ದುಷ್ಕೃತ್ಯ ನಡೆಸುವ ಪಿ.ಎಫ್.ಐ ಸಂಘಟನೆಯ ಜೊತೆಗೆ ಬಜರಂಗದಳವನ್ನು ಹೋಲಿಸಿ ನಿಷೇಧ ಮಾಡುತ್ತೇವೆ ಎಂದಿರುವ ಕಾಂಗ್ರೆಸ್, ತಾಕತ್ತಿದ್ದರೇ ಬಜರಂಗದಳವನ್ನು ನಿಷೇಧಿಸಲಿ.

ಉಡುಪಿ (ಮೇ 3): ಸಮಾಜದಲ್ಲಿ ಅಶಾಂತಿಯನ್ನು ಸೃಷಿಸಿ ಗಲಭೆ ನಡೆಸುತ್ತಿದ್ದ ಪಿ.ಎಫ್.ಐ ಸಂಘಟನೆ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ತನಿಖೆಯ ಮೂಲಕ ಬಹಿರಂಗವಾಗಿದೆ. ಇಂತಹ ದುಷ್ಕೃತ್ಯ ನಡೆಸುವ ಪಿ.ಎಫ್.ಐ ಸಂಘಟನೆಯ ಜೊತೆಗೆ ಬಜರಂಗದಳವನ್ನು ಹೋಲಿಸಿ ನಿಷೇಧ ಮಾಡುತ್ತೇವೆ ಎಂದಿರುವ ಕಾಂಗ್ರೆಸ್, ತಾಕತ್ತಿದ್ದರೇ ಬಜರಂಗದಳವನ್ನು ನಿಷೇಧಿಸಲಿ. ತಕ್ಕ ಉತ್ತರವನ್ನು ಕೊಡಲು ನಾವು ಸಿದ್ದರಿದ್ದೇವೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್ ಸವಾಲೆಸೆದರು. 

ಉಡುಪಿಯ ಖಾಸಗಿ ಹೋಟೆಲಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೇಯ ವಾಕ್ಯದೊಂದಿಗೆ ಹಿಂದುತ್ವಕ್ಕೋಸ್ಕರ, ಗೋ ರಕ್ಷಣೆ, ಲವ್ ಜಿಹಾದ್ ನ ವಿರುದ್ದ ಹೋರಾಡುತ್ತಿರುವ ಸಂಘಟನೆಯನ್ನು ನಿಷೇಧಿಸಲು ಹೊರಟಿರುವ ಕಾಂಗ್ರೆಸ್ ಗೆ ಇಡೀ ಹಿಂದು ಸಮುದಾಯ ಉತ್ತರ ನೀಡಬೇಕಾಗಿದೆ ಎಂದು ಕರೆ ನೀಡಿದರು. ಯಾವುದೇ ರೇಪ್ ಮಾಡದೇ, ದರೋಡೆ ಮಾಡದಿರುವ ಬಜರಂಗದಳ ಸಂಘರ್ಷದಿಂದಲೇ ಹುಟ್ಟಿರುವುದು. ಧರ್ಮ, ದೇಶಕ್ಕೋಸ್ಕರ ಕೇಸುಗಳನ್ನು ದಾಖಲಿಸಿಕೊಂಡು, ಅನೇಕ ಬಜರಂಗದಳ ಕಾರ್ಯಕರ್ತರು ರೌಡಿಶೀಟರ್ ಗಳಾಗಿದ್ದಾರೆ. ಇಂತಹ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂಬ ಪ್ರಣಾಳಿಕೆಯನ್ನು ಕಾಂಗ್ರೆಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು. 

ಬಜರಂಗದಳ ಬ್ಯಾನ್: ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್‌ ನಾಯಕರು!

ಚುನಾವಣಾ ಸಮೀಪಿಸುತ್ತಿದ್ದಂತೆ ದೇವಸ್ಥಾನ ತೆರಳಿ ಯಾಗ ನಡೆಸಿ, ಕೇಸರಿ ಶಾಲು ಧರಿಸುವ ಕಾಂಗ್ರೆಸಿಗರು, ಮುಸಲ್ಮಾನರ ಓಲೈಕೆಗಾಗಿ ಬಜರಂಗದಳವನ್ನು ನಿಷೇಧಿಸಲು ಹೊರಟಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ಮಂಗಳೂರು ಜಿ.ಸಂಚಾಲಕ ನವೀನ್, ಉಡುಪಿ ಜಿ.ಸಂಚಾಲಕ ಚೇತನ್ ಪೇರಳ್ಕೆ, ಜಿ.ಕಾರ್ಯದರ್ಶಿ ದಿನೇಶ್ ಮೆಂಡನ್, ಮಂಗಳೂರು ವಿಭಾಗ ಸಂಚಾಲಕ ಭುಜಂಗ ಕುಲಾಲ್, ಸಹ ಸಂಚಾಲಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯ ನಂತರ ನಗರದ ರಾಷ್ಟ್ರೀಯ ಹೆದ್ದಾರಿ 169 ಎ ಕಡಿಯಾಳಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯನ್ನು ಸುಟ್ಟು ಹಾಕಿದರು.

ನಾಳೆ ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ ಪಠಣ: ಬೆಂಗಳೂರು (ಮೇ 3): ಭಜರಂಗದಳ ನಿಷೇಧದ ಕಾಂಗ್ರೆಸ್ ಪ್ರಣಾಳಿಕೆ ವಿರುದ್ದ ಹಿಂದೂ ಮುಖಂಡರು ಕೆಂಡ ಕಾರಿದ್ದು, ರಾಜ್ಯಾದ್ಯಂತ ಕಾಂಗ್ರೆಸ್ ಸೋಲಿಸಲು ಫೀಲ್ಡಿಗಿಳಿಯಲು ಭಜರಂಗದಳ ಕರೆ ನೀಡಿದೆ. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ಬ್ಯಾನ್‌ ಮಾಡುವುದಾಗಿ ಹೇಳಿದ್ದು, ಇದು ಇದೀಗ ಕೇಸರಿ ಪಡೆಗೆ ಅಸ್ತ್ರವಾಗಿದೆ. ಅಲ್ಲದೇ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಭಜರಂಗದಳ ಅಭಿಯಾನ ಆರಂಭಿಸಿದ್ದು, ನಾಳೆ ಸಂಜೆ ಏಳು ಗಂಟೆಗೆ ರಾಜ್ಯಾದ್ಯಂತ ಸಾಮೂಹಿಕ ಹನುಮಾನ್‌ ಚಾಲೀಸಾ ಪಠಣಕ್ಕೆ ಕರೆ ಕೊಡಲಾಗಿದೆ.

ಈ ಮೂಲಕ ಬಿಜೆಪಿಗೆ ಮತ್ತೊಂದು ಹಿಂದುತ್ವದ ಅಸ್ತ್ರ ಸಿಕ್ಕಂತಾಗಿದೆ. ಇನ್ನೂ ಈ ಬಗ್ಗೆ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್‌ಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಅವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಇದು ಅವರ ತಿರುಕನ ಕನಸು, ಬಂದ್ರೆ ತಾನೇ ಬ್ಯಾನ್‌ ಮಾಡೋದು ಎಂದು ಬಿಎಸ್‌ವೈ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಭಜರಂಗದಳ ಬ್ಯಾನ್ ಮಾಡೋಕಾಗಲ್ಲ, ಕಾಂಗ್ರೆಸ್ ಧೀಮಂತ ನಾಯಕನ ಹಿಂದೇಟು

ಮಂಗಳೂರಿನಲ್ಲಿ ಪ್ರಣಾಳಿಕೆ ಸುಟ್ಟು ಪ್ರತಿಭಟನೆ: ಇನ್ನು ನಿನ್ನೆ ಮಂಗಳೂರು ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಛೇರಿ ಬಳಿ ಭಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಚುನಾವಣೆ ಯಲ್ಲಿ‌ನೇರ ಹೋರಾಟಕ್ಕಿಳಿಯುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮನೆ ಮನೆ ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್ ಧಮ್ ಇದ್ದರೆ ಭಜರಂಗದಳ ವನ್ನು ನಿಷೇಧ ಮಾಡಲಿ. ಭಜರಂಗದಳ ದ ಕಾರ್ಯ ಚಟುವಟಿಕೆಯನ್ನು ನಿಷೇಧದ ಅಂಕುಶ ಹಾಕಿ ನಿಲ್ಲಿಸೋಕೆ ಸಾಧ್ಯವಿಲ್ಲ. ಪ್ರತಿಭಟನೆಯಲ್ಲಿ ಭಜರಂಗದಳ ಮುಖಂಡರಿಂದ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದೆ.