ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾಗಿರಿ, ದಬ್ಬಾಳಿಕೆ ಶುರುವಾಗಿದೆ. ಹಿಂದೂ ಧರ್ಮದ ವಿರುದ್ಧ ಅವಹೇಳನ, ಧಾರ್ಮಿಕ ತಾಣದಲ್ಲಿ ದಬ್ಬಾಳಿಕೆ, ಹಿಂದು ದೇವರುಗಳನ್ನು ಅವಮಾನಿಸಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ.

ಕಾರವಾರ (ಸೆ.02): ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾಗಿರಿ, ದಬ್ಬಾಳಿಕೆ ಶುರುವಾಗಿದೆ. ಹಿಂದೂ ಧರ್ಮದ ವಿರುದ್ಧ ಅವಹೇಳನ, ಧಾರ್ಮಿಕ ತಾಣದಲ್ಲಿ ದಬ್ಬಾಳಿಕೆ, ಹಿಂದು ದೇವರುಗಳನ್ನು ಅವಮಾನಿಸಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಇದು ಖಂಡನೀಯವಾಗಿದೆ ಎಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾರವಾರ ಶಾಸಕರೇ ದಬ್ಬಾಳಿಕೆ, ಜನರಲ್ಲಿ ಭಯ ಹುಟ್ಟಿಸುವುದರಲ್ಲಿ ತೊಡಗಿರುವ ಆರೋಪ ಕೇಳಿಬಂದಿದೆ.

ಕಾರವಾರದ ಗುರುಮಠದ ಕುರಿತು ಸಂತೋಷ ನಾಯ್ಕ ಸುದ್ದಿಗೋಷ್ಠಿ ನಡೆಸಿ ಶಾಸಕ ಸತೀಶ ಸೈಲ್ ಅವರ ವರ್ತನೆಯ ಬಗ್ಗೆ ಆಪಾದಿಸಿದ್ದಾರೆ. ಗುರುಮಠ ಆಡಳಿತ ಮಂಡಳಿಯಲ್ಲಿ ಏನೇ ವಿವಾದಗಳಿದ್ದರೂ ಅದನ್ನು ಮಾತುಕತೆಯ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಬೆದರಿಕೆ ಹಾಕುವುದು, ದಬ್ಬಾಳಿಕೆ ನಡೆಸುವುದು ಶೋಭೆ ತರುವ ಸಂಗತಿ ಅಲ್ಲ. ಶಾಸಕರ ಸಂಸ್ಕೃತಿ ಏನು ಎನ್ನುವುದು ಇದಕ್ಕೆ ಸಾಕ್ಷಿಯಾಗಿದೆ.

ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ: ಸಚಿವ ಮಹದೇವಪ್ಪ

ನಾನು ಇಲ್ಲಿಯ ರಾಜ. ನಾನು ಹೇಳಿದಂತೆ ಕೇಳಬೇಕು. ಚಾವಿ ಕೊಡದಿದ್ದರೆ ಮಠ ಒಡೆಯುತ್ತೇನೆ ಎಂದು ಸೈಲ್ ಬೆದರಿಕೆ ಹಾಕಿದ್ದು, ಈ ವೇಳೆ ಗುತ್ತಿಗೆದಾರರ ಸಂಘದವರೂ ಇದ್ದರು ಎಂದು ಸಂತೋಷ ಗುರುಮಠ ಆರೋಪಿಸಿದ್ದಾರೆ. ಒಂದೊಮ್ಮೆ ಸಂತೋಷ ನಾಯ್ಕ ಅವರ ಆರೋಪ ನಿಜವಾದದ್ದೆ ಆದರೆ, ಜನಪ್ರತಿನಿಧಿಯಾದವರು ಕಾನೂನಿಗೆ ಬೆಲೆ ಕೊಡದೆ ಕಾನೂನನ್ನೇ ಕೈಗೆ ತೆಗೆದುಕೊಂಡು ಗೂಂಡಾಗಳಂತೆ ವರ್ತಿಸಿದರೆ ಜನತೆಯ ಪಾಡು ಏನಾಗಬೇಕು. ದೇವಾಲಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇದನ್ನು ಶಾಸಕರು ಅರಿತುಕೊಳ್ಳಬೇಕು.

ಹಿಂದು ದೇವರು, ಮೋದಿ ಅವರ ದೂಷಣೆ ಅಕ್ಷಮ್ಯ ಅಪರಾಧ: ಕಾರವಾರದ ಎಲಿಷಾ ಎಲಕಪಾಟಿ ಎನ್ನುವವರು ಹಿಂದು ದೇವರುಗಳ ಬಗ್ಗೆ ಮನಬಂದಂತೆ ಮಾತನಾಡಿದ್ದಾರೆ. ದೇವರುಗಳನ್ನು ಅವಹೇಳನ ಮಾಡಿದ್ದಾರೆ. ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿ, ಮತ್ತಿತರರ ಮೇಲೂ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಂದೇಶ ನೀಡಬೇಕಾಗಿದೆ. ಇದರ ಜೊತೆಗೆ ಎಲಿಷಾ ಎಲಕಪಾಟಿಯ ಹಿಂದೆ ಯಾರಿದ್ದಾರೆ. ಹಿಂದುಗಳ ಹಾಗೂ ಬಿಜೆಪಿ ನಾಯಕರ ವಿರುದ್ಧ ಇಂತಹ ಷಡ್ಯಂತ್ರದಲ್ಲಿ ಯಾರೆಲ್ಲ ಭಾಗಿಗಳಾಗಿದ್ದಾರೆ ಎನ್ನುವುದನ್ನು ಪತ್ತೆಹಚ್ಚಬೇಕು. 

ಕಾವೇರಿ ಹೋರಾಟಕ್ಕೆ ಧುಮುಕದ ಕನ್ನಡ ಚಿತ್ರರಂಗ: ರೈತರ ಆಕ್ರೋಶ

ದೇವರುಗಳನ್ನು ಅವಹೇಳನ ಮಾಡುವಾಗಲೂ ತೆಪ್ಪಗಿದ್ದುದು ಯಾಕೆ, ಬಿಜೆಪಿಯ ವಿರುದ್ಧ ಕುತಂತ್ರ ನಡೆಸಿದ್ದಾರೆಯೇ. ಯಾರೆಲ್ಲ ಈ ಸಂಚಿನ ಹಿಂದೆ ಇದ್ದಾರೆ ಎಂದು ತನಿಖೆ ನಡೆಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದು ದೇವರುಗಳ ಅವಹೇಳನ, ರಾಷ್ಟ್ರೀಯವಾದಿ ಮುಖಂಡರ ತೇಜೋವಧೆ ನಡೆಯುತ್ತಿದೆ. ಸರ್ಕಾರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ. ಈ ರೀತಿ ಮುಂದುವರಿದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾದೀತು ಎಂದು ರೂಪಾಲಿ ಎಸ್.ನಾಯ್ಕ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.