ಕಳೆದ ಒಂದು ದಶಕದಿಂದಲೂ ಚಿತ್ರದುರ್ಗದ ಜನರಿಗೆ ರಾಜಕಾರಣಿಗಳು ಮಂಕು ಬೂದಿ ಎರಚುತ್ತಲೇ‌ ಬರ್ತಿದ್ದಾರೆ. ಚುನಾವಣೆ ಬಂದ್ರೆ ಸಾಕು, ಯಾರ ಬಾಯಲ್ಲಿ ನೋಡಿದ್ರು ನೇರ ರೈಲು ಮಾರ್ಗ ಯೋಜನೆ. ಒಂದು ರೀತಿಯಲ್ಲಿ ಲೋಕಸಭಾ ಚುನಾವಣೆ ಬಂದಾಗ ಮಾತ್ರ ನೇರ ರೈಲು ಮಾರ್ಗ ಯೋಜನೆ  ನೆನಪಿಗೆ ಬರೋದು‌.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿತ್ರದುರ್ಗ (ಜ.30): ಲೋಕಸಭೆ ಚುನಾವಣೆ ಬಂತಂದ್ರೆ ಸಾಕು ಈ ಯೋಜನೆಯೊಂದು ರಾಜಕಾರಣಿಗಳಿಗೆ ನೆನಪಾಗುತ್ತೆ. ಕಳೆದ ಹತ್ತಾರು ವರ್ಷಗಳಿಂದಲೂ ಈ ಯೋಜನೆಯೊಂದೇ ಚುನಾವಣೆ ದಾಳವಾಗಿರೋದು ಈ ಭಾಗದ ಜನರ ದುರ್ದೈವವಾಗಿದೆ. ಅಷ್ಟಕ್ಕೂ ಆ ಯೋಜನೆ ಯಾವುದು? 

ಕಳೆದ ಒಂದು ದಶಕದಿಂದಲೂ ಕೂಡ ಕೋಟೆನಾಡು ಚಿತ್ರದುರ್ಗದ ಜನರಿಗೆ ರಾಜಕಾರಣಿಗಳು ಮಂಕು ಬೂದಿ ಎರಚುತ್ತಲೇ‌ ಬರ್ತಿದ್ದಾರೆ. ಅದ್ರಲ್ಲಂತೂ ಲೋಕಸಭೆ ಚುನಾವಣೆ ಬಂದ್ರೆ ಸಾಕು, ಯಾರ ಬಾಯಲ್ಲಿ ನೋಡಿದ್ರು ನೇರ ರೈಲು ಮಾರ್ಗ ಯೋಜನೆ. ಒಂದು ರೀತಿಯಲ್ಲಿ ಲೋಕಸಭಾ ಚುನಾವಣೆ ಬಂದಾಗ ಮಾತ್ರ ನೇರ ರೈಲು ಮಾರ್ಗ ಯೋಜನೆ ಅವರ ನೆನಪಿಗೆ ಬರೋದು‌. ಇದೊಂದು ರೀತಿ ಚುನಾವಣಾ ದಾಳವಾಗಿದ್ಯಾ ಎನ್ನುವ ಆತಂಕ ಈ ಭಾಗದ ಜನರಲ್ಲಿ ಮೂಡಿದೆ. 

ಕಳೆದ ಬಾರಿಯ ಚುನಾವಣೆಯಲ್ಲಿಯೂ ಕೇಂದ್ರ ಸಚಿವ ನಾರಾಯಣಸ್ವಾಮಿ ಸೇರಿದಂತೆ ಲೋಕ ಸಭೆಗೆ ಸ್ಪರ್ಧಿಸಿದ್ದ ಪ್ರತಿಯೊಬ್ಬರು ಚಿತ್ರದುರ್ಗ,ತುಮಕೂರು, ದಾವಣಗೆರೆ ನೇರ ರೈಲು ಮಾರ್ಗ ಮಾಡಿಯೇ ಮಾಡ್ತೀವಿ ಎಂದು ಶಪತ ಮಾಡಿದ್ರು. ಆದರೆ ಇದು ಕೇವಲ ಮಾತಾಗಿಯೇ ಉಳಿದಿದೆಯೇ ಹೊರೆತು ಯಾವುದೇ ಕಾರ್ಯರೂಪಕ್ಕೆ ಬರೋದು ಇರೋದು ನೋವಿನ ಸಂಗತಿ. ನಾರಾಯಣಸ್ವಾಮಿ ಕೇಂದ್ರ ಸಚಿವರು ಆದ ಮೇಲೆ ಜಿಲ್ಲೆಯ ಜನರಿಗೆ ನೇರ ರೈಲು ಮಾರ್ಗ ಯೋಜನೆ ಮಾಡ್ತೀನಿ ಎಂದು ಪುಂಗಿದ್ದೇ ಪುಂಗಿದ್ದು, ಅವರು ಮಾತ್ರ ಭಾಷಣದಲ್ಲಿ ರೈಲು ಬಿಟ್ರೆ ವಿನಃ ಕೆಲಸ ಮಾಡ್ಲಿಲ್ಲ ಎಂದು ಸ್ಥಳೀಯರು ಕಿಡಿಕಾರಿದರು.

ಇನ್ನೂ ಕೋಟೆನಾಡಿನ‌ ಜನರ ಸುಮಾರು ವರ್ಷಗಳ ಕನಸು ಈ ನೇರ ರೈಲು ಮಾರ್ಗ ಯೋಜನೆ. ಈ ಭಾಗದ ಜನರು ಹಾಗೂ ರೈತ ಸಂಕುಲಕ್ಕೆ ನೇರವಾಗುವ ಏಕೈಕ ಯೋಜನೆ ಇದು. ನೇರ ರೈಲು ಮಾರ್ಗವಾದ್ರೆ ರೈತರು ತಮ್ಮ ಬೆಳೆಯನ್ನು ನೇರವಾಗಿ ಬೆಂಗಳೂರಿಗೆ ತೆಗೆದುಕೊಂಡು‌ ಹೋಗಿ ಮಾರಾಟ ಮಾಡುವ ಮೂಲಕ ಅಲ್ಪ ಸ್ವಲ್ಪ ಲಾಭ ಗಳಿಸಲು ಅನುಕೂಲವಾಗಲಿದೆ. ಇದಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಈ ಯೋಜನೆ ಅನುಕೂಲವಾಗಲಿದೆ. ಆದ್ರೆ ರಾಜಕಾರಣಿಗಳು ಇದನ್ನ‌ ರಾಜಕೀಯಕ್ಕೋಸ್ಕರ ಮಾತ್ರ ಬಳಸಿಕೊಂಡು ಬಿಡೋದು ಎಷ್ಟು ಸರಿ. ಎಂದು ಸ್ಥಳೀಯರು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಾರೆ ಕೋಟೆನಾಡಿನ ಜನರ ನೇರ ರೈಲು ಮಾರ್ಗ ಯೋಜನೆ ಕೇವಲ ಚುನಾವಣಾ ದಾಳವಾಗಿರೋದು ನೋವಿನ ಸಂಗತಿ. ಇನ್ನಾದ್ರು ರಾಜಕಾರಣಿಗಳು ಇಚ್ಛಾಶಕ್ತಿಯಿಂದ ಯೋಜನೆ ಪೂರ್ಣಗೊಳಿಸಲು ಮುಂದಾಗಬೇಕು ಎಂಬುದು ಎಲ್ಲರ ಒತ್ತಾಯ.