ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿಕೆ ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ತಮ್ಮ ಅಭಿಮಾನಿಗಳು ಖಡಕ್ ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ.
ಬೆಂಗಳೂರು, (ಆ.11): ನನ್ನ ಹೆಸರನ್ನು ಬಳಸಿಕೊಂಡು ಯಾರೂ ಕೂಡಾ ಅಭಿಮಾನಿಗಳ ಸಂಘ, ಟ್ರಸ್ಟ್, ಮತ್ತಿತರ ಸಂಘಟನೆಗಳನ್ನು ಮಾಡಿಕೊಳ್ಳುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಮ್ಮ ಬೆಂಬಲಿಗರಿಗೆ ಕಟ್ಟಪ್ಪಣೆ ಮಾಡಿದ್ದಾರೆ.
ಈಗಾಗಲೇ ಅಸ್ತಿತ್ವದಲ್ಲಿರುವ ಎಂ.ಎಸ್ ಅಂಗಡಿ ನೇತೃತ್ವದ ಅಖಿಲ ಕರ್ನಾಟಕ ಡಿ.ಕೆ ಶಿವಕುಮಾರ್ ಅಭಿಮಾನಿಗಳ ಸಂಘವನ್ನು ಹೊರತುಪಡಿಸಿ ಉಳಿದವುಗಳನ್ನು ಈ ಕ್ಷಣದಿಂದಲೇ ವಿಸರ್ಜಿಸಬೇಕು ಎಂದು ಸೂಚಿಸಿದ್ದಾರೆ.
ಡಿಕೆ ಶಿವಕುಮಾರ್ಗೆ ಮಂಗಳಮುಖಿಯರಿಂದ ಸಿಕ್ತು ಗ್ರ್ಯಾಂಡ್ ವೆಲ್ಕಮ್
ಒಂದೊಮ್ಮೆ ಯಾರಾದರೂ ನನ್ನ ಹಾಗೂ ನನ್ನ ಸಹೋದರ ಡಿ ಕೆ ಸುರೇಶ್ ಹೆಸರಿನ ಸಂಘ ಸಂಸ್ಥೆಗಳ ಮೂಲಕ ಚಟುವಟಿಕೆ ನಡೆಸಿದರೆ, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿ.ಕೆ ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿಕೆ ಶಿವಕುಮಾರ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದೆಲ್ಲೆಡೆ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಆದ್ರೆ, ಇದರ ಮಧ್ಯೆ ತಮ್ಮ ಅಭಿಮಾನಿಗಳಿಗೆ ಕೊಟ್ಟಿರುವ ಈ ಎಚ್ಚರಿಕೆ ಭಾರೀ ಕುತೂಹಲ ಕೆರಳಿಸಿದೆ.
