Asianet Suvarna News Asianet Suvarna News

ಪ್ರತಿಭಟನೆಗೆ ಸೀಮಿತವಾದ ರಾಣಿಬೆನ್ನೂರು ಬಂದ್‌

  • ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆಎಸೆದ ಪ್ರಕರಣ ಖಂಡಿಸಿ ರಾಣಿಬೆನ್ನೂರುನಲ್ಲಿ ಕಾಂಗ್ರೆಸ್ ಪ್ರತಿಭಟನೆ.
  • ಕರೆ ನೀಡಲಾಗಿದ್ದ ಬಂದ್ ಕೇವಲ ಪ್ರತಿಭಟನಾ ಮೆರವಣಿಗೆಗೆ ಸೀಮಿತವಾಯಿತು.
Egg throwing issue Ranibennur bandh limited to protest at haveri
Author
Hubli, First Published Aug 23, 2022, 12:34 PM IST

ರಾಣಿಬೆನ್ನೂರು (ಆ.23): ನೆರೆ ಹಾನಿ ವೀಕ್ಷಣೆಗೆ ಕೊಡಗಿಗೆ ತೆರಳಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆಎಸೆದ ಪ್ರಕರಣ ಖಂಡಿಸಿ ಸಿದ್ದರಾಮಯ್ಯನವರ ಸರ್ವ ಜನಾಂಗಗಳ ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರ ಕರೆ ನೀಡಲಾಗಿದ್ದ ಬಂದ್‌ ಪ್ರತಿಭಟನಾ ಮೆರವಣಿಗೆಗೆ ಸೀಮಿತವಾಯಿತು. ನಗರದ ಕೆಇಬಿ ವಿನಾಯಕ ದೇವಸ್ಥಾನದ ಬಳಿ ಬೆಳಗ್ಗೆ 11ಗಂಟೆಯ ವೇಳೆ ಪ್ರತಿಭಟನಾ ಮೆರವಣಿಗೆಗೆ ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಚಾಲನೆ ನೀಡಿ ಮಾತನಾಡಿ, ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಒಳಗಾದ ಜನರ ಗೋಳು ಆಲಿಸಲು ತೆರಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆಎಸೆದಿರುವುದು ಖಂಡನಾರ್ಹ. ಅವರಿಗೆ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ವಿಪಕ್ಷ ನಾಯಕನ ಪರಿಸ್ಥಿತಿ ಈ ರೀತಿಯಾದರೆ ಸಾಮಾನ್ಯ ಜನರ ಪಾಡೆನು. ಎಲ್ಲ ರಂಗಗಳಲ್ಲಿಯೂ ವಿಫಲವಾಗಿರುವ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿ ಇಂತಹ ಹೇಯ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದರು.

Agnipath recruitment rally: ಹಾವೇರಿಯಲ್ಲಿ ಸೆ.1ರಿಂದ ಆರಂಭ

ತಾಲೂಕು ಕುರುಬ ಸಮಾಜದ ಅಧ್ಯಕ್ಷ ಷಣ್ಮುಕಪ್ಪ ಕಂಬಳಿ ಮಾತನಾಡಿ, ಮೊಟ್ಟೆಎಸೆತ ಪ್ರಕರಣದ ಆರೋಪಿ ಸಂಪತ್‌ನನ್ನು ಕೂಡಲೇ ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಬೇಕು. ಅವನಿಗೆ ಕುಮ್ಮಕ್ಕು ನೀಡುತ್ತಿರುವ ಸಂಘ ಮತ್ತು ವ್ಯಕ್ತಿಗಳು ಬಲಾಢ್ಯರಾಗಿರುವುದರಿಂದ ಅವರ ಮೇಲೆ ಸಿಬಿಐ ತನಿಖೆ ಆಗಬೇಕು, ಅಸಮರ್ಥ ಹಾಗೂ ನಿಷ್ಕಾಳಜಿ ಗೃಹ ಸಚಿವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಎಲ್ಲರಿಗೂ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ನಂತರ ಅಲ್ಲಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಸ್‌ ನಿಲ್ದಾಣದ ವೃತ್ತ, ಸ್ಟೇಷನ್‌ ರಸ್ತೆ, ಪೋಸ್ಟ್‌ ಸರ್ಕಲ್‌, ದುರ್ಗಾ ಸರ್ಕಲ್‌, ಕುರುಬಗೇರಿ ಕ್ರಾಸ್‌, ಹಳೆ ಪಿ.ಬಿ. ರಸ್ತೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತಲುಪಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಪೊಲೀಸರು ಬಿಗಿ ಬಂದೋಬಸ್‌್ತ ವ್ಯವಸ್ಥೆ ಮಾಡಿದ್ದರು.

