Asianet Suvarna News Asianet Suvarna News

ಬಿಜೆಪಿಗೆ ಸಮಾನತೆ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಲ್ಲ: ಸಿದ್ದರಾಮಯ್ಯ

ಡಾ. ಬಿ.ಆರ್‌.ಅಂಬೇಡ್ಕರ್‌ ಬರೆದ ಸಂವಿಧಾನದ ಬಗ್ಗೆ ಹಾಗೂ ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಗೆ ನಂಬಿಕೆ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

former cm siddaramaiah slams to bjp at chikkamagaluru district gvd
Author
Bangalore, First Published Aug 21, 2022, 1:20 AM IST

ಬಾಳೆಹೊನ್ನೂರು (ಆ.21): ಡಾ. ಬಿ.ಆರ್‌.ಅಂಬೇಡ್ಕರ್‌ ಬರೆದ ಸಂವಿಧಾನದ ಬಗ್ಗೆ ಹಾಗೂ ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಗೆ ನಂಬಿಕೆ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ 75 ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡರ ನಿವಾಸದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಸಂವಿಧಾನದಲ್ಲಿ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡಿದ್ದು, ಪ್ರಧಾನಿಯಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಗೂ ಒಂದು ಮತ, ಒಂದು ಮೌಲ್ಯ ಎಂದು ಹೇಳಿದ್ದಾರೆ. ಆದರೆ, ದೇಶದಲ್ಲಿ ಇನ್ನೂ ಕೂಡಾ ಸಾಮಾಜಿಕ ಪ್ರಜಾಪ್ರಭುತ್ವ, ಆರ್ಥಿಕ ಪ್ರಜಾಪ್ರಭುತ್ವ ಬಂದಿಲ್ಲ. ಇದು ಜಾರಿಯಾಗಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಆಗ ಮಾತ್ರ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ನೆಲೆಸಲು ಸಾಧ್ಯವಿದೆ ಎಂದರು.

ಗಾಂಧಿಯನ್ನೇ ಕೊಂದವರು ನನ್ನನ್ನು ಬಿಡ್ತಾರಾ: ಸಿದ್ದರಾಮಯ್ಯ

ನಾನು ಸತ್ಯವನ್ನೇ ಹೇಳುವೆ: ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ. ಆರ್‌ಎಸ್‌ಎಸ್‌, ಸಂಘ ಪರಿವಾರದವರಿಗೆ ಒಬ್ಬ ನಾಯಕ, ಒಂದು ಚಿಹ್ನೆ, ಒಂದು ಐಡಿಯಾಲಜಿಯಲ್ಲಿ ಮಾತ್ರ ನಂಬಿಕೆಯಿದೆ. ಸಾವರ್ಕರ್‌ ಜೈಲಿಗೆ ಹೋಗಿದ್ದು ನಿಜ. ಅವರು ಜೈಲಿನಲ್ಲಿ ಕ್ಷಮಾಪಣೆ ಪತ್ರ ಬರೆದುಕೊಟ್ಟು ಬಿಡುಗಡೆ ಆಗಿದ್ದರೆ ಹೊರತು ಪೂರ್ಣಾವಧಿ ಜೈಲು ಶಿಕ್ಷೆ ಅನುಭವಿಸಿಲ್ಲ. ಆದರೆ, ಮಹಾತ್ಮ ಗಾಂಧಿ, ಲೋಹಿಯಾ, ಲಾಲ್‌ಬಹದ್ದೂರ್‌ ಶಾಸ್ತಿ್ರ, ನೆಹರು ಶಿಕ್ಷೆ ಅನುಭವಿಸಿ ಜೈಲಿಂದ ಹೊರ ಬಂದಿದ್ದಾರೆ. ನಾನು ಈ ಸತ್ಯವನ್ನು ಹೇಳುತ್ತೇನೆ. 

