ಸಮಾಜದ ಆರೋಗ್ಯಕ್ಕೆ ಬೇಕಾದ ಕನಿಷ್ಠ ಅಥವಾ ಯಾವುದೇ ಜ್ಞಾನವಿಲ್ಲದ ಸಿ.ಟಿ. ರವಿಯಂತಹ ಶೂದ್ರ ಬಿಜೆಪಿ ನಾಯಕರು ಶೂದ್ರರು ಮತ್ತು ದಲಿತರ ಪಾಲಿಗೆ ಅಪಾಯಕಾರಿ ರೋಗವಾಗಿ ಪರಿಣಮಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಮೈಸೂರು (ಜ.02): ಸಮಾಜದ ಆರೋಗ್ಯಕ್ಕೆ ಬೇಕಾದ ಕನಿಷ್ಠ ಅಥವಾ ಯಾವುದೇ ಜ್ಞಾನವಿಲ್ಲದ ಸಿ.ಟಿ. ರವಿಯಂತಹ ಶೂದ್ರ ಬಿಜೆಪಿ ನಾಯಕರು ಶೂದ್ರರು ಮತ್ತು ದಲಿತರ ಪಾಲಿಗೆ ಅಪಾಯಕಾರಿ ರೋಗವಾಗಿ ಪರಿಣಮಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಟೀಕಿಸಿದ್ದಾರೆ. ಸಿ.ಟಿ. ರವಿ ಅಂತಹ ಶೂದ್ರನನ್ನು ಬಳಸಿಕೊಂಡು ಬಿಜೆಪಿಯು ಮನುವಾದದಂತಹ ಅಮಾನುಷ ಸಿದ್ಧಾಂತವನ್ನು ಹೇರಲು ಹೊರಟಿದೆ. ಅಧಿಕಾರಕ್ಕಾಗಿ ಹಪಹಪಿಸುವ ಸಿ.ಟಿ. ರವಿ ಅಂತಹ ಕೆಲಸ ಬೇಕಾದರೂ ಮಾಡಲು ತಯಾರಿದ್ದಾರೆ. 

ಬಿಜೆಪಿಗರು ಈತನ ಬಾಯಲ್ಲಿ ಬೆಂಕಿ ಮತ್ತು ಮೆದುಳಲ್ಲಿ ವಿಷವನ್ನು ತುಂಬಿ ಈತನನ್ನು ಜೀವಂತ ಬಾಂಬ್‌ ಆಗಿ ರೂಪಿಸಿ ಈತನಿಗೆ ವೇದಿಕೆ ಕಲ್ಪಿಸುತ್ತಾರೆ. ಹೋದರೆ ಹೋಗಲಿ ಲಾಭವಾದರೆ ಆಗಲಿ ಎಂಬ ರೀತಿಯಲ್ಲಿ ಎಂದಿದ್ದಾರೆ. ಟಿಪ್ಪುವನ್ನು ಹತ್ಯೆ ಮಾಡಿದವರು ಇಬ್ಬರು ಒಕ್ಕಲಿಗ ನಾಯಕರು ಎಂದು ಬಾಯಿಗೆ ಬಂದಂತೆ ಇತಿಹಾಸ ತಿರುಚುವ ಸುಳ್ಳನ್ನು ಹೇಳಿ ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ಅತ್ಯಂತ ಸ್ಪಷ್ಟವಾಗಿ ದ್ವೇಷ ಮೂಡಿಸುತ್ತಿದ್ದಾರೆ. 

