ಉಪಚುನಾವಣೆ ಸಮಯದಲ್ಲಿ ಮೂರು ವರ್ಷಗಳ ಬಳಿಕ ಮತ್ತೆ ತಮ್ಮ ಬೆಂಬಲಿಗರೊಂದಿಗೆ ಮತ್ತೆ ಬಿಜೆಪಿ ವಾಪಸ್ ಆಗಿದ್ದಾರೆ. ಇದರಿಂದ ಕುಮಾರಸ್ವಾಮಿಯವರ  ಮನವೊಲಿಕೆ ಯತ್ನ ವಿಫಲವಾಗಿದೆ.

ಬೀದರ್, (ಏ.11): ಕಳೆದ ವಿಧಾನಸಭಾ ಚುನಾವಣೆಯ ನಂತರ ರಾಜಕೀಯದಿಂದ ದೂರ ಉಳಿದಿದ್ದ ಭಾಲ್ಕಿಯ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತೆ ಬಿಜೆಪಿ ಸೇರಿದ್ದಾರೆ.

Add Asianetnews Kannada as a Preferred SourcegooglePreferred

ಬಸವಕಲ್ಯಾಣದಲ್ಲಿ ಇಂದು (ಭಾನುವಾರ) ನಡೆದ ಉಪ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಪ್ರಕಾಶ ಖಂಡ್ರೆ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಬರಮಾಡಿಕೊಂಡರು.

ಕಾಂಗ್ರೆಸ್ ಸೇರಿದ ಜೆಡಿಎಸ್ ಪ್ರಭಾವಿ ನಾಯಕ: ದಳಪತಿಗಳಿಗೆ ಮರ್ಮಾಘಾತ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ‌ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ, ಶೈಲೇಂದ್ರ ಬೆಲ್ದಾಳೆ ಜಿಲ್ಲೆಯ ಪ್ರಮುಖ ನಾಯಕರು ಇದ್ದರು.

ಪ್ರಕಾಶ ಖಂಡ್ರೆ 1999ರಿಂದ 2018ರ ವರೆಗೆ ಬಿಜೆಪಿಯಲ್ಲಿ ಇದ್ದರು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

2008, 2013ರಲ್ಲಿ ಭಾಲ್ಕಿ ಮತ್ತು 2016ರಲ್ಲಿ ಬೀದರ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. 2018ರಲ್ಲಿ ಬಿಜೆಪಿ ಟಿಕೆಟ್ ದೊರೆಯದ ಕಾರಣ ಮುನಿಸಿಕೊಂಡು ಜೆಡಿಎಸ್‌ ಸ್ಪರ್ಧಿಸಿ ಸೋಲು ಕಂಡಿದ್ದರು.

ಇದೀಗ ಮೂರು ವರ್ಷಗಳ ಬಳಿಕ ಮತ್ತೆ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದಾರೆ. ಉಪ ಚುನಾವಣೆ ಸಂದರ್ಭದಲ್ಲೇ ಪ್ರಕಾಶ ಖಂಡ್ರೆ ಅವರು ಜೆಡಿಎಸ್ ತೊರೆದು ಮತ್ತೆ ಬಜೆಪಿ ಸೇರಿರುವುದು ದಳಪತಿಗಳಿಗೆ ಆಘಾತವಾಗಿದೆ. 

ಮನವೊಲಿಕೆಗೆ ಕುಮಾರಸ್ವಾಮಿ ಯತ್ನ
ಪ್ರಕಾಶ ಖಂಡ್ರೆ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರಲಿರುವ ವಿಷಯ ತಿಳಿದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಎರಡು ದಿನಗಳ ಹಿಂದೆ ಪ್ರಕಾಶ ಖಂಡ್ರೆ ಅವರನ್ನು ಶಾಸಕ ಬಂಡೆಪ್ಪ ಕಾಶೆಂಪೂರ್‌ ಅವರ ನಿವಾಸಕ್ಕೆ ಕರೆದು ಮಾತುಕತೆ ನಡೆಸಿದ್ದರು. ಕುಮಾರಸ್ವಾಮಿ ಅವರು ಪಕ್ಷ ಬಿಡದಂತೆ ಮನವಿ ಮಾಡಿದ್ದರು. ಆದರೂ ಅದ್ಯಾವುಕ್ಕೂ ಮಣೆಯದೇ ಪ್ರಕಾಶ್ ಖಂಡ್ರೆ ಅವರು ಮತ್ತೆ ಬಿಜೆಪಿಗೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಬಸನವಕಲ್ಯಾಣ ಉಪಚುನಾವಣೆಯ ಕೊನೆ ಘಳಿಗೆಯಲ್ಲಿ ಜೆಡಿಎಸ್ ಮರ್ಮಾಘಾತವಾದಂತಾಗಿದೆ.