ಈ ವೇಳೆ ಕಾಂಗ್ರೆಸ್‌ ಮುಖಂಡ ಪ್ರಕಾಶ ಕೋಳಿವಾಡ, ಏಕನಾಥ ಭಾನುವಳ್ಳಿ, ರುಕ್ಮಿಣಿ ಸಾವಕಾರ, ಸಿದ್ದಪ್ಪ ಬಾಗಿಲದವರ, ಶೇಖಪ್ಪ ಹೊಸಗೌಡರ, ಹುಚ್ಚಪ್ಪ ಮೆಡ್ಲೇರಿ, ಮೃತ್ಯುಂಜಯ ಗುದಿಗೇರ, ಜಟ್ಟೆಪ್ಪ ಕರೇಗೌಡರ, ಡಾ. ಪ್ರವೀಣ ಖನ್ನೂರ, ಬಸವರಾಜ ಹುಚಗೊಂಡರ, ಹನುಮಂತಪ್ಪ ಕಬ್ಬಾರ, ಸಿದ್ದಣ್ಣ ಅಂಬಲಿ, ಸುರೇಶ ಜಡಮಲಿ, ರತ್ನಾಕರ ಕುಂದಾಪುರ, ಶೇರು ಕಾಬೂಲಿ, ನೂರಜಹಾನ ನಂದ್ಯಾಲ, ಶಿರಿನ್‌ತಾಜ್‌ ಶೇಖ್‌, ಆನಂದ ಹುಲ್ಬನಿ, ಮಂಜನಗೌಡ ಪಾಟೀಲ, ರವೀಂದ್ರಗೌಡ ಪಾಟೀಲ, ಮಹೇಶ ಹುಲ್ಲತ್ತಿ, ಕುಮಾರ ಹುಲ್ಲತ್ತಿ, ಸಣ್ಣತಮ್ಮಪ್ಪ ಬಾರ್ಕಿ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಟೈರ್‌ಗೆ ಬೆಂಕಿ ಹಚ್ಚಿ ಪುಂಡಾಟ ಮೆರೆದ ಕಾಂಗ್ರೆಸ್ ಕಾರ್ಯಕರ್ತರು; ಪೊಲೀಸರಿಗೂ ಡೋಂಟ್ ಕೇರ್!

ನಡೆಯದ ಬಂದ್‌: ಪ್ರತಿಭಟನೆ ಹಿನ್ನೆಲೆಯಲ್ಲಿ ನೀಡಲಾಗಿದ್ದ ಬಂದ್‌ ಕರೆಗೆ ಜನರಿಂದ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮೆರವಣಿಗೆ ಪ್ರಾರಂಭಕ್ಕೂ ಮುನ್ನ ಸಂಘಟನೆಯ ಕೆಲವು ಯುವಕರು ಬೈಕ್‌ ಹಾಗೂ ಆಟೋಗಳಲ್ಲಿ ತೆರಳಿ ನಗರದ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳನ್ನು ಬಂದ್‌ ಮಾಡಿಸಿದ್ದರು. ಆದರೆ, ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ ಬಂದ್‌ ಆಗಿದ್ದ ವರ್ತಕರು ಅಂಗಡಿಗಳ ಬಾಗಿಲು ತೆರೆದು ಎಂದಿನಂತೆ ವಹಿವಾಟು ಪ್ರಾರಂಭಿಸಿದರು

Follow Us:
Download App:
  • android
  • ios