ರೆಸಾರ್ಟ್ನಲ್ಲಿ ಮಾಜಿ ಸಿಎಂ ಎಚ್ಡಿಕೆ ತಂತ್ರಗಾರಿಕೆ: ರಾಜಕೀಯ ಲೆಕ್ಕಚಾರದಲ್ಲಿ ಕುಮಾರಸ್ವಾಮಿ!
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಮಾಜಿ ಸಿ.ಎಂ ಹೆಚ್ ಡಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಹೂಡಿ ರಾಜಕೀಯ ತಂತ್ರಗಾರಿಕೆ ಆರಂಭಿಸಿದ್ದಾರೆ.
![Ex CM HD Kumaraswamy strategy at the resort at Chikkamagaluru gvd Ex CM HD Kumaraswamy strategy at the resort at Chikkamagaluru gvd](https://static-ai.asianetnews.com/images/01hkt1mqap0cfnfx0k1m7r57qj/dvdv_363x203xt.jpg)
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜ.10): ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಮಾಜಿ ಸಿ.ಎಂ ಹೆಚ್ ಡಿ ಕುಮಾರಸ್ವಾಮಿ ರೆಸಾರ್ಟ್ ವಾಸ್ತವ್ಯ ಹೂಡಿ ರಾಜಕೀಯ ತಂತ್ರಗಾರಿಕೆ ಆರಂಭಿಸಿದ್ದಾರೆ. ಕಾಫಿನಾಡಿನ ಹನಿ ಡ್ಯೂ ರೆಸಾರ್ಟ್ ನಲ್ಲಿ ನಿನ್ನೆಯಿಂದ (ಮಂಗಳವಾರ ) ಕುಮಾರಸ್ವಾಮಿ ವಾಸ್ತವ್ಯ ಹೂಡಿ ಲೋಕಸಭಾ ಚುನಾವಣೆಯ ಲೆಕ್ಕಾಚಾರಕ್ಕೆ ಇಳಿದಿದ್ದಾರೆ.ಹಳೆ ಮೈಸೂರು ಭಾಗದ ಟಿಕೆಟ್ ಸೇರಿದಂತೆ ಮಂಡ್ಯದಿಂದ ಸ್ಪರ್ಧೆ ಬಗ್ಗೆ ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.
ಮಂಡ್ಯ ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಬಗ್ಗೆ ಹೆಚ್ಚು ಚರ್ಚೆ?: ಲೋಕಸಭೆ ಚುನಾವಣೆಗೆ ವಿವಿಧ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿರುವ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರು ತಾಲೂಕಿನ ರೆಸಾರ್ಟ್ವೊಂದರಲ್ಲಿ ತಂಗಿದ್ದು, ಆಪ್ತರೊಂದಿಗೆ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.ಮಲ್ಲೇನಹಳ್ಳಿ ಸಮೀಪದ ಹನಿಡ್ಯೂ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಕುಮಾರಸ್ವಾಮಿ, ಪಕ್ಷದ ಮುಖಂಡರುಗಳಾದ ಮಂಡ್ಯದ ಮಾಜಿ ಸಂಸದ ಪುಟ್ಟರಾಜು, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ, ಸ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಇತರರ ಜೊತೆ ಇಡೀ ದಿನ ಸಮಾಲೋಚನೆ ನಡೆಸಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯ ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಕುರಿತಾಗಿಯೇ ಹೆಚ್ಚಿನ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಕೋಮು ದಳ್ಳುರಿ ಎಬ್ಬಿಸಲು ಕಾಂಗ್ರೆಸ್ ಪ್ಲಾನ್: ಸಚಿವೆ ಶೋಭಾ ಕರಂದ್ಲಾಜೆ ಆರೋಪ
ಜೆಡಿಎಸ್ ಭದ್ರಕೋಟೆ: ಈ ವೇಳೆ ರೆಸಾರ್ಟ್ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮಂಡ್ಯ ಜೆಡಿಎಸ್ನ ಭದ್ರಕೋಟೆ, ನಿಖಿಲ್ ಕುಮಾರಸ್ವಾಮಿ ಅವರು ಪುಟ್ಟರಾಜು ಅವರಿಗಿಂತ ಹೆಚ್ಚು ಮತಗಳಿಸಿದ್ದರು. ಅಲ್ಲಿ ನಮಗೆ ನೆಲೆ ಇಲ್ಲವಾಗಿದ್ದರೆ ಅಷ್ಟು ಮತಗಳು ಎಲ್ಲಿಂದ ಬರುತ್ತಿತ್ತು ಎಂದು ಪ್ರಶ್ನಿಸಿದರು.ಸೀಟು ಹಂಚಿಕೆ ವೇಳೆ ನಮಗೆ ನಾಲ್ಕೈದು ಕ್ಷೇತ್ರಗಳು ಸಿಗಬಹುದು. ಅಭ್ಯರ್ಥಿ ಯಾರಾಗಬೇಕು ಎನ್ನುವ ಕುರಿತು ಪ್ರತಿದಿನ ಚರ್ಚೆ ನಡೆಯುತ್ತಿದೆ. ನಮ್ಮ ಶಕ್ತಿಯನ್ನು ಬಿಜೆಪಿಗೆ ಧಾರೆ ಎರೆಯಲು ಸಮಾಲೋಚನೆಗಳಾಗಿವೆ. ಕಾರ್ಯಕರ್ತರು ಒಂದಾಗಬೇಕೆಂಬುದು ಕುಮಾರಸ್ವಾಮಿ ಅವರ ಆಶಯ ಎಂದರು. ನಾವು ಈಗ ಎನ್ಡಿಎ ಭಾಗವಾಗಿದ್ದೇವೆ. ಸೀಟು ಹಂಚಿಕೆ ವಿಳಂಭವಾಗಬಾರದು ಎಂದು ಹೇಳಿದರು. ಮಂಡ್ಯ, ತುಮಕೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿಗೆ ಸ್ಪರ್ಧೆ ಮಾಡುವಂತೆ ದುಂಬಾಲು ಬಿದ್ದಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಸಂಕ್ರಾತಿಗೆ ಶುಭ ಸುದ್ದಿ ನೀಡಬಹುದು ಎಂದು ಭೋಜೇಗೌಡ ಭವಿಷ್ಯ ನುಡಿದರು.