ಅಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೆಂಗಳೂರು : ಅಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Add Asianetnews Kannada as a Preferred SourcegooglePreferred

ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರ ಆರೋಗ್ಯ, ಅಪಘಾತ ಪರಿಹಾರ, ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಪಾವತಿ ಸೇರಿ ಮತ್ತಿತರ ಯೋಜನೆಗಳ ಜಾರಿಗೊಳಿಸಲಾಗುತ್ತಿದೆ. ಅದಕ್ಕಾಗಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ನಿರ್ದೇಶನದಂತೆ, ಯೋಜನೆಗಳ ಜಾರಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಂಸಘಟಿತ ಕಾರ್ಮಿಕ ಕಲ್ಯಾಣದ ಹೆಚ್ಚುವರಿ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳುವಂತೆ ಆರ್ಥಿಕ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಗೆ ಮನವಿ ಮಾಡಲಾಗಿದೆ.

2025-26ನೇ ಸಾಲಿಗೆ 2,120.84 ಕೋಟಿ ರು. ಅವಶ್ಯಕ

ಈ ಕುರಿತು ಪ್ರತಿಕ್ರಿಯಿಸಿರುವ ಸಂತೋಷ್‌ ಲಾಡ್‌, ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಗೆ ಅಸಂಘಟಿತ ಕಾರ್ಮಿಕರನ್ನು ಒಳಪಡಿಸುವ ಆರೋಗ್ಯ ಸೌಲಭ್ಯ, ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ಅಪಘಾತಕ್ಕೊಳಗಾದರೆ ಅವರಿಗೆ ಪರಿಹಾರ ನೀಡುವುದು, ಅಪಘಾತದಿಂದ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ಅಂಗವಿಕಲತೆಗೆ ಒಳಗಾಗುವ ಕಾರ್ಮಿಕರ ಗರಿಷ್ಠ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವುದು ಹಾಗೂ ಅಂಸಘಟಿತ ಕಾರ್ಮಿಕರು ಸಹಜ ಮರಣ ಹೊಂದಿದರೆ ಅವರ ಅಂತ್ಯಕ್ರಿಯೆಗೆ ಸಹಾಯಧನ ನೀಡುವ ಯೋಜನೆ ಅನುಷ್ಠಾನಗೊಳಿಲಾಗಿದೆ. ಈ ಯೋಜನೆಗಳ ಜಾರಿಗೆ 2025-26ನೇ ಸಾಲಿಗೆ 2,120.84 ಕೋಟಿ ರು. ಅವಶ್ಯಕವಾಗಿದೆ. ಈ ಯೋಜನೆಗಳು 1.30 ಕೋಟಿ ಅಸಂಘಟಿತ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಆಯುಷ್ಮಾನ್‌ ಕರ್ನಾಟಕ ಯೋಜನೆ ಅಡಿ ಆರೋಗ್ಯ ಸೌಲಭ್ಯ ನೀಡಲು 1,772.02 ಕೋಟಿ ರು, ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಅಡಿ ತಲಾ 10 ಲಕ್ಷ ರು. ನೀಡಲು 195.65 ಕೋಟಿ ರು, ಅಪಘಾತದಿಂದ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ಅಂಗವಿಕಲತೆಗೆ ಒಳಗಾಗುವ ಕಾರ್ಮಿಕರ ಗರಿಷ್ಠ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನ ನೀಡಲು 6.39 ಕೋಟಿ ರು. ಹಾಗೂ ಅಂತ್ಯಕ್ರಿಯೆ ವೆಚ್ಚ ಪಾವತಿಸಲು 146.78 ಕೋಟಿ ರು. ಅವಶ್ಯಕತೆಯಿದೆ. ಒಟ್ಟಾರೆ ನಾಲ್ಕೂ ಯೋಜನೆಗಳಿಗೆ 2025-26ನೇ ಸಾಲಿಗೆ 2,120.84 ಕೋಟಿ ರು. ಅಗತ್ಯವಿದ್ದು, ಅದನ್ನು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ 1 ರು. ಹೆಚ್ಚುವರಿ ತೆರಿಗೆ ವಿಧಿಸುವುದರಿಂದ ಸಂಗ್ರಹಿಸಿ ಕಾರ್ಮಿಕ ಇಲಾಖೆಗೆ ನೀಡಬೇಕು ಎಂದು ಕೋರಲಾಗಿದೆ ಎಂದು ಹೇಳಿದ್ದಾರೆ.

ಕಾರ್ಮಿಕ ಇಲಾಖೆ ಅಂದಾಜು ಅನುದಾನದ ಅವಶ್ಯಕತೆ:

ಯೋಜನೆಫಲಾನುಭವಿಗಳ ಸಂಖ್ಯೆಅಗತ್ಯ ಅನುದಾನಆರೋಗ್ಯ ಸೌಲಭ್ಯ62.02 ಲಕ್ಷ ಕುಟುಂಬ1,772.02 ಕೋಟಿ ರು.ಅಪಘಾತ ಪರಿಹಾರ3,250195.65 ಕೋಟಿ ರು.ಶೈಕ್ಷಣಿಕ ಸಹಾಯಧನ3,0506.39 ಕೋಟಿ ರು.ಸಹಜ ಮರಣ ಪರಿಹಾರ1,46,783146.78ಒಟ್ಟು-2,120.84 ಕೋಟಿ ರು.

- ಅಸಂಘಟಿತ ಕಾರ್ಮಿಕರಿಗೆ ನೆರವು ನೀಡಲು 2,120.84 ಕೋಟಿ ವಿನಿಯೋಗ

- ಈ ಯೋಜನೆಯಿಂದ ರಾಜ್ಯದ 1.30 ಕೋಟಿ ಅಸಂಘಟಿತ ಕಾರ್ಮಿಕರಿಗೆ ಲಾಭ

- ಆರೋಗ್ಯ, ಇತರೆ ಸೌಲಭ್ಯಗಳಿಗೆ ಈ ಹಣ ಬಳಕೆ । ಆದರೆ ಇದಕ್ಕೆ ಹಣದ ಕೊರತೆ

- ಈ ಹಣ ಹೊಂದಿಸಲು ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆಗೆ ಪ್ರಸ್ತಾವ