ಬಾಬ್ರಿ ಮಸೀದಿ ತೀರ್ಪು: 'ಸತ್ಯಕ್ಕೇ ಜಯ' ಎಂಬ ಶ್ರೀರಾಮನ ಧ್ಯೇಯವಾಖ್ಯಕ್ಕೆ ಪೂರಕವಾಗಿದೆ'
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪತ್ರಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, (ಸೆ.30): ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಇಂದು ನೀಡಿದ ತೀರ್ಪು ಐತಿಹಾಸಿಕವಾಗಿದೆ ಮತ್ತು “ಸತ್ಯಕ್ಕೇ ಜಯ” ಎಂಬ ಶ್ರೀ ರಾಮನ ಧ್ಯೇಯವಾಖ್ಯಕ್ಕೆ ಪೂರಕವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ಮಾತನಾಡಿದ ಅವರು, ಸತ್ಯ ಎಂದಿಗೂ ಸತ್ಯವೇ, ಬಿಜೆಪಿಯು ಇದನ್ನೇ ಮೊದಲಿನಿಂದಲೂ ಪ್ರತಿಪಾದಿಸುತ್ತಿತ್ತು. ಈಗ ನ್ಯಾಯದೇವತೆಯೂ ನಮ್ಮ ನಂಬಿಕೆಯನ್ನು ಸಾಕ್ಷಾತ್ಕರಿಸಿದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಾಬರಿ ಮಸೀದಿ ತೀರ್ಪು: ಯಾರು, ಏನು ಹೇಳಿದರು..?
ನಮ್ಮ ಹಿರಿಯ ಮುತ್ಸದ್ಧಿ ನಾಯಕರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್ ಮುಂತಾದವರನ್ನು ಈ ಪ್ರಕರಣದ ಷಡ್ಯಂತ್ರದಲ್ಲಿ ಸಿಲುಕಿಸುವ ದೊಡ್ಡ ರಾಜಕೀಯ ಹುನ್ನಾರವೇ ನಡೆದಿತ್ತು. ಆದರೆ ಈ ನ್ಯಾಯ ನಿರ್ಣಯದಿಂದಾಗಿ ಪಟ್ಟಭದ್ರರಿಗೆ ಮುಖಭಂಗವಾಗಿದೆ ಎಂದರು.
ಪ್ರಾಮಾಣಿಕ ಸೇವೆ ಮತ್ತು ಆದರ್ಶ ನಡೆನುಡಿಗಳ ಉತ್ತಮ ಆಡಳಿತಕ್ಕೆ ನಮ್ಮಲ್ಲಿ “ರಾಮರಾಜ್ಯ” ಎಂದು ಕರೆಯುವುದು ರೂಢಿ. ಅದೇರೀತಿ ಇತ್ತೀಚೆಗೆ ರಾಮಮಂದಿರದ ನಿರ್ಮಾಣಕ್ಕೆ ಅನುಮತಿ ನೀಡಿದ ಮತ್ತು ಈಗ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿ ನೀಡಲಾದ ತೀರ್ಪುಗಳು “ರಾಮರಾಜ್ಯ”ದ ಪರಿಕಲ್ಪನೆಗೆ ಪೂರಕವಾಗಿಯೇ ಇದೆ ಎಂಬುದು ನನ್ನಂತಹ ಅನೇಕರ ಅನಿಸಿಕೆ ಎಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
ಪವಿತ್ರವಾದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರವನ್ನು ನಿರ್ಮಿಸಬೇಕೆಂಬ ನಿಟ್ಟಿನಲ್ಲಿ ಅನೇಕ ಮುಖಂಡರು, ಸಾಧುಸಂತರು, ಕರಸೇವಕರು, ಶ್ರೀ ರಾಮನ ಭಕ್ತರು ಮತ್ತು ಬಿಜೆಪಿಯ ಸಮಸ್ತರೂ ಹಲವು ವರ್ಷಗಳಿಂದ ಹೋರಾಟ, ತ್ಯಾಗ ಬಲಿದಾನಗಳನ್ನು ಕೈಗೊಂಡಿದ್ದರು. ಈ ಎಲ್ಲಾ ಹೋರಾಟಗಳಿಗೆ ಈ ತೀರ್ಪಿನಿಂದಾಗಿ ಮತ್ತೊಮ್ಮೆ ಮೌಲ್ಯ ಹೆಚ್ಚಿದಂತಾಗಿದೆ. ಅತ್ಯಂತ ಸಹನೆಯಿಂದ, ಅಧ್ಯಯನಗಳಿಂದ ಈ ವಿದ್ವತ್ಪೂರ್ಣ ತೀರ್ಪು ಹೊರಹೊಮ್ಮಿದೆ ಎಂದು ಹೇಳಿದ ಶ್ರೀ ಸವದಿ ಅವರು, ತೀರ್ಪು ನೀಡಿದ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ.