ನೆಲಮಂಗಲ ಕ್ಷೇತ್ರದ ವಿವಿಧೆಡೆ ಪಂಚರತ್ನ ರಥಯಾತ್ರೆ ಸಂಚಾರ, ಇಂದು ತುಮಕೂರಲ್ಲಿ ಯಾತ್ರೆ, ದಲಿತರ ಮನೆಯಲ್ಲಿ ವಾಸ್ತವ್ಯ 

ದಾಬಸ್‌ಪೇಟೆ(ಡಿ.01): ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಮೀಷನ್‌ ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಬುಧವಾರ ನೆಲಮಂಗಲ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಸಂಚರಿಸಿತು. ಯಾತ್ರೆಯಲ್ಲಿ ಆಗಮಿಸಿದ ಕುಮಾರಸ್ವಾಮಿ ಹಾಗೂ ನಿಖಿಲ್‌ಗೆ ಬೃಹತ್‌ ಹಾರ ಹಾಕಿ, ಆರತಿ ಬೆಳಗಿ, ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಈ ವೇಳೆ, ಮಾತನಾಡಿ, ಇಲ್ಲಿರೋ ಗುತ್ತಿಗೆದಾರರಿಗೆ ನಾನೊಂದು ಪ್ರಶ್ನೆ ಕೇಳ್ತೀನಿ. ಇಲ್ಲಿ ಕೆಲಸ ಮಾಡೋದಕ್ಕೆ ಶೇ.40ರಷ್ಟುಕಮಿಷನ್‌ ಕೊಟ್ಟಿದ್ದೀರಾ? ಹಾಗಾದರೆ ಯೋಚನೆ ಮಾಡಬೇಡಿ, ಅಂತಹ ಅಕ್ರಮಕ್ಕೆ ಕಡಿವಾಣ ಹಾಕುತ್ತೇನೆ. ಜೆಡಿಎಸ್‌ ಅ​ಧಿಕಾರಕ್ಕೆ ಬಂದರೆ ಇಂತಹ ಕಮೀಷನ್‌ ದಂಧೆಗೆ ಕಡಿವಾಣ ಹಾಕುತ್ತೇನೆ ಎಂದರು.

Add Asianetnews Kannada as a Preferred SourcegooglePreferred

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರು ಮುಸ್ಲಿಂ ಸಮಾಜದವರು ಜೆಡಿಎಸ್‌ಗೆ ಮತ ಹಾಕಬೇಡಿ ಎಂದರು. ಹಾಗಾಗಿ ಈ ಬಿಜೆಪಿ ಸರ್ಕಾರ ಬರೋದಕ್ಕೆ ಕಾಂಗ್ರೆಸ್‌ನವರೆ ಕಾರಣ ಎಂದು ದೂರಿದರು. ಯಾತ್ರೆ ಮಧ್ಯೆ, ನೆಲಮಂಗಲ ಸಮೀಪದ ಯಂಟಗಾನಹಳ್ಳಿ ಗ್ರಾಮದ ಗೂಬೆಕಲ್ಲಮ್ಮ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಸೋಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಭೋಜನ ಸ್ವೀಕರಿಸಿದರು.
ದಾಬಸ್‌ಪೇಟೆ ಸಮೀಪದ ಸೋಂಪುರ ಹೋಬಳಿಯ ಲಕ್ಕೂರು ಗ್ರಾಮದ ಮಾರಮ್ಮ ದೇವಾಲಯದಲ್ಲಿ ಬುಧವಾರ ರಾತ್ರಿ ಅವರು ವಾಸ್ತವ್ಯ ಮಾಡಲಿದ್ದಾರೆ.

ಅಸ್ಪೃಶ್ಯತೆ ಹೇಳಿಕೆಯನ್ನು ತಿರುಚಲಾಗುತ್ತಿದೆ : ಕುಮಾರಸ್ವಾಮಿ ಆಕ್ರೋಶ

ಇಂದು ತುಮಕೂರಲ್ಲಿ ಯಾತ್ರೆ:

ಈ ಮಧ್ಯೆ,ಯಾತ್ರೆ ಗುರುವಾರ ತುಮಕೂರು ನಗರಕ್ಕೆ ಆಗಮಿಸಲಿದ್ದು, ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ರಾತ್ರಿ ದಿಬ್ಬೂರಿನಲ್ಲಿ ದಲಿತ ಜೆಡಿಎಸ್‌ ಮುಖಂಡರ ಮನೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.