ಇದಕ್ಕೆ ಬಿಜೆಪಿಯವರಿಗೆ ನನ್ನ ಮೇಲೆ ಕೋಪ. ನನಗೆ ಸಾವರ್ಕರ್‌ ಬಗ್ಗೆ ಕೋಪ ಇಲ್ಲ. ಆದರೆ ಅವರು ಹೋರಾಟದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ವಿವರಿಸಿದರು. ಶೃಂಗೇರಿ ಸೂಕ್ಷ್ಮತೆ ಇರುವ ಕ್ಷೇತ್ರವಾಗಿದೆ. ಯಾವ ಪ್ರದೇಶ ಚೆನ್ನಾಗಿರುತ್ತದೋ ಅಲ್ಲಿ ಬಿಜೆಪಿಯವರು ಬೆಂಕಿ ಹಾಕಿ, ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ಇಂತಹ ಘಟನೆಗಳು ನಡೆಯಲು ಬಿಡಬಾರದು. ಬಿಜೆಪಿಗೆ ಈಗಾಗಲೇ ಸೋಲಿನ ಭಯ ಹುಟ್ಟಿದ್ದು, ಮುಂದಿನ ಚುನಾವಣೆಯಲ್ಲಿ ಶೇ.100 ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ರಾಜ್ಯದ ವಿವಿಧ ಕ್ಷೇತ್ರಕ್ಕೆ ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರದ ಪ್ರತಿನಿಧಿಗಳು ಹಾನಿ ವೀಕ್ಷಣೆಗೆ ಬಂದಾಗ ಕಾಂಗ್ರೆಸ್‌ ಕಾನೂನು ಬಾಹಿರ ಚಟುವಟಿಕೆ ಮಾಡಿಲ್ಲ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾನಿ ವೀಕ್ಷಣೆಗೆ ಬಂದಾಗ ಕೊಡಗಿನಲ್ಲಿ ಕಿಡಿಗೇಡಿ ಕೃತ್ಯ ಮಾಡಿದೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ನಾಯಕರನ್ನು ಸರ್ಕಾರ ಈ ರೀತಿ ನಡೆಸಿಕೊಂಡಿದ್ದು ಸರಿಯಲ್ಲ. ಕಾಂಗ್ರೆಸ್‌ನವರು ಕಾನೂನು ರಕ್ಷಕರೇ ಹೊರತು ಭಕ್ಷಕರಲ್ಲ. ನಾವು ಗಾಂಧಿ ಆರಾಧಕರು. ಗೋಡ್ಸೆ ಆರಾಧಕರಲ್ಲ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ಜಿ.ಎಚ್‌.ಶ್ರೀನಿವಾಸ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್‌, ಪ್ರಮುಖರಾದ ಎಂ.ಎಲ್‌.ಮೂರ್ತಿ, ಸುಧೀರ್‌ಕುಮಾರ್‌ ಮುರೊಳ್ಳಿ, ಪ್ರಶಾಂತ್‌ಶೆಟ್ಟಿ, ಎಚ್‌.ಎಂ.ಸತೀಶ್‌, ನಟರಾಜ್‌ ಗೇರುಬೈಲು, ಜಯಶೀಲ್‌, ಅನ್ನಪೂರ್ಣ, ಪುಷ್ಪಾ ರಾಜೇಗೌಡ, ಜುಬೇದಾ, ಬಿ.ಸಿ.ಮಂಜುನಾಥ್‌, ಎ.ಎನ್‌.ಮಹೇಶ್‌, ವಿಜಯ್‌ಕುಮಾರ್‌, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರು ಇದ್ದರು.

ಕಾಫಿನಾಡಿನಲ್ಲಿ ಆಶ್ಲೇಷ ಅಬ್ಬರಕ್ಕೆ ಭರ್ತಿಯಾದ 50 ಕೆರೆಗಳು: ಜನರಲ್ಲಿ ಸಂತಸವೂ ಸಂತಸ

ಸದೃಢವಾಗಿರುವವರೆಗೆ ಜನಸೇವೆ: ನಾನು 44 ವರ್ಷದಿಂದ ಸಕ್ರಿಯ ರಾಜಕಾರಣದಲ್ಲಿದ್ದು. 44 ವರ್ಷದಲ್ಲಿ ವಿವಿಧ ಸ್ಥಾನಮಾನ ನಿರ್ವಹಿಸಿದ್ದೇನೆ. ಇದಕ್ಕೆ ಜನರ ಆಶೀರ್ವಾದ ಕಾರಣವಾಗಿದೆ. ಇನ್ನೂ ಸಹ ಒಂದು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಎಲ್ಲಿಯವರೆಗೆ ಮಾನಸಿಕ, ದೈಹಿಕವಾಗಿ ಸದೃಢನಾಗಿರುತ್ತೇನೋ ಅಲ್ಲಿಯವರೆಗೆ ಜನರ ಸೇವೆ ಮಾಡುತ್ತೇನೆ. ರಾಜಕಾರಣ ಎನ್ನುವುದು ಜನಸೇವೆಯಾಗಿದೆ. ನಿಷ್ಪಕ್ಷಪಾತವಾಗಿ ಜನಸೇವೆ ಮಾಡಬೇಕು. ಆಗ ಮಾತ್ರ ರಾಜಕಾರಣಕ್ಕೆ ಬೆಲೆ ಬರುತ್ತದೆ ಎಂದರು. ಸಿದ್ದರಾಮಯ್ಯ ಇನ್ನೂ ಒಂದು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಾಗ ಶಾಸಕ ಟಿ.ಡಿ.ರಾಜೇಗೌಡ ಶೃಂಗೇರಿಯಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದರು. ಇದಕ್ಕೆ ಕಾರ್ಯಕರ್ತರು ಕೂಡ ದನಿಗೂಡಿಸಿ ಆಹ್ವಾನಿಸಿದರು.

Follow Us:
Download App:
  • android
  • ios