂದು ವ್ಯಂಗ್ಯವಾಡಿದರು.