ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ(Abhishekh banerjee) ಅವರ ಕೊಲ್ಕತ್ತಾ ನಿವಾಸದ ಮೇಲೆ ಪೊಲೀಸರು ಮತ್ತು ಕೇಂದ್ರ ಪಡೆಗಳು ಜಂಟಿಯಾಗಿ ಶೋಧ ಕಾರ್ಯ ನಡೆಸಿವೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ತೃಣಮೂಲ ಕಾಂಗ್ರೆಸ್ ನಾಯಕರಿಗೆ ಒಂದರಿಂದೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಒಂದು ಕಡೆ ಟಿಎಂಸಿ ಲೀಡರ್‌ಗಳ ಮೇಲೆ ಜನಸಾಮಾನ್ಯರು ದಾಳಿ ಮಾಡುತ್ತಿದ್ದರೆ, ಇನ್ನೊಂದು ಅಧಿಕಾರ ಅವಧಿಯಲ್ಲಿನ ಭ್ರಷ್ಟಾಚಾರಗಳು ಈಗ ಕಾನೂನು ಸಂಕಷ್ಟ ತಂದೊಡ್ಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ನಡೆದಿದ್ದು ಸುದ್ದಿಯಾಗಿತ್ತು. ಇದೇ ವೇಳೆ ಆರ್ಥಿಕ ವಂಚನೆ ಪ್ರಕರಣದಲ್ಲಿ ಪೊಲೀಸರು ನೋಟೀಸ್ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯೆ ಬರದೇ ಹಿನ್ನೆಲೆ ಇದೀಗ (ಜೂ.13) ಪ.ಬಂಗಾಳ ಪೊಲೀಸರು ಮತ್ತು ಕೇಂದ್ರ ಪಡೆಗಳ ಜಂಟಿ ತಂಡ ಶನಿವಾರ ಅಭಿಷೇಕ್ ಬ್ಯಾನರ್ಜಿ ಅವರ ಕೊಲ್ಕತ್ತಾ ನಿವಾಸಕ್ಕೆ ತೆರಳಿ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ನಡೆಸಿತು. ಈ ಬೆಳವಣಿಗೆ ಬಂಗಾಳದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಪಶ್ಚಿಮ ಮಿಡ್ನಾಪುರದ ಶಾಲ್ಬಾನಿ ಪೊಲೀಸ್ ಠಾಣೆಯ ತಂಡದ ನೇತೃತ್ವದಲ್ಲಿ ಮತ್ತು ಕೋಲ್ಕತ್ತಾ ಪೊಲೀಸರ ಸಹಾಯದಿಂದ ಶೋಧ ಕಾರ್ಯಾಚರಣೆ ಬೆಳಗಿನ ಜಾವ 3 ಗಂಟೆಯಿಂದ ಪ್ರಾರಂಭವಾಗಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು.

ದಿಢೀರ್ ದಾಳಿ ಸುದ್ದಿ ತಿಳಿದು ಮಮತಾ ಬ್ಯಾನರ್ಜಿ ದೌಡು

ಪೊಲೀಸರ ಈ ದಿಢೀರ್ ದಾಳಿಯ ಸುದ್ದಿ ತಿಳಿದ ನಂತರ, ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಕ್ಷಣವೇ ಅಭಿಷೇಕ್ ಬ್ಯಾನರ್ಜಿ ಅವರ ಮನೆಗೆ ಧಾವಿಸಿದರು. ಪೊಲೀಸರ ಪ್ರಕಾರ, ಅಧಿಕಾರಿಗಳು ಅಭಿಷೇಕ್ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸದ ಬಾಗಿಲು ಹಲವಾರು ಬಾರಿ ತಟ್ಟಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಕೊನೆಗೆ ಪೊಲೀಸ್ ತಂಡ ಬೀಗ ಮುರಿದು ಅಭಿಷೇಕ್ ಬ್ಯಾನರ್ಜಿ ಅವರ ಆವರಣಕ್ಕೆ ಪ್ರವೇಶಿಸಿ ಶೋಧ ನಡೆಸಿತು. ಇನ್ನೊಂದೆಡೆ, ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದಿಂದ ಹೊರಬಂದಿದ್ದಾರೆ. ಆದರೆ ಪೊಲೀಸರು ಬಲವಂತವಾಗಿ ಮನೆಗೆ ಪ್ರವೇಶಿಸಿ ಇಡೀ ಆವರಣವನ್ನು ಶೋಧಿಸಿದರು ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ

Scroll to load tweet…

ದಾಳಿ ವೇಳೆ ಬಿಗಿ ಭದ್ರತೆ

ಇನ್ನು ಕಾರ್ಯಾಚರಣೆಯ ವೇಳೆ ಕಾಲಿಘಾಟ್‌ನ ಪಟುವಾಪಾರ ಪ್ರದೇಶದಲ್ಲಿ ಭಾರೀ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಕೇಂದ್ರ ಪಡೆಗಳು ಪ್ರದೇಶವನ್ನು ಸುತ್ತುವರೆದರು, ಪಡೆಗಳ ಜೊತೆಗೆ ಕಾಲಿಘಾಟ್ ಮತ್ತು ಭವಾನಿಪುರ ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಶೋಧ ತಂಡಕ್ಕೆ ಸಹಾಯ ಮಾಡಿದರು. ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಶಲ್ಬಾನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಆರ್ಥಿಕ ವಂಚನೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಈ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪ ಕೇಳಿಬಂದಿರುವ ಹಿನ್ನೆಲೆ ದಾಖಲೆಗಳನ್ನ ಶೋಧಿಸುತ್ತಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ. ಅಧಿಕಾರಿಗಳ ಪ್ರಕಾರ, ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಪೊಲೀಸರು ಅಭಿಷೇಕ್ ಅವರ ಆಪ್ತ ಸಹಾಯಕನನ್ನು ಹುಡುಕುತ್ತಿದ್ದಾರೆ.

