ಅರುಣ್ ಸಿಂಗ್ ಭೇಟಿಯಾದ ಜಗದೀಶ್ ಶೆಟ್ಟರ್: ಕಾರಣ?
* ಹುಬ್ಬಳ್ಳಿ-ಧಾರವಾಡ ಪಾಲಿಕೆ ಫಲಿತಾಂಶ ಚರ್ಚೆ
* ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಖಚಿತ
* ಚುನಾವಣೆ ಫಲಿತಾಂಶದ ಕುರಿತು ಮಾಹಿತಿ ನೀಡಿದ ನಾಯಕರು
ನವದೆಹಲಿ(ಸೆ.08): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಜವಳಿ ಸಚಿವ ಶಂಕರ ಮುನೇನಕೊಪ್ಪ ಅವರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ದೆಹಲಿಯಲ್ಲಿ ಮಂಗಳವಾರ ಭೇಟಿಯಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ಶೆಟ್ಟರ್ ಹಾಗೂ ಮುನೇನಕೊಪ್ಪ ಅವರು ದೆಹಲಿಯ ಜಿಆರ್ಜಿ ರಸ್ತೆಯಲ್ಲಿರುವ ಅರುಣ್ ಸಿಂಗ್ ನಿವಾಸಕ್ಕೆ ತೆರಳಿ ಕೆಲಕಾಲ ಮಾತುಕತೆ ನಡೆಸಿದರು. ಚುನಾವಣೆ ಫಲಿತಾಂಶದ ಕುರಿತು ಮಾಹಿತಿ ನೀಡಿದರು.
ಶಾಕ್ ಕೊಟ್ಟ ಕೋನರೆಡ್ಡಿ, ದೇವೇಗೌಡ್ರಿಗೆ ರಾಜೀನಾಮೆ ಸಲ್ಲಿಕೆ
ಈ ವಿಚಾರವಾಗಿ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಗಳ ಆರತಕ್ಷತೆ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿದ್ದೇವೆ. ಹುಬ್ಬಳ್ಳಿ-ಧಾರವಾಡ ಚುನಾವಣೆ ಫಲಿತಾಂಶ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. ಇದನ್ನು ಹೊರತುಪಡಿಸಿ ಬೇರಿನ್ಯಾವ ರಾಜಕೀಯ ವಿಚಾರವೂ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.