Mysuru: ಅಮಿತ್‌ ಶಾ ಹೇಳಿಕೆ ಹಾಸ್ಯಾಸ್ಪದ: ಎಚ್‌.ಸಿ.ಮಹದೇವಪ್ಪ

ಆ ಮೂಲಕ ಹಿಂದೆ ಬ್ರಿಟಿಷರ ಪರವಾಗಿದ್ದ ಈ ಮನಸ್ಥಿತಿಯು ಬ್ರಿಟಿಷರ ರೀತಿಯಲ್ಲೇ ಸಮುದಾಯದ ನಡುವೆ ಒಡಕು ಮೂಡಿಸಿ ಬ್ರಿಟಿಷರು ಹೇಳಿಕೊಟ್ಟ ಪಾಠದ ಮೂಲಕ ಅವರ ಋುಣ ತೀರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಇಡೀ ಜೀವಿತಾವಧಿಯನ್ನು ಬಡವರು ಮತ್ತು ದಲಿತ ದಮನಿತರ ಏಳಿಗೆಗಾಗಿ ಮುಡುಪಾಗಿಟ್ಟಟಿಪ್ಪುವಿನ ಕುರಿತು ನಮ್ಮ ಮೈಸೂರು ಭಾಗದ ರೈತಾಪಿ ಮನೆಗಳ ಜನರು ಲಾವಣಿಗಳನ್ನು ಕಟ್ಟಿಹಾಡಿದ್ದಾರೆ. ಭೂ ಸುಧಾರಣೆ ಮಾಡಿ ರೇಷ್ಮೆ, ತೋಟಗಾರಿಕೆ, ಕೈಗಾರಿಕೆ ಮುಂತಾದವುಗಳ ಮೂಲಕ ಇಡೀ ಮೈಸೂರು ಭಾಗವನ್ನು ಮಾದರಿಯನ್ನಾಗಿಸಿದ ಶ್ರೇಯ ಟಿಪ್ಪುವಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ.

ಶೋಷಿತರು ಉಳಿಯಬೇಕಾದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲೇಬೇಕು: ಶೋಷಿತ ತಳ ಸಮುದಾಯಗಳು ಉಳಿಯಬೇಕಾದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲೇಬೇಕೆಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಕರೆ ನೀಡಿದರು. ತಾಲೂಕಿನ ಸೋಸಲೆ ಮತ್ತು ದೊಡ್ಡೇಬಾಗಿಲು ಗ್ರಾಪಂ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಈಗಿನ ಶಾಸಕ ಅಥವಾ ಸುನಿಲಬೋಸ್‌ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂಬುದು ಮುಖ್ಯವಲ್ಲ, ಜನ ವಿರೋಧಿ ಆಡಳಿತದ ಮೂಲಕ ಸಾಮಾನ್ಯರ ನೆಮ್ಮದಿಯ ಬದುಕನ್ನ ಕಸಿದುಕೊಳ್ಳುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುವುದು ಮುಖ್ಯ. ಇಲ್ಲದಿದ್ದರೆ ಅಹಿಂದ ವರ್ಗಗಳ ಬಡವರು, ಅಲ್ಪಸಂಖ್ಯಾತರು ಹಾಗೂ ರೈತರು ತಮ್ಮ ಅಸ್ತಿತ್ವಕ್ಕಾಗಿ ಪರಿತಪಿಸಬೇಕಾಗುತ್ತದೆ ಎಂದರು.

ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ: ನಾಳೆ ವಿಜಯಪುರ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸ್ವಾಭಿಮಾನದ ಬದುಕನ್ನು ಪ್ರತಿಯೊಬ್ಬರು ನಡೆಸಬೇಕೆಂದು ಅಂಬೇಡ್ಕರ್‌ ಅವರು ಸಂವಿಧಾನ ಸಮಾನತೆಯನ್ನು ನೀಡಲು ಸಾರ್ವತ್ರಿಕವಾಗಿ ಮತದಾನ ಹಕ್ಕನ್ನು ನೀಡಿದ್ದಾರೆ, ಆದರೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿಯವರು ಮತದಾರರ ಪಟ್ಟಿಯಿಂದಲೇ ಹೆಸರನ್ನು ಕಳ್ಳತನ ಮಾಡಿ, ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ದೂರಿದರು. ಯುವ ಮುಖಂಡ ಸುನಿಲ್‌ ಬೋಸ್‌, ಎಪಿಎಂಸಿ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ,ಎಸ್ಸಿ, ಎಸ್ಟಿಹಿತರಕ್ಷಣಾ ಸಮಿತಿ ಸದಸ್ಯ ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯ ಹೊನ್ನನಾಯಕ, ಗಾಣಿಗರ ಸಂಘದ ಮಾಜಿ ಅಧ್ಯಕ್ಷ ಎಸ್‌. ಮಹದೇವಶೆಟ್ಟಿ, ಪ್ರಾಧ್ಯಾಪಕ ಡಾ. ಸೋಸಲೆ ಮಹೇಶ್‌ ಮಾತನಾಡಿದರು.