ನಾ ನಾಯಕಿ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಲುಕ್‌ ಸೋಶಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಸಖತ್‌ ವೈರಲ್‌ ಆಗಿದೆ. ಸ್ವತಃ ಕಾಂಗ್ರೆಸ್‌ ವಕ್ತಾರೆ ಹಾಗೂ ಕಾರ್ಯಕ್ರಮದ ನಿರೂಪಕಿಯಾಗಿದ್ದ ಲಾವಣ್ಯ ಬಲ್ಲಾಳ್‌ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಇದರ ನಡುವೆ ಸಿದ್ಧರಾಮಯ್ಯ ಅವರ ವಿಡಿಯೋಗೆ ಸಖತ್‌ ಕಾಮೆಂಟ್ಸ್‌ಗಳು ದಾಖಲಾಗಿವೆ. 

ಬೆಂಗಳೂರು (ಜ.17): ರಾಜ್ಯ ಕಾಂಗ್ರೆಸ್‌ ಸೋಮವಾರ ನಡೆಸಿದ್ದ ನಾ ನಾಯಕಿ ಸಮಾವೇಶ ಎಷ್ಟು ಯಶಸ್ವಿಯಾಯ್ತೋ ಗೊತ್ತಿಲ್ಲ. ಸಿದ್ದರಾಮಯ್ಯ ಮಾತ್ರ ಇಡೀ ದಿನ ಫುಲ್‌ ಟ್ರೆಂಡಿಂಗ್‌ನಲ್ಲಿದ್ದರು. ಅದಕ್ಕೆ ಕಾರಣ ಅವರ 'ವಾರೆ ನೋಟ'. ಟಗರು ವಾರೆ ನೋಟ ಇಂದು ಕೂಡ ರಾಜ್ಯ ರಾಜಕೀಯದಲ್ಲಿ ಸುದ್ದಿಯಾಗುತ್ತಿದೆ. ಈ ನಡುವೆ ಸಿದ್ಧರಾಮಯ್ಯ ವಾರೆ ನೋಟ ಬೀರಿದ್ದ ನಿರೂಪಕಿ, ರಾಜ್ಯ ಕಾಂಗ್ರೆಸ್‌ನ ವಕ್ತಾರೆ ಲಾವಣ್ಯ ಬಲ್ಲಾಳ್‌ ಜೈನ್‌ ಎಂದು ಗೊತ್ತಾಗಿದೆ. ಲಾವಣ್ಯ ಬಲ್ಲಾಳ್‌, ಇಷ್ಟು ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದರೂ ಅವರೆಂದೂ ಜನಪ್ರಿಯವಾಗಿ ಗುರುತಿಸಿಕೊಂಡಿರಲಿಲ್ಲ. ಆದರೆ, ಸೋಮವಾರ ಸಿದ್ದರಾಮಯ್ಯ ಅವರು ಕೆಕ್ಕರಿಸಿ ಬೀರಿದ ನೋಟದಿಂದ ಒಂದೇ ಕ್ಷಣದಲ್ಲಿ ಇಡೀ ರಾಜ್ಯ ರಾಜಕೀಯದಲ್ಲಿ ಚಿರಪರಿಚಿತರಾಗಿ ಬಿಟ್ಟಿದ್ದಾರೆ. ಸ್ವತಃ ಅವರೇ ಹೇಳುವಂತೆ, ಹೂವಿನಿಂದ ನಾರೂ ಸ್ವರ್ಗಕ್ಕೆ ಏರಿದಂತೆ, ಸಿದ್ಧರಾಮಯ್ಯ ಅವರ ನೋಟದಿಂದ ಇವರೂ ಕೂಡ ಜನರ ನಡುವೆ ಸುದ್ದಿಯಾಗಿದ್ದಾರೆ. ಇಷ್ಟು ವರ್ಷ ಕಾಂಗ್ರೆಸ್‌ ವಕ್ತಾರೆಯಾಗಿ ಸಿಕ್ಕ ಪ್ರಚಾರಕ್ಕಿಂತ, ಸಿದ್ಧರಾಮಯ್ಯ ಅವರ ಒಂದೇ 'ನೋಟ'ದ ಪ್ರಚಾರ ಅವರನ್ನು ಇನ್ನಷ್ಟು ಫೇಮಸ್‌ ಮಾಡಿ ಬಿಟ್ಟಿದೆ. ಈ ನಡುವೆ ಸಿದ್ಧರಾಮಯ್ಯ ಅವರ ಲುಕ್‌ ಸುದ್ದಿಗೆ ಸಾಕಷ್ಟು ಭಿನ್ನ-ಭಿನ್ನ ಕಾಮೆಂಟ್‌ಗಳು ಬಂದಿವೆ.

