ಯಡಿಯೂರಪ್ಪ ಬದಲಾಗಬೇಕಾದರೆ ಸೂಚನೆ ಇತ್ತು. ಅದನ್ನು ಹೇಳಿದ್ದೆ. ಆದರೆ ಬಸವರಾಜ ಬೊಮ್ಮಾಯಿ ಕುರಿತು ಅಂತಹ ಯಾವುದೆ ಮಾಹಿತಿ ನನಗಿಲ್ಲ. ಅದರ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ: ಸಿದ್ದು

ಹುಬ್ಬಳ್ಳಿ(ಆ.11):  ರಾಷ್ಟ್ರಧ್ವಜ ಹಾರಿಸುವ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ ರಾಜಕೀಯ ಮಾಡುತ್ತಿಲ್ಲ, ಬದಲಾಗಿ ಬಿಜೆಪಿಗರ ಢೋಂಗಿತನವನ್ನು ತಿಳಿಸುತ್ತಿದ್ದೇವೆ, ನಕಲಿ ದೇಶಭಕ್ತಿ ಇರಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರಲ್ಲೂ ಢೋಂಗಿ ರಾಷ್ಟ್ರಭಕ್ತಿ ಇರಬಾರದು. ಆರ್‌ಎಸ್‌ಎಸ್‌ನ ಬೆಂಬಲಿತ, ಹಿಂದೂ ಮಹಾಸಭಾದ ಸಾವರ್ಕರ್‌, ಗೋಲ್ವಾಲಕರ ಸೇರಿ ಪ್ರಮುಖರು ತ್ರಿವರ್ಣ ಧ್ವಜ, ಸಂವಿಧಾನ ಒಪ್ಪಿರಲಿಲ್ಲ. ಅವರಿಗೆ ಭಗವಾಧ್ವಜವೇ ಮುಖ್ಯವಾಗಿತ್ತು. ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಅವರು ತೋರಿಕೆಗೆ ಹರ್‌ ಘರ್‌ ತಿರಂಗಾ ಎನ್ನುತ್ತಿದ್ದಾರೆ. ಬಿಜೆಪಿಗರು ರಾಷ್ಟ್ರಧ್ವಜ ಒಪ್ಪಿರಲಿಲ್ಲ ಎಂಬ ನನ್ನ ಹೇಳಿಕೆಯಲ್ಲಿ ರಾಜಕೀಯ ಏನೂ ಇಲ್ಲ. ಸತ್ಯ ಹೇಳಿದ್ದೇನೆ. ಅವರಿಗೆ ನಿಜವಾಗಲೂ ರಾಷ್ಟ್ರಭಕ್ತಿ ಇದ್ದರೆ ಆರ್‌ಎಸ್‌ಎಸ್‌ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಲಿ ಎಂದು ಸವಾಲು ಹಾಕಿದರು.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಹಿಂದೆ ಬಿ.ಎಸ್‌. ಯಡಿಯೂರಪ್ಪ ಬದಲಾಗಬೇಕಾದರೆ ಸೂಚನೆ ಇತ್ತು. ಅದನ್ನು ಹೇಳಿದ್ದೆ. ಆದರೆ ಬಸವರಾಜ ಬೊಮ್ಮಾಯಿ ಕುರಿತು ಅಂತಹ ಯಾವುದೆ ಮಾಹಿತಿ ನನಗಿಲ್ಲ. ಅದರ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದರು.

ತಾಕತ್ತಿದ್ದರೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಿಲ್ಲಿಸಿ: ಮುತಾಲಿಕ್‌

ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಪಾದಯಾತ್ರೆ ಕೈಗೊಂಡಿದ್ದೇವೆ. ಬಾದಾಮಿಯಲ್ಲಿ ಪಕ್ಷದ ಕಾರ್ಯಕ್ರಮದ ಭಾಗವಾಗಿ ಪಾದಯಾತ್ರೆ ಮಾಡುತ್ತಿದ್ದೇನೆ. ಇದಕ್ಕೂ ಮೊದಲು ಮಾಲೂರು, ಚಾಮುಂಡೇಶ್ವರಿ ಸೇರಿದಂತೆ ಹಲವೆಡೆ ಪಾದಯಾತ್ರೆ ಮಾಡಿದ್ದೇನೆ. ಹಾಗಂತ ಹೋದ ಕಡೆಯೆಲ್ಲ ಚುನಾವಣೆ ಸ್ಪರ್ಧೆ ಮಾಡಲು ಆಗುತ್ತದೆಯೆ? ಚುನಾವಣೆ ಬಂದಾಗ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಮುಂದೆ ತಿಳಿಸುವೆ ಎಂದರು.

ಬಿಹಾರದಲ್ಲಿ ನಿತೀಶಕುಮಾರ ಉತ್ತಮ ಕೆಲಸ ಮಾಡಿದ್ದರು. ಸಮಾಜವಾದಿ ಮೂಲದಿಂದ ಬಂದ ಅವರು ಕೋಮುವಾದಿ ಬಿಜೆಪಿ ಜತೆಗಿನ ಮೈತ್ರಿಯಿಂದ ಹೊರಬಂದು ಒಳ್ಳೆಯ ನಿರ್ಧಾರ ಪ್ರಕಟಿಸಿದ್ದಾರೆ. ಅವರ ಜೊತೆ ಮುಂದಿನ ದಿನಗಳಲ್ಲಿ ಮಾತನಾಡುವೆ ಎಂದರು.