ಮಮತಾ ಎಂಟ್ರಿ ಆಗ್ತಿದ್ದಂತೆ ಹೈಡ್ರಾಮಾ

ಪೊಲೀಸ್ ಮೂಲಗಳ ಪ್ರಕಾರ, ಮಹಿಳಾ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಕಾರ್ಯಾಚರಣೆಯ ಒಂದು ಹಂತದಲ್ಲಿ, ಕೆಲವು ಅಧಿಕಾರಿಗಳು ಈ ವಿಷಯದ ಬಗ್ಗೆ ಚರ್ಚಿಸಲು ಸ್ವಲ್ಪ ಸಮಯದವರೆಗೆ ನಿವಾಸದಿಂದ ಹೊರಬಂದರು ಮತ್ತು ನಂತರ ಹುಡುಕಾಟವನ್ನು ಮುಂದುವರಿಸಲು ಒಳಗೆ ಹೋದರು. ದಾಳಿಯ ಸುದ್ದಿ ತಿಳಿದ ತಕ್ಷಣ, ಮಮತಾ ಬ್ಯಾನರ್ಜಿ ಅವರು ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ಬಂದರು. ಅನಂತರ ನಿವಾಸದಲ್ಲೇ ಬಹಳ ಹೊತ್ತು ಉಳಿದರು. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಮಮತಾ ಬ್ಯಾನರ್ಜಿ ಬಂದ ಬಳಿಕ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಮನೆಯ ಬಳಿ ಜಮಾಯಿಸಿದರು.

ಶೋಧಕಾರ್ಯ ಬಳಿಕ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದಿಂದ ಪೊಲೀಸರು ಹೊರಬಂದರು ಆದರೆ ಶೋಧದ ಸಮಯದಲ್ಲಿ ಯಾವುದೇ ದಾಖಲೆಗಳು ಅಥವಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (ಸಿಐಡಿ) ರಾಜ್ಯ ವಿಧಾನಸಭೆಗೆ ಸಂಬಂಧಿಸಿದ ನಕಲಿ ಸಹಿ ಪ್ರಕರಣದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಪ್ರಶ್ನಿಸಿದ ಕೇವಲ ಎರಡು ದಿನಗಳ ನಂತರ ಮತ್ತು ಹಲವಾರು ತನಿಖಾ ಸಂಸ್ಥೆಗಳು ಅವರಿಗೆ ಹೊಸ ಸಮನ್ಸ್

ಜಾರಿ ಮಾಡಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಹೊಸ ಸಿಐಡಿ ನೋಟಿಸ್:

ನಕಲಿ ಸಹಿ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಕಲ್ಕತ್ತಾ ಹೈಕೋರ್ಟ್ ಅಭಿಷೇಕ್ ಬ್ಯಾನರ್ಜಿಗೆ ನಿರ್ದೇಶನ ನೀಡಿತ್ತು ಮತ್ತು ಎರಡು ವಾರಗಳವರೆಗೆ ಸಿಐಡಿ ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದೆ. ಅವರ ಹೇಳಿಕೆಗಳ ಕುರಿತು ದಾಖಲಾಗಿರುವ ಸೈಬರ್ ದೂರಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಶುಕ್ರವಾರ ಮತ್ತೆ ಅಭಿಷೇಕ್ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸಕ್ಕೆ ಭೇಟಿ ನೀಡಿ ನೋಟಿಸ್ ಜಾರಿ ಮಾಡಿದ್ದರು.

ಸಮನ್ಸ್ ಮತ್ತು ರಾಜಕೀಯ ಜಗಳಗಳು

ಸೈಬರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 16 ರಂದು ಸಿಐಡಿ ಮುಂದೆ ಹಾಜರಾಗುವಂತೆ ಅಭಿಷೇಕ್ ಬ್ಯಾನರ್ಜಿ ಅವರನ್ನು ಕೇಳಲಾಗಿದೆ. ಡೈಮಂಡ್ ಹಾರ್ಬರ್ ಸಂಸದರು ಎರಡೂ ಪ್ರಕರಣಗಳಲ್ಲಿ ತನಿಖೆಗೆ ಸಹಕರಿಸುವುದಾಗಿ ಸಾರ್ವಜನಿಕವಾಗಿ ಹೇಳಿದ್ದಾರೆ. ಪ್ರಾಥಮಿಕ ಶಾಲಾ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಜೂನ್ 15 ರಂದು ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಇಂದು (ಶನಿವಾರ) ಮುಂಜಾನೆ ನಡೆಸಿದ ಶೋಧಗಳು ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ನಡೆಯುತ್ತಿರುವ ತನಿಖೆಯ ಮೂಲಕ ಅಭಿಷೇಕ್ ಬ್ಯಾನರ್ಜಿ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿವೆ. ಇನ್ನೊಂದೆಡೆ ತನಿಖಾ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಾನೂನಿಗಿಂತ ಯಾರೂ ಮೇಲಿಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.