Add Asianetnews Kannada as a Preferred SourcegooglePreferred



ಏಷ್ಯಾನೆಟ್‌ ಸುವರ್ಣನ್ಯೂಸ್‌ ಡಿಜಿಟಲ್‌ ಪೋಸ್ಟ್‌ ಮಾಡಿದ್ದ ಸುದ್ದಿಗೆ, 'ಒಬ್ಬ ಜನನಾಯಕನಾದ ಸಿದ್ಧರಾಮಯ್ಯನವರ ವಯಸ್ಸಿಗೂ, ಸ್ಥಾನಮಾನಕ್ಕೂ ಇದು ತಕ್ಕುದಾದುದಲ್ಲ' ಎಂದು ಡಾ. ಗುರೂಜಿ ಸಂತೋಷ್‌ ಕುಮಾರ್‌ ಆಚಾರ್ಯ ಎನ್ನುವವರು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಮಂಜುನಾಥ್‌ ಶೇಜ್‌ಕರ್‌ ಎನ್ನುವ ಓದುಗರು, 'ಮಗಳು ಇದ್ರೆ..ಹೀಗೆ ಇರ್ತಾ ಇದ್ಲು ಎನ್ನುವ ಭಾವನೆಯಿಂದ ಸಿದ್ಧರಾಮಯ್ಯ ನೋಡಿರಬಹುದು ಎಂದು ಅನಿಸುತ್ತಿದೆ' ಎಂದು ನಗುವಿನ ಇಮೋಜಿ ಜೊತೆ ಪೋಸ್ಟ್‌ ಮಾಡಿದ್ದಾರೆ.

'ನಮ್ಮ ಕರ್ನಾಟಕದಲ್ಲಿ ಎಲ್ಲೇ ಕಾಂಗ್ರೆಸ್‌ ಸಭೆ ನಡೆದರೂ, ಅಲ್ಲಿಗೆ ಬಿಜೆಪಿಯವರು ಕ್ಯಾಮೆರಾ ಸಮೇತಹಾಜರ್‌ ಆಗುತ್ತಾರೆ' ಎಂದು ಬರೆಯುವ ಮೂಲಕ ವಸಂತ್‌ ಕುಮಟಾ ಎನ್ನುವ ಓದುಗರು ಇದರ ಹಿಂದೆ ಬಿಜೆಪಿ ಪಾತ್ರವೇ ದೊಡ್ಡದಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಚಂದ್ರಶೇಖರ್‌ ಸುವರ್ಣಗಿರಿಮಠ ಎನ್ನುವ ವ್ಯಕ್ತಿ, 'ಮುಖ ನೋಡೋ ಚಪಲ ಅಣ್ಣನಿಗೆ ಅದು ಕೂಡ ಅಪರಾಧವೋ..' ಎಂದು ಪ್ರಶ್ನೆ ಮಾಡಿದ್ದಲ್ಲದೆ, ನಗುವಿನ ಇಮೋಜಿಯನ್ನು ಹಾಕಿದ್ದಾರೆ.

'ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ..' ನಿರೂಪಕಿಯನ್ನು ಸಿದ್ದು ದಿಟ್ಟಿಸಿ ನೋಡಿದ ವಿಡಿಯೋ ವೈರಲ್!

