* IPS ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ* ಭಾಸ್ಕರರಾವ್ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶ * ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಬೆಂಗಳೂರು, (ಏ.03): ರಾಜ್ಯದಲ್ಲಿ ಖ್ಯಾತಿ ಗಳಿಸಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಐಪಿಎಸ್ ಅಧಿಕಾರಿ ರೈಲ್ವೇ ಎಡಿಜಿಪಿ ಬಿ. ಭಾಸ್ಕರರಾವ್ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ.
ಹೌದು... ಬೆಂಗಳೂರು ಮೂಲದ ಹಿರಿಯ ಐಪಿಎಸ್ ಅಧಿಕಾರಿ ಬಿ. ಭಾಸ್ಕರರಾವ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದು, ಸೋಮವಾರ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೋಮವಾರ (ಏಪ್ರಿಲ್ 4) ಬೆಳಗ್ಗೆ 11 ಗಂಟೆಗೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.
ನವದೆಹಲಿಯ ದೀನ್ ದಯಾಳ್ ಉಪಧ್ಯಾಯ ಮಾರ್ಗದಲ್ಲಿರುವ ಎಎಪಿ ಪಕ್ಷದ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಎಎಪಿ ಸೇರಲಿದ್ದಾರೆ. ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್, ಎಎಪಿ ಹಿರಿಯ ಮುಖಂಡ ಮನೀಷ್ ಸಿಸೋಡಿಯಾ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
Karnataka Politics: ಆಮ್ ಆದ್ಮಿ ಪಕ್ಷದತ್ತ ಭಾಸ್ಕರ್ ರಾವ್ ಹೆಜ್ಜೆ?
ಭಾರತೀಯ ಪೊಲೀಸ್ ಸೇವೆಗೆ ಸೇರಿದ್ದ ಭಾಸ್ಕರರಾವ್ ರೈಲ್ವೆ ಪೊಲೀಸ್ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2021 ರಲ್ಲಿ ಸ್ವಯಂ ನಿವೃತ್ತಿ ಬಯಸಿ 2021 ಸೆಪ್ಟೆಂಬರ್ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಸರ್ಕಾರ ಕಳೆದ ವಾರವಷ್ಟೇ ಭಾಸ್ಕರರಾವ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಇದೀಗ ರಾಜಕೀಯ ಭವಿಷ್ಯ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ.
ಸ್ವಯಂ ನಿವೃತ್ತಿ ಬಯಸಿ ಭಾಸ್ಕರರಾವ್ ಅರ್ಜಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅಂಗೀಕರಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದರು. ಒಂದು ವಾರದ ಹಿಂದೆಷ್ಟೇ ರಾವ್ ಮನವಿ ಅಂಗೀಕರಿಸಿ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಹೊಸ ಪಯಣದ ಬಗ್ಗೆ ಭಾಸ್ಕರರಾವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ಅವರು, ನನ್ನ 32 ವರ್ಷಗಳ ಭಾರತೀಯ ಪೊಲೀಸ್ ಸೇವೆಗೆ ತೆರೆ ಎಳೆಯುತ್ತಿದ್ದೇನೆ. ನನ್ನ ಕುಟುಂಬಕ್ಕೆ, ಗೆಳೆಯರಿಗೆ, ಸಹೋದ್ಯೋಗಿಗಳಿಗೆ, ಹಿರಿಯ ಕಿರಿಯರಿಗೆ ಹಾಗೂ ಕರ್ನಾಟಕದ ಸರ್ಕಾರಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದರು. ಇದೀಗ ಆಮ್ ಆದ್ಮಿ ಸೇರ್ಪಡೆ ವಿಷಯ ಹೊರ ಬಿದ್ದಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಸ್ವಯಂ ನಿವೃತ್ತಿ ಕೋರಿ 2021ರ ಸೆಪ್ಟೆಂಬರ್ 16ರಂದು ಅರ್ಜಿ ಸಲ್ಲಿಸಿದ್ದರು. ನಿರ್ಧಾರ ಪುನರ್ ಪರಿಶೀಲನೆಗೆ ಕೇಂದ್ರ ಗೃಹ ಸಚಿವಾಲಯ ಅವಕಾಶ ನೀಡಿತ್ತು. 3 ತಿಂಗಳೊಳಗೆ ಗೃಹ ಸಚಿವಾಲಯ ಸಂಬಂಧಿಸಿದ ಅಧಿಕಾರಿಯನ್ನ ಸಂಪರ್ಕಿಸಬೇಕು. 6 ತಿಂಗಳುಗಳೇ ಕಳೆದರೂ ಗೃಹ ಸಚಿವಾಲಯದ ಉತ್ತರ ಬಾರದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2)ನಡಿ ಸೇವೆಗೆ ಗುಡ್ ಬೈ ಹೇಳಿದ್ದಾರೆ.
ಎಐಎಸ್ ಆಕ್ಟ್ 16(2) ಪ್ರಕಾರ ಸಂಬಂಧಿಸಿದ ಅಧಿಕಾರಿ 50 ವರ್ಷ ವಯಸ್ಸು ದಾಟಿರಬೇಕು. 20 ವರ್ಷ ಸೇವೆ ಪೂರ್ಣಗೊಳಿಸಿರಬೇಕು. ನಿವೃತ್ತಿಗೆ ಮನವಿ ಸಲ್ಲಿಸುವಾಗ ಅಮಾನತ್ತಿನಲ್ಲಿರಬಾರದು. ಎಐಎಸ್ ಆಕ್ಟ್ 16(2)ನಡಿ ನಿವೃತ್ತಿಗೆ ಅರ್ಹರಿರುವ ಕಾರಣ ಅಧಿಕೃತವಾಗಿ ಸೇವೆಗೆ ರಾಜೀನಾಮೆ ನಿಡಿದ್ದಾರೆ.
ಭಾಸ್ಕರ್ ರಾವ್ ಬಗ್ಗೆ
ಬಿ. ಭಾಸ್ಕರರಾವ್ ಮೂಲತಃ ಬೆಂಗಳೂರಿನವರೇ. 1990 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಯಾಗಿದ್ದರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಭಾಸ್ಕರ್ ರಾವ್ ಬೆಂಗಳೂರು ಕಮೀಷನರ್ ಅಗಿ ಒಂದು ವರ್ಷ ಸೇವೆ ಸಲ್ಲಿಸಿದ್ದು ವಿಶೇಷ. ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ 2019 ಆ. 2 ರಂದು ಬೆಂಗಳೂರು ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಇದರ ಜತೆಗೆ ಆಂತರಿಕ ಭದ್ರತೆ, ರೈಲ್ವೇ ಎಡಿಜಿಪಿ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ಬೆಳಗಾವಿ ಪೊಲೀಸ್ ಕಮೀಷನರೇಟ್ ಆದ ಬಳಿಕ ಮೊದಲ ಕಮೀಷನರ್ ಆಗಿ ಭಾಸ್ಕರರಾವ್ ಸೇವೆ ಸಲ್ಲಿಸಿದ್ದರು. ಇದೀಗ ರಾಜಕೀಯ ಅಖಾಡಕ್ಕಿ ಇಳಿದಿದ್ದಾರೆ.