'ಹುಣಸೆ ಹಣ್ಣಿನ ಮರಕ್ಕೆ ವಯಸ್ಸಾಗಿರಬಹುದು, ಆದರೆ ಅದರ ಹುಳಿಗೆ ಎಂದೂ ವಯಸ್ಸಾಗುವುದಿಲ್ಲ ಎಂದು ಉಮೇಶ್‌ ಕೆ ಕುಮಾರ್‌ ಬರೆದಿದ್ದಾರೆ. ಸಿದ್ಧರಾಮಯ್ಯ ಪಾಪ ನೋಡಿದ್ದಾರೆ.. ಏನ್‌ ತಪ್ಪು ಸ್ವೀಟ್‌ ಹಾರ್ಟ್‌ ಎಂದು ಪ್ರವೀಣ್‌ ಗೋಪಾಲ್‌ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ. ಭೂತೇಶ್‌ ಎನ್ನುವ ಓದುಗರು, 'ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ..' ಈ ಶಕ್ತಿ ನಿನ್ನಲ್ಲಿಲ್ಲ..' ಎಂದು ಬರೆಯುವ ಮೂಲಕ ಸಿದ್ಧರಾಮಯ್ಯ ಅವರನ್ನು ಕಿಚಾಯಿಸಿದ್ದಾರೆ.

'ಇಲ್ಲಿ ಸಿದ್ಧರಾಮಯ್ಯ ನಿರೂಪಕಿಯನ್ನು ನೋಡುತ್ತಿದ್ದಾರೆ. ನಿಮ್ಮ ಕವಿತೆ, ಕಲ್ಪನೆಗೆ ಅವರು ಹೊಣೆ ಅಲ್ಲ. ಅವರ ಕಲ್ಪನೆಗೆ ಅಂಕುಶ ನೀವು ಹಾಕುವಂತಿಲ್ಲ' ಎಂದು ಪ್ರಭು ಬಿಎನ್‌ ಎನ್ನುವ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ. ಇನ್ನು ರಾಜುರಾಜ್‌ ಎನ್ನುವವರು, 'ವಾರೆ ನೋಟ ನೋಡೈತೆ, ಕಣ್ಣು ತೆರೆದು ನೋಡೈತೆ ಟಗರು..ಟಗರು..' ಎಂದು ಬೆಂಕಿ ಇಮೋಜಿಯೊಂದಿಗೆ ಪೋಸ್ಟ್‌ ಮಾಡಿದ್ದಾರೆ.

ಇನ್ನು ಪ್ರಕಾಶ್‌ ಎಚ್‌ ಗೌಡ ಎನ್ನುವವರು, ಸಿದ್ಧರಾಮಯ್ಯ ಅವರನ್ನು ಕರ್ನಾಟಕದ ಶಶಿ ತರೂರ್‌ ಎಂದು ಕರೆದಿದ್ದಾರೆ. ಲಿಂಗರಾಜ್‌ ಗೊರವನಹಳ್ಳಿ ಎನ್ನುವ ಓದುಗರು, 'ಇದೇನು ಸದನದಲ್ಲಿನ ವಿಡಿಯೋ ಏನ್‌ ಅಲ್ವಲ್ಲ..' ಎಂದು ಹೇಳುವ ಮೂಲಕ ಸಿದ್ಧರಾಮಯ್ಯ ಅವರನ್ನು ಬೆಂಬಲಿಸಿದ್ದಾರೆ. 'ಇದರಲ್ಲಿ ಏನು ತಪ್ಪಿದೆ.ಯಾರೋ ಗೊತ್ತಿರೋರು ಇರ್ಬೇಕು ಅಂತಾ ನೋಡಿದ್ದಾರೆ ಅಷ್ಟೇ.ಹಾಗಾದರೆ ಯಾರನ್ನೂ ನೋಡಲೇಬಾರದ..' ಎಂದು ನಾಗ ಎನ್ನುವವರು ಬರೆದಿದ್ದಾರೆ. 'ವಾರಕ್ಕೆರಡು ನಾ ನಾ ನಾಯಕಿ ಗ್ರಾಮ,ಜಿಲ್ಲೆ ,,ರಾಷ್ಟ್ರ ಮಟ್ಟದಲ್ಲಿ ನಡೆಸಲು ಬೇಡಿಕೆ ಬರುತ್ತೆ. ನಾನಾ ತರಹದ ನಾಯಕಿಯರನ್ನು ನೋಡಬಹುದು..' ಎಂದು ಮೋಹನ್‌ ಸುಳ್ಯ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ.